ಮೂಡಲಗಿ: ‘ದು:ಖಿತರಿಗೆ ಹೇಳುವ ಸಾಂತ್ವನವು ಸಮಾಜದಲ್ಲಿ ಬಹುದೊಡ್ಡ ಮೌಲ್ಯವಾಗಿದೆ’ ಎಂದು ಹಾರೂಗೇರಿಯ ಎಸ್ವಿಎಸ್ ಕಾಲೇಜು ಪ್ರಾಚಾರ್ಯ, ಸಾಹಿತಿ ಡಾ. ವಿ.ಎಸ್. ಮಾಳಿ ಹೇಳಿದರು.
ಸಮೀಪದ ಇಟ್ನಾಳ ಗ್ರಾಮದಲ್ಲಿ ಕಳೆದ ವರ್ಷ ಕೋವಿಡ್ದಿಂದ ಅಕಾಲಿಕ ನಿಧನರಾದ ಡಾ. ಮಲ್ಲಪ್ಪ ಕುರಿ ಅವರ ಕುಟಂಬಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್ದಿಂದ ರೂ. 75 ಸಾವಿರ ಸಹಾಯ ಧನದ ಚೆಕ್ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಧ್ಯಾಪಕರ ಪರಿಷತ್ ಕಾರ್ಯವು ಮಾದರಿ ಮತ್ತು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಬೆಳೆದ ಮಗನನ್ನು ಕಳೆದುಕೊಂಡ ದು:ಖದಲ್ಲಿರುವ ಮಲ್ಲಪ್ಪ ಕುರಿ ಅವರ ತಂದೆ, ತಾಯಿ ಅವರಿಗೆ ಸಾಂತ್ವನದ ಮಾತುಗಳಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ವಿನಮ್ರತೆಯ ಕಾರ್ಯ ನಮ್ಮದಾಗಿದೆ. ಇಲ್ಲಿ ಸಹಾಯಧನವು ನೆಪಕ್ಕೆ ಮಾತ್ರವಾಗಿದೆ. ಕುಟಂಬದವರಿಗೆ ಆಗಿರುವ ದು:ಖವನ್ನು ಅಳಿಸುವ ಕಾರ್ಯವು ಮಾನವೀಯತೆಯ ಇನ್ನೊಂದು ಮುಖವಾಗಿದೆ ಎಂದರು.
ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ ಡಾ. ಸಂಗಮನಾಥ ಲೋಕಾಪುರ ಮಾತನಾಡಿ ಅಧ್ಯಾಪಕರ ಪರಿಷತ್ ನಡೆ ನೊಂದ ಅಧ್ಯಾಪಕರ ಕಡೆ ಎನ್ನುವ ರೀತಿಯಲ್ಲಿ ಪರಿಷತ್ವು ಕೆಲಸ ಮಾಡುವ ಮೂಲಕ ಪರಿಷತ್ವು ಸಂಘಟನೆಯು ಸಂಬಂಧಗಳನ್ನು ಗಟ್ಟಿಮಾಡುತ್ತಲಿದೆ ಎಂದರು.
ಬೆಳಗಾವಿಯ ಅಂಜುಮನ ಕಾಲೇಜು ಪ್ರಾಚಾರ್ಯ ಡಾ. ಎಚ್.ಐ. ತಿಮ್ಮಾಪುರ ಮಾತನಾಡಿ ಡಾ. ಮಲ್ಲಪ್ಪ ಕುರಿ ಪ್ರತಿಭಾವಂತ ಸಂಶೋಧಕರಾರಿಗಿದ್ದರಲ್ಲದೆ ಕ್ರೀಯಾಶೀಲರಾಗಿದ್ದರು ಎಂದರು.
ಅಧ್ಯಾಪಕರ ಪರಿಷತ್ ಅಧ್ಯಕ್ಷ ಡಾ. ಎಸ್.ಐ. ಬಿರಾದಾರ ಹಾಗೂ ಸಾನ್ನಿಧ್ಯ ವಹಿಸಿದ್ದ ಸಿದ್ದೇಶ್ವರ ಶರಣರು ಮಾತನಾಡಿದರು. ಪರಿಷತ್ ಕಾರ್ಯದರ್ಶಿ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತನಾಡಿದರು.
ಗ್ರಾಮದ ಪ್ರಮುಖರಾದ ಕಂಕಣವಾಡಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಡಾ. ಮಹಾದೇವ ಪೋತರಾಜ, ಶಾನೂರ ಎಂ. ಐಹೊಳೆ, ಎಂ.ಬಿ. ಕುಲಮಾರ ಇದ್ದರು.