ಸಿಂದಗಿ: ಸರಕಾರದ ತುಲನಾತ್ಮಕ ಅಂಶಗಳನ್ನು ಅರಿತು ವಾಲ್ಮೀಕಿ ಸಮುದಾಯದ ಶ್ರೀಗಳು, ಮುಖಂಡರು ತೀವ್ರ ಹಿಂದುಳಿದ ತಳವಾರ-ಪರಿವಾರ ಸಮುದಾಯದ ಏಳಿಗೆಗೆ ಪೂರಕವಾದ ಸರ್ಕಾರದ ಕ್ರಮವನ್ನು ಪ್ರಶ್ನಿಸದೇ ಸಹಕಾರವನ್ನು ನೀಡಬೇಕು. ಎರಡೂ ಸಮುದಾಯ ಭ್ರಾತೃತ್ವ ಭಾವದಿಂದ ಮುನ್ನಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಆದ ಕಾರಣ ವಾಲ್ಮೀಕಿ ಸಮುದಾಯ ಈ ವಿಷಯದಲ್ಲಿ ವಿರೋಧ ವ್ಯಕ್ತಪಡಿಸುವುದು ತರವಲ್ಲ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಗೌತಮ್ ಚೌಧರಿ ಕುಟುಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಳವಾರ ಮತ್ತು ಪರಿವಾರ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ, ವಾಲ್ಮೀಕಿ ಸಮುದಾಯದ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ಖೇದಕರ. ಏಕೆಂದರೆ ತಳವಾರ-ಪರಿವಾರ ಸಮುದಾಯ ತುಂಬಾ ಹಿಂದುಳಿದ ಜನಾಂಗಕ್ಕೆ ಸೇರಿದ್ದು, ಇದೂ ಸಹ ಶೋಷಿತ ಸಮುದಾಯವಾಗಿದೆ.
ಈ ವರ್ಗದ ಬಹುತೇಕರು ಕಡು ಬಡತನದಲ್ಲಿ ಬದುಕು ಸವೆಸುತ್ತಿದ್ದಾರೆ. ಹೀಗಿರುವಾಗ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಬಹುಕಾಲದಿಂದ ಈ ಸಮುದಾಯ ನಡೆಸುತ್ತಿರುವ ಹೋರಾಟ ನ್ಯಾಯೋಚಿತವಾಗಿಯೇ ಇದೆ, ಇದರಿಂದಾಗಿಯೇ ಮಾನ್ಯ ಮುಖ್ಯಮಂತ್ರಿಗಳು ಈ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ತಳವಾರ-ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ವಿತರಿಸುವಂತೆ ಕ್ರಮ ಕೈಗೊಂಡಿದ್ದಾರೆ ಎಂದು ವಿವರಣೆ ನೀಡಿ ಸ್ಪಷ್ಟಪಡಿಸಿದ್ದಾರೆ.