ಮೂಡಲಗಿ: ಶಿಕ್ಷಕರ ಪಾತ್ರ ಕೇವಲ ಶೈಕ್ಷಣಿಕ ವಾಗಿ ಅಲ್ಲದೆ ಸಾಮಾಜಿಕವಾಗಿಯೂ ಪ್ರಮುಖವಾಗಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಿರುತ್ತಾರೆ. ಶಿಕ್ಷಕರು ಎಲ್ಲಾ ಸಾಮಾಜಿಕ ಕಾರ್ಯಗಳಿಗೂ ಬೇಕು. ಇದು ಸರ್ಕಾರಕ್ಕೆ ಅನಿವಾರ್ಯ ಎಂದು ಮೂಡಲಗಿ ತಹಶೀಲ್ದಾರ ಡಿ.ಜಿ. ಮಹಾತ್ ಹೇಳಿದರು.
ರವಿವಾರ ಪಟ್ಟಣದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಜರುಗಿದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರು ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ವಿದ್ಯಾದಾನದ ಮೂಲಕ ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ಕೊಡುಗೆ ನೀಡಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಂತಹವರು.ಶಿಕ್ಷಕ ವೃತ್ತಿ ಬದುಕಿನ ಜೊತೆಯಲ್ಲಿ ಪ್ರವಾಹ ಕೋವಿಡ್-19 ಸಂದರ್ಭ ಹಾಗೂ ಸರಕಾರದ ವಿವಿಧ ಯೋಜನೆಗಳನ್ನು ತಳ ಹಂತದ ಮಟ್ಟಕ್ಕೆ ಮಾಹಿತಿ ಹಾಗೂ ಸಂವಹನ ಸಾಧಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಶಿಕ್ಷಕರಿಂದ ಮಾತ್ರ ಮಗುವಿನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುವದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕೃಷಿಕ ಸೈನಿಕ ಶಿಕ್ಷಕ ವೃತ್ತಿಗಳು ಗೌರವಯುತವಾದ ಸ್ಥಾನವನ್ನು ಹೊಂದಿವೆ. ಪ್ರಬುದ್ಧ ಸಮಾಜ ನಿರ್ಮಾಣಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾಗಿದೆ. ಕೆ.ಎಮ್.ಎಫ್ ಅಧ್ಯಕ್ಷರು ಅರಭಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಸತತ ಪ್ರಯತ್ನ ಹಾಗೂ ಕೊಡುಗೆಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಮೂಡಲಗಿ ವಲಯ ಮಿಂಚುವಲ್ಲಿ ಸಹಾಯಕರಾಗಿದ್ದಾರೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿಸಿ ಕಲಿಸಿದ ಪ್ರತಿ ಗುರುವಿಗೂ ನಮನ ಸಲ್ಲಿಸಿ ಗುರುವಿನ ಸ್ಮರಣೆ ಮಾಡಿ ಕೃತಜ್ಞತೆ ತೋರಿಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಗುರಿ ಮುಂದೆ ಗುರು ಹಿಂದೆ ಇದರರ್ಥ ನಮ್ಮಯ ಪ್ರತಿಯೊಂದು ಗುರಿ ಜಯಿಸಬೇಕಾದರೆ ಗುರಿವಿನ ಮಾರ್ಗದರ್ಶನ ಅತ್ಯಾವಶ್ಯಕವಾಗಿದೆ ಎಂದರು.
ತಜ್ಞ ವೈದ್ಯ ಡಾ.ಆರ್.ಎಸ್ ಬೆಣಚನಮರಡಿ, ಬಿ.ಬಿ ಹೊಸಮನಿ ಪ್ರತಿಷ್ಠಾನದ ಪರಮೇಶ್ವರ ಹೊಸಮನಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಅತ್ಯವಶ್ಯಕವಾಗಿದೆ. ಸಮಾಜವನ್ನು ತಿದ್ದಿ ನಡೆಸುವ ಮಹತ್ವದ ಕಾರ್ಯ ಶಿಕ್ಷಕರ ಮೇಲಿದೆ. ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ನಿಷ್ಕಲ್ಮಶ ಶರೀರ, ಮನಸ್ಸು ಆಚಾರ ವಿಚಾರಗಳನ್ನು ಬೆಳೆಸುವ ಮೂಲಕ ಕಟ್ಟಬೇಕು. ಪರಸ್ಪರ ಹೊಂದಾಣಿಕೆ ಮೂಲಕ ಮಕ್ಕಳ ಅಭಿವೃದ್ಧಿಯಾಧರಿಸಿ ಶ್ರಮವಹಿಸಿದಾಗ ಮಾತ್ರ ಶಿಕ್ಷಣಕ್ಕೆ ಅಮೂಲ್ಯ ಅರ್ಥ ಬರುವುದಾಗಿ ತಿಳಿಸಿದರು.
ಸಾಹಿತಿ ಡಾ. ಮಹದೇವ ಜಿಡ್ಡಮನಿಯವರಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನಾಚರಣೆಯ ಪ್ರಯುಕ್ತ ಶಿಕ್ಷಕರ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಕರ ದಿನಾಚರಣೆ ನಿಮಿತ್ತವಾಗಿ ಉತ್ತಮ ಸ್ಕೌಟ ಗೈಡ್ಸ್ ಶಿಕ್ಷಕರು, ನಿವೃತ್ತ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಸತಿ ಶಾಲೆಗಳಿಗೆ ಆಯ್ಕೆಯಾಗಿರುವ ಶಾಲೆಗಳು, ಭೂದಾನಿಗಳು, ರೂ. 50000 ಕ್ಕೂ ಹೆಚ್ಚಿನ ದೇಣಿಗೆ ಪಡೆದ ಶಾಲೆಗಳು, ಉತ್ತಮ ಸಿಆರ್ಪಿ, ದಿ. ವಾಯ್.ಎಲ್ ಸಣ್ಣಕ್ಕಿ ಮೆಮೋರಿಯಲ ಟ್ರಸ್ಟ, ಚೈತನ್ಯ ಗ್ರೂಪ್ಸ್, ಡೆಪೂಟಿ ಚನ್ನಬಸಪ್ಪ ಪ್ರತಿಷ್ಠಾನ, ಕೆ.ಎಚ್ ಸೋನವಾಲಕರ ಚಾರಿಟೇಬಲ ಟ್ರಸ್ಟ್, ಮಾತೃಭೂಮಿ ಫೌಂಡೇಶನ್, ಬಿ.ಬಿ ಹೊಸಮನಿ ಪ್ರತಿಷ್ಠಾನ, ಅಂಜುಮನ್ ಇಸ್ಲಾಮಿಕ್ ಕಮಿಟಿ, ಮಹಾಲಕ್ಷ್ಮೀ ವಿದ್ಯಾವರ್ಧಕ ಪ್ರತಿಷ್ಠಾನ, ಅನುದಾನಿತ ಪ್ರಾಥಮಿಕ ಪ್ರೌಢ ಸಂಘಗಳವತಿಯಿಂದ ಶಿಕ್ಷಕ ಸಮೂಹ ಹಾಗೂ ದಾನಿಗಳನ್ನು ಪ್ರಶಸ್ತಿ ಪತ್ರ ಹಾಗೂ ಪುಸ್ತಕಗಳನ್ನು ನೀಡುವ ಮೂಲಕ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕರಾದ ನಿಂಗಪ್ಪ ಕುರಬೇಟ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ತಾಪಂ ಇಒ ಸಂದೀಪ ಚೌಗಲಾ, ದೈಹಿಕ ಶಿಕ್ಷಣ ಪರಿವೀಕ್ಷಕ ಜುನೇದಿ ಪಟೇಲ, ವಿವಿಧ ಪ್ರತಿಷ್ಠಾನದ ಎಮ್ ಎಮ್ ಪಾಟೀಲ, ಮಲೀಕ ಹುಣಶ್ಯಾಳ, ಚೈತನ್ಯ ಗ್ರೂಪ್ಸ್, ಸರೋಜಿನಿ ಕುಲಕರ್ಣಿ ಹಾಗೂ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕ ಸಂಘಟನೆಗಳು ಮತ್ತು ಪತ್ತಿನ ಬ್ಯಾಂಕ ಪದಾಧಿಕಾರಿಗಳು ಸನ್ಮಾನಿತ ಶಿಕ್ಷಕರು ಹಾಜರಿದ್ದರು.
ಬಿಇಒ ಅಜಿತ ಮನ್ನಿಕೇರಿ ಸ್ವಾಗತಿಸಿದರು. ಟಿ. ಕರಿಬಸವರಾಜು ನಿರೂಪಿಸಿ, ಸತೀಶ ಬಿ.ಎಸ್ ವಂದಿಸಿದರು.