Homeಲೇಖನಹನುಮನುದಿಸಿದ ತಾಣ ಅಂಜನಾದ್ರಿ ಪರ್ವತ

ಹನುಮನುದಿಸಿದ ತಾಣ ಅಂಜನಾದ್ರಿ ಪರ್ವತ

ಇತ್ತೀಚಿಗೆ ಹನುಮನುದಿಸಿದ ತಾಣ ಕುರಿತಂತೆ ಹತ್ತು ಹಲವು ಚಿಂತನೆಗಳು ಜರುಗುತ್ತಿವೆ. ಅದರಲ್ಲಿ ಅಂಜನಾದ್ರಿ ಬೆಟ್ಟ ಕುರಿತು ಬಹಳಷ್ಟು ಚರ್ಚೆಗಳು ನಡೆದು ಬಂದವು. ಆದರೆ ಸತ್ಯ ಯಾವತ್ತೂ ಸತ್ಯವೇ. ಹನುಮನುದಿಸಿದ ನಾಡ ಅಂಜನಾದ್ರಿ ಪರ್ವತ ಎಂಬುದಕ್ಕೆ ಎರಡು ಮಾತಿಲ್ಲ. “ದೇಶ ಸುತ್ತು ಇಲ್ಲವೇ ಕೋಶ ಓದು” ಎಂಬ ಗಾದೆ ಮಾತು ಇಂದಿನ ಆಧುನಿಕ ಯುಗದಲ್ಲಿ ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಮನುಷ್ಯ ಎಷ್ಟೋ ಅಗಾಧ ವಿಷಯಗಳನ್ನು ದೆಶ ಸುತ್ತುವುದರಿಂದ ತಿಳಿದುಕೊಳ್ಳುತ್ತಾನೆ.ಈ ರೀತಿ ದೇಶ ಸುತ್ತುವುದರಿಂದ ಕೋಶ ಓದಿದಷ್ಟೇ ಜ್ಞಾನ ಸಂಪಾದನೆಯಾಗುತ್ತದೆ. ಅಲ್ಲದೇ ಮನಸ್ಸಿಗೆ ರಂಜನೆ ಆನಂದ ಉಲ್ಲಾಸ ದೊರಕುವುದರ ಜೊತೆಗೆ ಪಾಂಡಿತ್ಯ ಕೂಡ ಬೆಳೆಯುತ್ತದೆ.

ನಾವು ಎಷ್ಟೋ ಸಲ ಕೆಲವು ಪ್ರಸಿದ್ದ ಪ್ರವಾಸೀ ತಾಣಗಳಿಗೆ ಭೇಟಿ ನೀಡುತ್ತೇವೆ. ಆದರೆ ಅಲ್ಲಿಯೇ ಹತ್ತಿರವಿರುವ ಇನ್ನೂ ಅನೇಕ ಎಲೆಮರೆಯ ಕಾಯಿಯಂತೆ ಇರುವ ತಾಣಗಳು ನಮ್ಮ ಕಣ್ಣಿಗೆ ಬೀಳದೇ ಹೋಗುವ ಸಾಧ್ಯತೆಯುಂಟು. ಅಂಥ ಸ್ಥಳಗಳ ಬಗ್ಗೆ ಕೇಳಿ ತಿಳಿದುಕೊಳ್ಳುವ ಮೂಲಕ ಭೇಟಿ ನೀಡಿದಾಗ ಆಗುವ ಸಂತಸ ಹೇಳತೀರದ್ದು ಇತಿಹಾಸ ಪ್ರಸಿದ್ದ ಹಂಪೆ ನೋಡಿದವರೂ ಅದರ ಸಮೀಪವಿರುವ ಆನೆಗೊಂದಿಗೂ ಹೋಗುವುದುಂಟು.

ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಕಿಷ್ಕಿಂದಾ ರೆಸಾರ್ಟ್ ಕೂಡ ಇಲ್ಲಿನ ಮತ್ತೊಂದು ಆಕರ್ಷಣೆ ಗಂಗಾವತಿ ಮೂಲಕ ಕಿಷ್ಕಿಂದಾ ರೆಸಾಟ್ ್ ಮಾರ್ಗದಲ್ಲಿ ಅಂಜನಾದ್ರಿ ಪರ್ವತವಿದೆ. ಇಲ್ಲಿ ಬರುವವರು ಮಾತ್ರ ವಿರಳ ಏಕೆಂದರೆ ಇದೊಂದು ಬೆಟ್ಟ ಪ್ರದೇಶ,ಈ ಬೆಟ್ಟದ ಮೇಲೆ ದೇವಾಲಯ ಕಾಣುತ್ತದೆ.ಕೇವಲ ಮೆಟ್ಟಿಲುಗಳನ್ನೇರುವ ದಮ್ ಇದ್ದವರಿಗೆ ಮಾತ್ರ ಅಂಜನಾ ಪರ್ವತ ನೋಡಲು ಸಾಧ್ಯ. ಇಲ್ಲದಿದ್ದಲ್ಲಿ ಕೆಳಗೆ ನಿಂತು ಬೆಟ್ಟದ ತುದಿಯಲ್ಲಿ ಕಂಡು ಬರುವ ದೇವಾಲಯ ನೋಡಿ ಮುಂದೆ ಸಾಗಬೇಕಷ್ಟೇ.

ನಿಜಕ್ಕೂ ಜೀವನದಲ್ಲಿ ಥ್ರಿಲ್ ಬಯಸುವವರಿಗೆ ಚಾರಣಿಗರು,ಸಾಹಸಿಗರು ದಿಲ್ ಖುಷ್ ಆಗಬೇಕೆಂದರೆ ಒಮ್ಮೆಯಾದರೂ ಅಂಜನಾದ್ರಿ ಪರ್ವತಕ್ಕೆ ಬರಬೇಕು. ಇದು ಗಂಗಾವತಿಯಿಂದ ಕಿಷ್ಕಿಂದಾ ಮಾರ್ಗದಲ್ಲಿ 16 ಕಿ.ಮೀ ಅಂತರದಲ್ಲಿದೆ. ಹುಲಗಿಯಿಂದ ಕೂಡ 15 ಕಿ.ಮೀ ಇದ್ದು ಹುಲಗಿ ಗಂಗಾವತಿ ಮಾರ್ಗದಲ್ಲಿ ಬರುತ್ತದೆ. ಅಂದರೆ ಹುಲಗಿ ಅಥವ ಗಂಗಾವತಿ ಯಾವುದೇ ಮಾರ್ಗದಿಂದಲೂ ಸುಲಭವಾಗಿ ತಲುಪಬಹುದು.ಅಂದರೆ ಸಾರಿಗೆ ವ್ಯವಸ್ಥೆ ಅನುಕೂಲವಿದೆ.

ಈ ಪರ್ವತ ಕೇವಲ ಚಾರಣಕ್ಕಷ್ಟೇ ಸೀಮಿತವಾಗದೇ ಪುರಾಣಕ್ಕೂ ನಂಟನ್ನು ಹೊಂದಿದೆ.ರಾಮಾಯಣ ಕಾಲದ ಘಟನೆಗಳಿಗೆ ಸಾಕ್ಷಿಯಾಗಿ ನೆಲೆ ನಿಂತಿದೆ.ಐತಿಹಾಸಿಕ,ಸಾಂಸ್ಕøತಿಕ ಮತ್ತು ಆಧುನಿಕ ಯಾವುದೇ ಪ್ರವಾಸೀ ತಾಣಗಳನ್ನು ಸುತ್ತಿದರೂ ಮಾನವನ ದೃಷ್ಟಿ ಬದಲಾಗುತ್ತದೆ. ಅವನ ಬುದ್ದಿ ಬೆಳೆಯುತ್ತದೆ ಈ ರೀತಿ ಜ್ಞಾನ ಪರಿವರ್ತನೆಗೆ ಕಾರಣವಾಗುವ ಸ್ಥಳಗಳನ್ನು ಸುತ್ತಲೂ ಹೊಂದಿದ. ರಾಮಾಯಣ ಕಾಲಕ್ಕೆ ವಾನರ ಸೇನೆಯ ತಾಣವಾಗಿದ್ದ ಕಿಷ್ಕಿಂದಾ, ಅಂಜನಾದ್ರಿ, ವಿರುಪಾಪುರದಡ್ಡಿ, ಹನುಮಾಪುರ, ಸನಾಪುರ, ತಿರುಮಲಾಪುರ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡ ಅಂಜನಾದ್ರಿ ಪರ್ವತ ತಾಣವು ಆಂಜನೇಯನ ಜನ್ಮಸ್ಥಳವಾಗಿ ಪ್ರಸಿದ್ದವಾಗಿದೆ.ಇಲ್ಲಿ ಉದ್ಬವ ಆಂಜನೇಯ ವಿಗ್ರಹ ಪೂಜೆಗೊಳ್ಳುತ್ತಿರುವುದು.ಅಷ್ಟೇ ಅಲ್ಲ ರಾಮಾಯಣದಲ್ಲಿ ಬರುವ ವಾನರ ರಾಜ ಕೇಸರಿ ಮತ್ತು ಅವನ ಪತ್ನಿ ಅಂಜನಾದೇವಿಯರ ಪುತ್ರ ಆಂಜನೇಯನ ಜನ್ಮಸ್ಥಳ ಈ ಅಂಜನಾದ್ರಿ ಬೆಟ್ಟ.

ಒಂದು ದಿನ ವಾನರರಾಜ ಕೇಸರಿ ಮತ್ತು ಅಂಜನಾದೇವಿಯರು ತಮ್ಮ ರಾಜ್ಯದ ಸುಮೇರು ಪರ್ವತದ ಮೇಲೆ ವಿಹರಿಸುತ್ತಿದ್ದರು. ಮಂದ ಮಂದವಾಗಿ ವಾಯು ಬೀಸುತ್ತಿತ್ತು. ಹಾಗೆ ಮೃದುವಾಗಿ ಗಾಳಿ ಬೀಸುತ್ತಿರುವಾಗ ಅಂಜನಾದೇವಿಯ ಸೀರೆಯ ಸೆರಗು ಗಾಳಿಗೆ ಮೇಲಕ್ಕೆ ಹಾರಿತು. ಅವಳಿಗೆ ತನ್ನ ದೇಹವನ್ನು ಯಾರೋ ಸ್ಪರ್ಶಿಸುತ್ತಿರುವರೆಂಬ ಅನುಭವವಾಯಿತು. ಅವಳು ತನ್ನ ವಸ್ತ್ರವನ್ನು ಸರಿ ಮಾಡಿಕೊಂಡು ಕೋಪದಿಂದ”  ನನ್ನ ಪಾತಿವೃತ್ಯವನ್ನು ಹಾಳು ಮಾಡುತ್ತಿರುವ ದುಷ್ಟನು ಯಾರು.? ನನ್ನ ಇಷ್ಟ ದೇವರಾದ ಪತಿದೇವ ನನ್ನ ಎದುರಿಗೇ ಇದ್ದಾರೆ. ಯಾವನು ನನ್ನ ಪಾತಿವೃತ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾನೆ ನಾನು ಈಗಲೇ ಶಾಪವನ್ನು ಕೊಟ್ಟು ಅವನನ್ನು ಭಸ್ಮ ಮಾಡುತ್ತೇನೆ ಎಂದು ಕೋಪದಿಂದ ಅವಳಾಡಿದ ಮಾತಿಗೆ ಪ್ರತಿಯಾಗಿ ವಾಯುದೇವನೇ ಹೇಳುತ್ತಿದ್ದಾನೆಂಬಂತೆ ಅವಳಿಗೆ ಭಾಸವಾಗಿ “ದೇವೀ ನಾನು ನಿನ್ನ ವ್ರತವನ್ನು ಕೆಡಿಸಲಿಲ್ಲ. ದೇವೀ ನಿನಗೆ ನನ್ನಷ್ಟೇ ತೇಜಸ್ವಿ ಮತ್ತು ಬಲಶಾಲಿಯಾದ ಹಾಗೂ ಬುದ್ದಿಶಕ್ತಿಯಲ್ಲಿ ಅದ್ವಿತೀಯನಾದ ಮಗನು ಜನಿಸುತ್ತಾನೆ ಅವನು ಭಗವಂತನ ಸೇವಕನಾಗುತ್ತಾನೆ ನಾನು ಅವನನ್ನು ರಕ್ಷಿಸುತ್ತೇನೆ.”ಎಂಬಂತೆ ಭಾಸವಾಯಿತು.

ಅನಂತರ ಅಂಜನಾದೇವಿ ಮತ್ತು ಕೇಸರಿ ತಮ್ಮ ಸ್ಥಾನಕ್ಕೆ ಹೊರಟುಹೋದರು.ಭಗವಾನ್ ಶಂಕರನು ಅಂಶರೂಪದಿಂದ ಅಂಜನಿಯ ಕಿವಿಯ ಮುಖಾಂತರ ಅವಳ ಗರ್ಭದಲ್ಲಿ ಪ್ರವೇಶಿಸಿದನು. ಚೈತ್ರ ಶುಕ್ಲ ಪೌರ್ಣಮಿ ಮಂಗಳವಾರದ ದಿನ ಅಂಜನಾದೇವಿಯ ಮನೆಯಲ್ಲಿ ಭಗವಾನ್ ಶಂಕರನು ವಾನರ ರೂಪದಲ್ಲಿ ಜನಿಸಿದನು ಎಂಬುದು ರಾಮಾಯಣದಲ್ಲಿ ಬರುವ ದೃಷ್ಟಾಂತ. ಅದು ಈ ಅಂಜನಾ ಪರ್ವತದ ಮೇಲೆ ಅಂಜನೇಯನ ಜನ್ಮಸ್ಥಳ ಎಂಬುದು.nಹಾಗಾದರೆ ಇಂಥ ಹಿನ್ನಲೆಯುಳ್ಳ ಅಂಜನಾದ್ರಿ ಪರ್ವತದ ಮೇಲೆ ಬರಲು ಕಡಿದಾದ ಬೆಟ್ಟದ ಮಧ್ಯದಲ್ಲಿ 575 ಮೆಟ್ಟಿಲುಗಳನ್ನು ನಿರ್ಮಿಸಿರುವರು. ಈ ಮೆಟ್ಟಿಲುಗಳನ್ನೇರುವುದೇ ಒಂದು ಹರಸಾಹಸ ಕೆಲವೆಡೆ ಚಿಕ್ಕಪುಟ್ಟ ಮೆಟ್ಟಿಲುಗಳಿದ್ದರೆ ಇನ್ನು ಕೆಲವೆಡೆ ವಿಸ್ತಾರವಾದ ಮೆಟ್ಟಿಲುಗಳು ಮತ್ತೊಂದೆಡೆ ಬಂಡೆಗಲ್ಲುಗಳ ನಡುವೆ ಬಾಗುತ್ತ ಮೆಟ್ಟಿಲು ಏರುತ್ತ ಸಂದುಗಳಲ್ಲಿ ತೂರಿ ಮೇಲೆ ಬರುವಂತೆ ಮೆಟ್ಟಿಲುಗಳು ಅಲ್ಲಲ್ಲಿ ಬೆಟ್ಟದಲ್ಲಿ ಜಿನುಗುವ ನೀರಿನ ಝರಿಗಳು ಸುತ್ತಲೂ ಹಸಿರುಟ್ಟ ನಿಸರ್ಗ ಇವುಗಳನ್ನೆಲ್ಲ ನೋಡುತ್ತ ಸಾಗಿ ಬೆಟ್ಟ ಏರಿದರೆ ಪೂರ್ಣ ಮೇಲ್ತುದಿಗೆ ಬಂದರೆ ಸಾಕು ಮೆಟ್ಟಿಲು ಏರಿರುವ ಆಯಾಸವೆಲ್ಲ ಪ್ರಕೃತಿ ಮಡಿಲನ್ನು ಕಂಡಾಗ ಮಾಯವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.ಆದರೆ ಮೆಟ್ಟಿಲುಗಳನ್ನೇರಲು ದಮ್ ಬೇಕೇಬೇಕು.

ದಮ್ ಇದ್ದವರಿಗೆ ಮಾತ್ರ ಈ ಚಾರಣ ಸುಖ ಅನುಭವಿಸಲು ಸಾಧ್ಯ. ಈ ಬೆಟ್ಟದ ಮೇಲೆ ಧ್ಯಾನಮಂದಿರ.ಪೂಜಾರಿಗಳ ವಾಸದ ಕೊಠಡಿ ಒಂದೆಡೆ ದೇವಾಲಯ ಅದರ ಮುಂದೆ ತುಳಸಿಕಟ್ಟೇ ದೀಪಮಾಲಿಕಾಸ್ಥಂಭ ಇತ್ಯಾದಿ ಕಾಣುತ್ತೇವೆ. ದೊಡ್ಡಬಂಡೆಗಲ್ಲೊಂದರ ಮೇಲೆ ನಿರ್ಮಿಸಿದ ದೇವಾಲಯ ಪ್ರದಕ್ಷಿಣಾಪಥವನ್ನು ಹೊಂದಿದ್ದು ದೇವಾಲಯ ಒಳಗೆ ಬಂಡೆಗಲ್ಲಿನಲ್ಲಿ ಉದ್ಬವ ಆಂಜನೇಯ ಮೂರ್ತಿ ಇದ್ದು ಅದರ ಪೋಟೋ ತೆಗೆಯಲು ಮಾತ್ರ ಅನುಮತಿ ಇರುವುದಿಲ್ಲ ಕಾರಣ ಅಲಂಕೃತ ಪೂಜೆಗೊಂಡ ಅಂಜನೇಯನ ದರ್ಶನಕ್ಕೆ ಮಾತ್ರ ಯಾವ ಕೊರತೆಯೂ ಇಲ್ಲ.

ಇಲ್ಲಿ ಕೆಂಪು ಮೂತಿಯ ಕೋತಿಗಳ ಕಾಟ ಮಾತ್ರ ಹೇಳತೀರದ್ದು ಎಷ್ಟೇ ಅಂದರೂ ಇದು ವಾನರ ರಾಜ್ಯವಲ್ಲವೇ.? ನೀವು ಕೈಯಲ್ಲಿ ಏನಾದರೂ ಬ್ಯಾಗ್ ತಂದಿರುವಿರೋ ನಿಮ್ಮನ್ನು ಹಿಂಡುಗಟ್ಟಲೇ ಕೋತಿಗಳು ಬೆನ್ನುಹತ್ತುವ ದೃಶ್ಯ ಸಾಮಾನ್ಯ ಭಯಪಟ್ಟರೆ ಸಾಕು ಯಾವುದೇ ಮುಲಾಜಿಲ್ಲದೇ ನಿಮ್ಮ ಕೈಯಲ್ಲಿನ ಬ್ಯಾಗ್ ಎಗರಿಸಿಬಿಡುತ್ತವೆ.

ಧೈರ್ಯದಿಂದ ಅವುಗಳನ್ನು ಎದುರಿಸಿದರೆ ಮಾತ್ರ ಯಾವುದೇ ತಾಪತ್ರಯ ಬಾರದು.ಇವುಗಳಿಗೆ ಆಹಾರವನ್ನು ಕೂಡ ಇಲ್ಲಿನ ಅರ್ಚಕರು ನೆನೆಹಾಕಿದ ಕಡಲೆ. ತೊಗರಿಬೇಳೆಯಂಥಹ ವಸ್ತುಗಳನ್ನು ಮುಂಜಾನೆ ಮತ್ತು ಸಾಯಂಕಾಲ ದೇವಾಲಯದ ಆವರಣದಲ್ಲಿ ಹಾಕುವ ಮೂಲಕ ಆಹಾರ ಒದಗಿಸುವ ಸಂಪ್ರದಾಯವಿದೆ. ಸದಾ ಕಾಲ ಇಲ್ಲಿ ರಾಮಜಪ ನಡೆಯುತ್ತಿದೆ. ದೇವಾಲಯ ಸುತ್ತಲೂ ಬಂಡೆಗಲ್ಲುಗಳ ಆವರಣದಲ್ಲಿ ಎಲ್ಲಿ ನೋಡಿದರೂ ನಿಸರ್ಗವೇ ಒಂದೆಡೆ ಆನಗೊಂದಿ. ಹಾಳು ಹಂಪೆಯ ಪರಿಸರ. ಮತ್ತೊಂದೆಡೆ ಕಿಷ್ಕಿಂದಾ ರೆಸಾರ್ಟ ತುಂಗಭದ್ರಾ ನದಿಯಲ್ಲಿ ಮುಳುಗಿದ ಹಳೆಯ ಹಂಪೆಯ ದೇಗುಲಗಳು ಕಾಣುತ್ತವೆ. ಈ ಬೆಟ್ಟಕ್ಕೆ ಬೆಳಗಿನ ಇಲ್ಲವೇ ಸಂಜೆ ವೇಳೆ ಆಗಮಿಸಿದರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ರಮಣೀಯ ದೃಶ್ಯಗಳನ್ನು ಕಾಣಬಹುದು.

ಆದರೆ ವಾಹನ ಸಂಚಾರ ಸುಲಭವಲ್ಲ ಗಂಗಾವತಿಯಿಂದ ಬರುವುದಾದರೆ ಬೆಳಗಿನಿಂದಲೇ ವಾಹನಗಳು ಹುಲಗಿ ಗ್ರಾಮಕ್ಕೆ ಸಂಚರಿಸತೊಡಗುತ್ತವೆ. ಸಂಜೆ ವೇಳೆಯ ಸೊಬಗನ್ನು ಸವಿಯಲು ಮಾತ್ರ ಯಾವ ಕೊರತೆಯೂ ಇಲ್ಲ.ಸಾಧ್ಯವಾದಷ್ಟು ಸ್ವಂತವಾಹನಗಳ ಮೂಲಕ ಬಂದಲ್ಲಿ ಇಂಥ ಸ್ಥಳ ಸುಲಭವಾಗಿ ನೋಡಿ ಹೋಗಬಹುದು.

ಹಂಪೆಯನ್ನು ನೋಡಬಂದರೆ ಖಂಡಿತವಾಗಿಯೂ ಕಿಷ್ಕಿಂದಾ, ಅಂಜನಾದ್ರಿ, ವಿರುಪಾಪುರಗಡ್ಡೆ, ನವಬೃಂದಾವನ, ಆನೆಗೊಂದಿ ಸ್ಥಳಗಳನ್ನು ನೋಡದೇ ಹೋದಲ್ಲಿ ನೀವು ಏನನ್ನೋ ಕಳೆದುಕೊಂಡಂತೆ ಎಂಬುದನ್ನು ಮರೆಯದಿರಿ, ಇಂಥ ಸ್ಥಳಗಳು ಒಂದೇ ಮಾರ್ಗದಲ್ಲಿ ಸುಮಾರು ಮೂವತ್ತು ಕಿ.ಮೀ ಅಂತರದಲ್ಲಿವೆ, ಹೊಸಪೇಟೆಯಲ್ಲಿ ಅಥವ ಗಂಗಾವತಿಯಲ್ಲಿ ಉಳಿದುಕೊಳ್ಳಲು ಸಾಕಷ್ಟು ವಸತಿಗೃಹಗಳಿವೆ. ಅಲ್ಲಿಂದ ಮುಂದೆ ಯಾವುದೇ ಮಾರ್ಗವಾದರೂ ಇಂಥ ಸ್ಥಳಗಳನ್ನು ನೋಡಲು ಸಾಧ್ಯವಿದೆ.

ಬೆಂಗಳೂರು ಮಾರ್ಗದಿಂದ ಬರುವವರು. ಚಿತ್ರದುರ್ಗ ಮೂಲಕ ಹೊಸಪೇಟೆ ಅಥವ ಗಂಗಾವತಿ ತಲುಪಬಹುದು.ಹುಬ್ಬಳ್ಳಿಯಿಂದ ಬೆಳಗಾವಿಯಿಂದ ಬರುವವರು ಗದಗ ಮಾರ್ಗವಾಗಿ ಹೊಸಪೇಟೆ ಅಥವ ಗಂಗಾವತಿ ಬಂದಲ್ಲಿ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸುಲಭವಾಗಿ ಸಂಚರಿಸಬಹುದು.ಬೆಂಗಳೂರು ಚಿತ್ರದುರ್ಗ ಮೂಲಕ ಹೊಸಪೇಟೆ 310 ಕಿ.ಮೀ. ಹುಬ್ಬಳ್ಳಿಯಿಂದ ಹೊಸಪೇಟೆ 150 ಕಿ.ಮೀ ಅಂತರದಲ್ಲಿದೆ, ಹೊಸಪೇಟೆಯಿಂದ ಗಂಗಾವತಿ 50 ಕಿ.ಮೀ. ಹೊಸಪೇಟೆಯಿಂದ ಕಿಷ್ಕಿಂದಾ 25 ಕಿ.ಮೀ. ಗಂಗಾವತಿಯಿಂದ 16 ಕಿ.ಮೀ ಅಂತರದಲ್ಲಿವೆ.

ರೈಲುಮಾರ್ಗವಾಗಿ ಬರುವವರು ಮುನಿರಾಬಾದ್(ಹುಲಗಿ) ಜಂಕ್ಷನ್ ಇಳಿದುಕೊಂಡರೆ ತುಂಬಾ ಅನುಕೂಲ. ಒಟ್ಟಾರೆ ಇಲ್ಲಿನ ಎಲ್ಲ ಸ್ಥಳಗಳನ್ನು ನೋಡಬೇಕೆಂದಾದರೆ ಕನಿಷ್ಟ ನಾಲ್ಕು ದಿನಗಳ ವಸತಿ ವ್ಯವಸ್ಥೆಯೊಂದಿಗೆ ಬಂದರೆ ಒಳ್ಳೆಯದು.

ಆದರೆ ಗಂಗಾವತಿಯಲ್ಲಿಯೋ ಹೊಸಪೇಟೆಯಲ್ಲಿಯೋ ನೀವು ವಸತಿ ಇರುವುದು ಎಂಬುದನ್ನು ಮೊದಲು ನಿರ್ಧರಿಸಿ ಪ್ರವಾಸ ಹೊರಡಲು ಮಾರ್ಗಸೂಚಿ ಹಾಕಿಕೊಳ್ಳಿ ಹೊಸಪೇಟೆಯಾದಲ್ಲಿ ಹುಲಗಿ ನಂತರ ಹಿಟ್ನಾಳ ಕ್ರಾಸ್.ಅಗಳಕೇರಾ.ಶಿವಪುರ.ಹೊಸಬಂಡಿ ಹರ್ಲಾಪುರ.ಬಸಾಪುರ.ತಿರುಮಲಾಪುರ.ಸನಾಪುರ.ಹನುಮನಹಳ್ಳಿ. ವಿರುಪಾಪುರ ಮೂಲಕ ಕಿಷ್ಕಿಂದಾ ನಂತರ ಹತ್ತಿರದಲ್ಲಿನ ಅಂಜನಾದ್ರಿ ಪರ್ವತ.ನಂತರ ಆನೆಗೊಂದಿ ನೋಡಲು ಅನುಕೂಲ. ಗಂಗಾವತಿ ಮೂಲಕ ಬಂದರೆ ಮೊದಲು ಆನೆಗೊಂದಿ ನಂತರ ಅಂಜನಾದ್ರಿ ಪರ್ವತ ನಂತರ ವಿರುಪಾಪುರ ಗಡ್ಡೆ.ಕಿಷ್ಕಿಂದಾ ರೆಸಾರ್ಟ ನೋಡಿ ಹೊಸಪೇಟೆಯ ಆಣೆಕಟ್ಟು ವೀಕ್ಷಿಸಬಹುದು.


ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು

RELATED ARTICLES

Most Popular

error: Content is protected !!
Join WhatsApp Group