Homeಸುದ್ದಿಗಳುಆಧ್ಯಾತಿಕ ಸ್ಪರ್ಶದಿಂದ ಬದುಕಿಗೆ ಪ್ರಸನ್ನತೆ

ಆಧ್ಯಾತಿಕ ಸ್ಪರ್ಶದಿಂದ ಬದುಕಿಗೆ ಪ್ರಸನ್ನತೆ

ಮುನವಳ್ಳಿ: ಹುಟ್ಟಿನೊಂದಿಗೇ ‘ಸಾವು’ ಹಿಂಬಾಲಿಸಿದೆ ಎಂಬ ‘ಪರಮಸತ್ಯ’ದ ಅರಿವಿನಿಂದ ದೂರ ಸರಿದಿರುವ ಮಾನವನ ಬದುಕಿನ ವಿದ್ಯಮಾನಗಳು ಜನವಿರೋಧಿಯಾಗಿ ಬಲಿಯುತ್ತಿರುವುದು ಕಳವಳ ಮೂಡಿಸಿದೆ. ನೈತಿಕ ನೆಲೆ, ಸಾಂಸ್ಕೃತಿಕ ಭಾವನೆ, ಸಾಹಿತ್ಯಿಕ ಚಿಂತನೆ ಹಾಗೂ ಆಧ್ಯಾತಿಕ ಸ್ಪರ್ಶದಿಂದ ಬದುಕಿಗೆ ನಿರಂತರ ಪ್ರಸನ್ನತೆ ಪ್ರಾಪ್ತವಾಗುತ್ತದೆ ಎಂದು ಇನಾಂಹೊಂಗಲ ವಿರಕ್ತಮಠದ ಶ್ರೀಅಭಿನವ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಅವರು ಇನಾಂಹೊಂಗಲದಲ್ಲಿ ಹಮ್ಮಿಕೊಂಡಿದ್ದ ೩೫೧ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಭಕ್ತಗಣ ನೀಡಿದ ಗುರುನಮನ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.

‘ದೇವರು ಅವ್ಯಕ್ತ ಆದರೆ, ಗುರು ವ್ಯಕ್ತನಾಗಿರುತ್ತಾನೆ. ಹರಮುನಿದರೂ ಗುರು ಕಾಯುವ ಮೂಲಕ ಮನುಕುಲಕ್ಕೆ ಶಿವದರ್ಶನ ಮಾಡಿಸುವಲ್ಲಿ ಅಗತ್ಯ ಚಿಂತನೆಯನ್ನು ಗುರು ನೀಡುತ್ತಾನೆ’ ಎಂದು ತಿಳಿಸಿದರು.

ಇನಾಂಹೊಂಗಲ ವಿರಕ್ತಮಠದ ಉತ್ತರಾಧಿಕಾರಿ ಶ್ರೀಮರಿಮಹಾಂತ ಚೆನ್ನವೀರ ಸ್ವಾಮೀಜಿ ಮಾತನಾಡಿ, ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಮೇರು ಮೆಟ್ಟಿಲುಗಳನ್ನೇರಿ ಶಿವ ಸಾನ್ನಿಧ್ಯದ ಸಾಕ್ಷಾತ್ಕಾರ ಸಂಪಾದನೆಯ ಅಂತಿಮ ಗುರಿ ಮುಟ್ಟುವಲ್ಲಿ ಬೇಕಾದ ನಿರಂತರ ಮಾರ್ಗದರ್ಶನವನ್ನು ಶಿವಾನುಭವ ಒದಗಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಬಾಗಲಕೋಟ ಜಿಲ್ಲೆಯ ಹಿರಿಯ ಸಾಹಿತಿ ಎಸ್.ಆರ್. ಹೂಗಾರ ಸಿರಿಯೂರ ಮಾತನಾಡಿ, ‘ಶಿವನು ನಮ್ಮ ಅನುಭವಕ್ಕೆ ಬರಬೇಕು. ಶ್ರೀಗುರುವಿನ ಸಾನ್ನಿಧ್ಯದಲ್ಲಿ ನಡೆಯುವ ಸತ್ಸಂಗದ ಮೂಲಕ ಅಂತರಂಗ ಶುದ್ಧಿಯನ್ನು ಸಾಧಿಸಿದಾಗ ಅಲ್ಲಿ ಶಿವ ದರ್ಶನವಾಗುತ್ತದೆ. ಇದು ಶಿವಾನುಭವ ಕಾರ್ಯಕ್ರಮದ ಮಹೋದ್ದೇಶವಾಗಿದೆ. ಇನಾಂಹೊಂಗಲ ವಿರಕ್ತಮಠದ ಲಿಂಗೈಕ್ಯ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು ಸಮಸ್ತ ಭಕ್ತ ಸಂಕುಲಕ್ಕೆ ಶಿವ ದರ್ಶನವಾಗಲು ಅಗತ್ಯವಾದ ಸಾಧನಾ ಪಥವನ್ನು ಅನುಗ್ರಹಿಸಿ ಇಂದಿಗೂ ಭಕ್ತಗಣದ ಅಂತರಂಗದಲ್ಲಿ ಶ್ರೀಗಳು ನೆಲೆ ನಿಂತಿದ್ದಾರೆ’ ಎಂದರು.

ಧಾರವಾಡದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಹಾಗೂ ಬಾಗಲಕೋಟ ಜಿಲ್ಲೆ ಶಿರೂರ ಗ್ರಾಮದ ಅಧ್ಯಾಪಕ ಎಸ್.ಎನ್. ಹುಲಗಂಜಿ ಮಾತನಾಡಿದರು. ಮುತ್ತನಗೌಡ ಪಾಟೀಲ, ಶ್ರೀಕಾಂತ ಹವಾಲ್ದಾರಮಠ, ವಿರೂಪಾಕ್ಷಪ್ಪ ಜಕ್ಕಣ್ಣವರ ಹಾರೋಬೆಳವಡಿ, ಮಲ್ಲಪ್ಪ ಏಣಗಿ, ಶಂಕರೆಪ್ಪ ಏಣಗಿ, ಗಂಗಾಧರ ಮಣಿಕಟ್ಟಿ, ಸುರೇಶ ಹುಂಡಣ್ಣವರ, ಈರಪ್ಪ ಪಟದಾರಿ, ಪುರುಷೋತ್ತಮಗೌಡ ಸಿದ್ಧನಗೌಡ್ರ, ಶಂಕ್ರೆಪ್ಪ ಕಲ್ಲೂರ, ಕಿತ್ತೂರ ಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನ ಸ್ಥಳೀಯ ಶಾಖೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ, ಫಕ್ಕೀರಪ್ಪ ಪಾರ್ವತಿ ಇದ್ದರು. ಪ್ರಕಾಶ ನಾಗನಗೌಡ ಸ್ವಾಗತಿಸಿದರು. ಮಡಿವಾಳಯ್ಯ ಸಿದ್ಧಗಿರಿಮಠ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group