ಮೂಡಲಗಿ: ‘ಪ್ರತಿಯೊಬ್ಬರಲ್ಲಿ ಇರುವ ಸುಪ್ತ ಮನಸ್ಸನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಸಾಧನೆ ಮತ್ತು ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಭಾರತೀಯ ಸೇನೆಯ ಕರ್ನಲ್ ಹಾಗೂ ಆಧ್ಯಾತ್ಮಿಕ ಚಿಂತಕ ಡಾ. ಪರುಶರಾಮ ನಾಯಿಕ ಹೇಳಿದರು.
ಇಲ್ಲಿಯ ಶಿವಬೋಧರಂಗ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾ ಭವನದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದಿಂದ ಆಚರಿಸಿದ ಶಿಕ್ಷಕರ ದಿನಾರಣೆ, ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸುಪ್ತ ಮನಸ್ಸನ್ನು ಅರಿಯುವ ಮಾರ್ಗವನ್ನು ತಿಳಿದುಕೊಳ್ಳಬೇಕು ಎಂದರು.
ಯಾವದೇ ರೋಗವನ್ನು ಯಾವದೇ ಔಷಧಿ ಇಲ್ಲದೆ ಮನಸ್ಸಿನ ಶಕ್ತಿಯಿಂದ ನಿವಾರಣೆ ಮಾಡಬಹುದಾಗಿದೆ. ಅಂಥ ಶಕ್ತಿ ಮನುಷ್ಯನ ಮನಸ್ಸಿಗೆ ಇದೆ. ಧನಾತ್ಮಕ ಚಿಂತನೆಗಳು ನಮ್ಮಲ್ಲಿ ವ್ಯಾಕುಲತೆ, ಬೇಸರ, ಅನಾರೋಗ್ಯತೆ ಎಲ್ಲವನ್ನು ದೂರಮಾಡುತ್ತವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ವಲಯದಲ್ಲಿಯ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಪ್ರಶಂಸೆ, ಪ್ರಶಸ್ತಿ, ಅಭಿನಂದನೆಗಳು ವ್ಯಕ್ತಿಯಲ್ಲಿ ಕಾರ್ಯಕ್ಷಮತೆಯನ್ನು ವೃದ್ದಿಸುತ್ತವೆ ಎಂದರು.
ತುಕ್ಕಾನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಪ್ಪಾಸಾಹೇಬ ವಿ. ಗಿರೆಣ್ಣವರ ಹಾಗೂ ಕಲ್ಲೋಳಿಯ ಸಿಆರ್ಪಿ ಗಣಪತಿ ಉಪ್ಪಾರ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ, ಮೂಡಲಗಿ ಲಯನ್ಸ್ ಕ್ಲಬ್ನ ಸಾಧನೆಯನ್ನು ಹೇಳಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಖಜಾಂಚಿ ಸುಪ್ರೀತ ಸೋನವಾಲಕರ ಇದ್ದರು.
ಪ್ರೊ. ಎಸ್.ಎಂ. ಕಮದಾಳ, ಪ್ರೊ. ಎಸ್.ಎಂ. ಗುಜಗೊಂಡ, ಸಿದ್ರಾಮ್ ದ್ಯಾಗಾನಟ್ಟಿ, ಸತೀಶ ಬಿ.ಎಸ್, ಲಯನ್ಸ್ ಕ್ಲಬ್ ಸದಸ್ಯರಾದ ವೆಂಕಟೇಶ ಸೋನವಾಲಕರ, ಸಂಜಯ ಮೋಕಾಶಿ, ಮಹಾಂತೇಶ ಹೊಸೂರ, ಶ್ರೀಶೈಲ್ ಲೋಕನ್ನವರ, ಡಾ.ಎಸ್.ಎಸ್. ಪಾಟೀಲ, ಶಿವಾನಂದ ಗಾಡವಿ, ಮಲ್ಲಪ್ಪ ಖಾನಗೌಡರ, ಕೃಷ್ಣಪ್ಪ ಕೆಂಪಸತ್ತಿ, ಶಿವಬಸು ಈಟಿ, ಪ್ರಮೋದ ಪಾಟೀಲ, ಗಿರೀಶ ಆಸಂಗಿ ಇದ್ದರು.
ಚಂದ್ರಿಕಾ ನಾಯಿಕ, ಕಾವ್ಯಾ ಮಡಿವಾಳ ಪ್ರಾರ್ಥಿಸಿದರು, ಶಿವಾನಂದ ಕಿತ್ತೂರ ಪರಿಚಯಿಸಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು, ಮಹಾಂತೇಶ ಹೊಸೂರ ವಂದಿಸಿದರು.