ಮೈಸೂರು – ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಮಾತೆ ಕಮಲಮ್ಮ ಹಾಗೂ ವನಿತಾ ಸ್ಮರಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಶಾಲಾ, ಕಾಲೇಜಿನ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಶಂಕರವೇದ ವಿದ್ಯಾ ಪ್ರತಿಷ್ಠಾನದ ಅಧ್ಯಕ್ಷರು, ಆಗಮ ಪ್ರವೀಣರೂ ಆದ ವಿದ್ವಾನ್ ಸುರೇಶ್ ಅವರು ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ, ಮಾತನಾಡಿ, ವಿದ್ಯೆಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ವಿದ್ಯೆ ಮನುಷ್ಯನಿಗೆ ವಿವೇಕವನ್ನೂ, ಜ್ಞಾನವನ್ನೂ ಹೆಚ್ಚಿಸುತ್ತದೆ ಎಂದು ಅಭಿಪ್ರಾಯಿಸಿ, ವಿದ್ಯೆ ಒಂದಿದ್ದರೆ ತಾಯಿ, ತಂದೆ, ಬಂಧು, ಬಳಗ ಎಲ್ಲರನ್ನೂ ಗೌರವದಿಂದ ಕಾಣಲು ವಿನಯ ಮಾರ್ಗವಾಗುತ್ತದೆ. ನಮ್ಮಲ್ಲಿರುವ ಗುಪ್ತವಾದ ಧನವೇ ವಿದ್ಯೆ. ವಿದ್ಯೆ ಎಂಬುದು ಎಲ್ಲಾ ಭೋಗ ಭಾಗ್ಯಗಳನ್ನು ಸಿಗಲು ಕಾರಣಕರ್ತ ಆಗುತ್ತದೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಗುರುಗಳಿಗೆ ಗುರು ಆಗಬೇಕಾದರೆ ವಿದ್ಯೆಯನ್ನು ಶ್ರಮವಹಿಸಿ, ಸಮರ್ಪಕವಾಗಿ ಕಲಿಯಬೇಕು ಎಂದು ತಿಳಿಸಿದರು.
ಇಂದು ಹಣ, ಆಸ್ತಿ, ಅಂತಸ್ತು ಇವುಗಳನ್ನು ಸುಲಭವಾಗಿ ಗಳಿಸಬಹುದು. ಆದರೆ ವಿದ್ಯೆಯನ್ನು ಗಳಿಸಿದ ಮೇಲೆ ಯಾರೂ ಅದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಲಲಿತಾ ಡೆಂಟಲ್ ಸ್ಪೆಷಾಲಿಟಿ ಆಸ್ಪತ್ರೆಯ ದಂತತಜ್ಞ ಡಾ.ನಾಗರಾಜು ಮಾತನಾಡಿ, ವಿದ್ಯಾರ್ಥಿಯು ಶಾಲಾ ಹಂತದಿಂದಲೂ ಕಲಿಕೆಯನ್ನು ಆರಂಭಿಸಿ, ಉನ್ನತ ಶಿಕ್ಷಣದವರೆಗೆ ಹಂತ ಹಂತವಾಗಿ ಶಿಕ್ಷಣವನ್ನು ಕಲಿತು, ಜ್ಞಾನಭಂಡಾರವನ್ನು ಸಂಪಾದಿಸುತ್ತಾನೆ. ಇಂದಿನ ಮಕ್ಕಳು ಸಾಧನೆಯನ್ನು ಮಾಡಬೇಕಾದರೆ ಪರಿಶ್ರಮ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಡಾ.ಸ್ಮಿತಾ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುರುಳಿ ಮನೋಜವಂ ಸ್ವಾಗತಿಸಿದರೆ, ಚೈತ್ರಾಂಜಲಿ ವಂದಿಸಿದರು.