ಮೂಡಲಗಿ – ವಿಶ್ವ ವಿದ್ಯಾಲಯಗಳಲ್ಲಿ ಹೋಗಿ ಕುಳಿತಿರುವ ಕನ್ನಡ ಪ್ರಾಧ್ಯಾಪಕರಿಗೆ ಹಳಗನ್ನಡ ಇರಲಿ ಡಿವಿಜಿಯವರ ಕಗ್ಗವನ್ನೂ ಬಿಡಿಸಿ ಹೇಳಲು ಬರುವುದಿಲ್ಲ. ಅಂಥ ಮಹಾನುಭಾವರು ಈಗ ಪಠ್ಯ ಪುಸ್ತಕ ರಚನಾ ಸಮಿತಿಗಳ ಸದಸ್ಯರಾಗಿದ್ದಾರೆ ಎಂದು ಖ್ಯಾತ ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ವಿಷಾದ ವ್ಯಕ್ತಪಡಿಸಿದರು.
ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರ ಕುರಿತಾದ ಸಾಹಿತ್ಯ ಅವಲೋಕನ ಕಾರ್ಯಕ್ರಮದಲ್ಲಿ ನಡೆದ ಸಂವಾದ ಸಂದರ್ಭದಲ್ಲಿ ಕಾಲೇಜು ಮಟ್ಟದಲ್ಲಿ ಕನ್ನಡ ಭಾಷೆಯಲ್ಲಿ ಹಳಗನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಕುರಿತ ಚರ್ಚೆಗೆ ಅವರು ಉತ್ತರ ನೀಡುತ್ತ, ಇಂದಿನ ಉಪನ್ಯಾಸಕ ರಿಗೆ ಕುವೆಂಪು ಅಂಥವರ ಸಾಹಿತ್ಯ ಬೇಡ, ಕೇಶಿರಾಜ ಬೇಡ, ಪಂಪ ಭಾರತ ಬೇಡ. ಇವರಿಗೆ ಯಾವುದೂ ಅರ್ಥವಾಗುವುದಿಲ್ಲ.
ವಿಶ್ವ ವಿದ್ಯಾಲಯದ ಪಠ್ಯ ವಿಷಯದಲ್ಲಿ ಹಳಗನ್ನಡ ಕಾವ್ಯವಿಲ್ಲ. ಇದ್ದರೂ ಅದನ್ನು ಹೇಳುವ ಪಂಡಿತರು ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯಗಳಲ್ಲಿ ಇಲ್ಲ. ಕನ್ನಡಕ್ಕೆ ಇದೊಂದು ದೊಡ್ಡ ಕೊರತೆ ಎಂದರು.
ನಿವೃತ್ತ ಗ್ರಂಥ ಪಾಲಕ ಬಾಲಶೇಖರ ಬಂದಿಯವರೂ ಇದಕ್ಕೆ ದನಿಗೂಡಿಸಿ, ಪಠ್ಯದಲ್ಲಿ ಹಳಗನ್ನಡವನ್ನು ತೆಗೆದು ಹಾಕಿದ್ದಾರೆ ದುರಂತವೆಂದರೆ ಹಳಗನ್ನಡ ಬೇಕು ಎಂದು ಯಾವ ಕನ್ನಡಿಗರೂ, ವಿದ್ಯಾವಂತರೂ, ಪಂಡಿತರೂ ಚಳವಳಿ ಮಾಡಿಲ್ಲ. ಹೋರಾಟ ಮಾಡಿಲ್ಲ. ಇದೂ ಕೂಡ ಕನ್ನಡದ ಒಂದು ದುರಂತ ಎಂದರು.
ಕನ್ನಡ ಭಾಷೆಯ ಪರಂಪರೆಯನ್ನು ಸಾರುವ ಹಳಗನ್ನಡ ಸಾಹಿತ್ಯ ಪದವಿ ಮಟ್ಟದಲ್ಲಿ ಪಠ್ಯಪುಸ್ತಕದಲ್ಲಿ ಬರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.