ವೃಕ್ಷ ಸಂಕುಲ ಬೆಳೆಸುವ ಸಂಕಲ್ಪದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರು

Must Read

ಕುಂದಾಪುರ – ಶ್ರೀ ವಾದಿರಾಜ ಗುರು ಸಾರ್ವಭೌಮರ ಜನ್ಮಸ್ಥಳವಾದ ಕುಂದಾಪುರ ಸಮೀಪದ ಹೂವಿನಕೆರೆಯ ಸೋದೆ ಶ್ರೀವಾದಿರಾಜ ಮಠದ 116 ಎಕ್ರೆ ಜಮೀನಿನಲ್ಲಿ ಸೋದೆ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಒಂದು ವಿಭಿನ್ನ ಸಂಕಲ್ಪವನ್ನು ಹೊತ್ತು ವೃಕ್ಷ ಸಂಕುಲವನ್ನೇ ಬೆಳೆಸಲು ಮುಂದಾಗಿದ್ದಾರೆ.

ಈ ಸಂಕಲ್ಪವು ಆರ್ಥಿಕ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿದ ಉಭಯ ಪರಿಕಲ್ಪನೆಯಾಗಿದ್ದು, ಶ್ರೀಪಾದರು ಈ ಎರಡು ಪರಿಕಲ್ಪನೆಗೂ ಸಮಾನವಾದ ಪ್ರಾಮುಖ್ಯತೆಯನ್ನು ನೀಡಲಿದ್ದಾರೆ. ಆರ್ಥಿಕತೆಗೆ ಸಂಬಂಧಿಸಿದಂತೆ ಸೂಚಿಸಿದ ಜಾಗದಲ್ಲಿ ಶ್ರೀಗಂಧ ಹಾಗೂ ಸಾಗವಾನಿ ವೃಕ್ಷವನ್ನು ಬೆಳೆದರೆ ಇನ್ನೊಂದೆಡೆ ಸಾಮಾಜಿಕ ಕಳಕಳಿಯ ಅಡಿಯಲ್ಲಿ ಅನೇಕ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ನಾನಾ ಬಗೆಯ ಹಣ್ಣಿನ ಗಿಡ – ಮರಗಳು, ಪರಿಸರಕ್ಕೆ ಶುದ್ಧ ಆಮ್ಲಜನಕ ನೀಡುವ ವೃಕ್ಷಗಳು, ಆಯುರ್ವೇದ ಶಾಸ್ತ್ರಕ್ಕೆ ಸಂಬಂಧಿಸಿದ ಔಷಧೀಯ ಗುಣವುಳ್ಳ ಮರಗಳನ್ನು ಹಾಗೂ ಭೂಮಿಯ ಅಂತರ್ಜಲ ಮಟ್ಟ ವೃದ್ಧಿಸಲು ಜಮೀನಿನ ಸುತ್ತಲೂ 5 ಅಡಿ ಆಳದ ತೋಡು ಮತ್ತು ಜಮೀನಿನ ಒಳಭಾಗದಲ್ಲಿ ಇಂಗುಗುಂಡಿ ಸಹಿತ ಹಿರಿದಾದ 1 ಮದಗವನ್ನು ನಿರ್ಮಿಸಲು ಸೂಚಿಸಿದ್ದಾರೆ.

ಈ ಯೋಜನೆಯು ಸ್ಥಳೀಯ ಕಾರ್ಮಿಕರಿಗೆ ಉತ್ತೇಜನ ನೀಡಲಿದ್ದು ಹಲವಾರು ನಿರುದ್ಯೋಗಿಗಳಿಗೆ ಕಾಯಕ ನೀಡುವ ಕಾರ್ಯವಾಗಿದೆ. ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಎಂಬ ಕರೆಗೆ ಪುಷ್ಠಿ ಕೊಡುವಂತೆ ಅಕ್ಷಯ ಶೆಟ್ಟಿ ಹಾಗೂ ಸುಷ್ಮಾ ರಾವ್ ಎಂಬ ಇಬ್ಬರು ಮಹಿಳೆಯರು ತಾವು ವಿದೇಶದಲ್ಲಿ ನಿರ್ವಹಿಸುತ್ತಿದ್ದ ವೃತ್ತಿಯನ್ನು ತ್ಯಜಿಸಿ ತಮ್ಮ ಹುಟ್ಟೂರಿನಲ್ಲಿ ಸಾಧನೆ ಮಾಡುವ ಹುಮ್ಮಸ್ಸಿನಿಂದ “ಹಸಿರುನಾಡು” ಎಂಬ ಸಂಸ್ಥೆಯನ್ನು ಆರಂಭಿಸಿ ಈ ಯೋಜನೆಯ ಮೇಲ್ವಿಚಾರಣೆ ಹೊಣೆಯನ್ನು ಹೊತ್ತಿದ್ದಾರೆ.

ಈ ಸಂಬಂಧ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿರುವ ಗುರುಗಳ ಈ ಸಂಕಲ್ಪವು ಸಮಾಜಕ್ಕೆ ಒಂದು ಸಂದೇಶ ನೀಡಿ ಮಾದರಿ ಪ್ರಯತ್ನವಾಗುವಲ್ಲಿ ನಿಸ್ಸಂದೇಹ. ಈ ಕುರಿತು ದಿನಾಂಕ 15 ರಂದು ಹೂವಿನಕೆರೆಯ ಪ್ರಸ್ತಾವಿತ ಜಮೀನಿನಲ್ಲಿ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಶ್ರೀ ಮಠದ ದಿವಾನರಾದ ಶ್ರೀನಿವಾಸ ತಂತ್ರಿ, ಕುಂದಾಪುರ ತಾಲೂಕು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಸಹಾಯಕ ಕಮಿಷನರ್ ರಾಜು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮೇಲ್ಕಂಡ ಗಣ್ಯರೆಲ್ಲರೂ ತಲಾ ಒಂದೊಂದು ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿದರಲ್ಲದೇ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಈ ಯೋಜನೆಯು ನಮಗೂ ಹಾಗೂ ಈ ಹಳ್ಳಿಗೂ ಹೆಮ್ಮೆಯನ್ನು ತಂದುಕೊಡುವ ವಿಷಯವಾಗಿದೆ, ಇದರಿಂದಾಗಿ ಪರಿಸರದಲ್ಲಿ ಅನೇಕ ಧನಾತ್ಮಕ ವ್ಯತ್ಯಾಸ ಕಂಡುಬರುವಲ್ಲಿ ಸಂಶಯವಿಲ್ಲ ಮತ್ತು ನಾನು ಸಹ ಅರಣ್ಯ ಕೃಷಿ ವೃದ್ಧಿಸುವಲ್ಲಿ ಆಸಕ್ತಿಯುಳ್ಳವನಾಗಿದ್ದು ಅನೇಕ ವಿಚಾರ ತಿಳಿದಿದ್ದೇನೆ. ಅದಲ್ಲದೇ ಗುರುಗಳ ಈ ವಿಶೇಷ ಕಾರ್ಯಕ್ಕೆ ಭಾವಪ್ರಚೋದಕನಾದ ನಾನು ಸದಾ ಈ ಯೋಜನೆ ಕುರಿತು ಸಹಾಯ ಮತ್ತು ಮಾರ್ಗಸೂಚನೆ ನೀಡುವಲ್ಲಿ ಬದ್ಧನಾಗಿರುವೆ ಎಂದು ಹೇಳಿದರು. ಗುರುಗಳು ಶ್ರೀಗಂಧದ ಸಸಿಗಳನ್ನು ಬೆಳೆಸಲು ಯೋಚಿಸಿದ ಕಾರಣ ಪ್ರಸ್ತುತ ಯೋಜನೆಗೆ ಬೇಕಾದ ಶ್ರೀಗಂಧದ ಸಸಿಗಳನ್ನು ತಮ್ಮ ನರ್ಸರಿಯಿಂದ ಲಭ್ಯಗೊಳಿಸುವುದಾಗಿ ಭರವಸೆ ನೀಡಿದರು.

ತದನಂತರ ಉಡುಪಿ ಸಹಾಯಕ ಕಮಿಷನರ್ ರಾಜುರವರು ಈ ಯೋಜನೆ ಕುರಿತು ಗುರುಗಳ ಬಳಿ ಹರ್ಷ ವ್ಯಕ್ತಪಡಿಸಿದರು. ಸೋದೆ ವಾದಿರಾಜ ಮಠ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group