ಬುದ್ಧನೇಕೆ ನಕ್ಕ
—————————-
ಬುದ್ಧನೇಕೆ ನಕ್ಕ
ಪಾಪ ಅವನಿಗೂ
ಹೆಂಡಿರು ಮಕ್ಕಳು
ಬಿಟ್ಟು ಹೊರಟ
ಕಾಡಿಗೆ
ಅನುಭವ ಅರಿವಿನ
ಹುಡುಕಾಟ
ಸತ್ಯ ಸಮತೆ ಶಾಂತಿ
ಪ್ರೀತಿ ಅವನ ಮಂತ್ರ
ಬೋಧಿ ವೃಕ್ಷದ ಕೆಳಗೆ
ಜ್ಞಾನ ದೀವಿಗೆ ಜ್ಯೋತಿ
ಅಹಿಂಸಾ ಮೂರ್ತಿ
ವಿಶ್ವಕ್ಕೆ ಪಸರಿಸಿದನು
ಮಾನವ ಪ್ರೀತಿ
ಪೋಖ್ರಾನ್ ನಲ್ಲಿ
ಅಣು ಬಾಂಬ್ ಪರೀಕ್ಷೆ
ಕಂದಹಾರದಲ್ಲಿ ಉಗ್ರರ
ಅಟ್ಟಹಾಸ ದಾಳಿ
ತುಂಡಾಗಿ ಬಿದ್ದ ಬುದ್ಧ
ಸಮರಸದ ತೋಟದಲ್ಲಿ
ರಕ್ತ ಕೋಡಿ ಹರಿಯಿತು
ಭಾಷಣ ಲೇಖನಕೆ
ವಸ್ತುವಾದ ಸಿದ್ಧಾರ್ಥ
ಬುದ್ಧ ಶರಣಂ ಗಚ್ಛಾಮಿ
ಕೆಡವಿದರು ಸನಾತನಿಗಳು
ವಿಹಾರ ಬುದ್ಧ ಮೂರ್ತಿ
ಭಾರತ ಬಿಟ್ಟ ಮಂದಹಾಸ
ಬುದ್ಧನೇಕೆ ನಕ್ಕ ನನ್ನ ಪ್ರಶ್ನೆ
—————————————
ನೀನು ಬರದಿದ್ದರೆ
ಬಸವಣ್ಣ
ನೀನು ಬರದಿದ್ದರೆ
ನಾವು ಅಗ್ರಹಾರದ
ವೈದಿಕರ ಮನೆಯಲ್ಲಿ
ದನದ ಕೊಟ್ಟಿಗೆಯ
ಸಗಣಿ ಗೊಬ್ಬರ ಎತ್ತಬೇಕಿತ್ತು.
ಬಸವಣ್ಣ
ನೀನು ಬರದಿದ್ದರೆ
ನಾವು ಗುಡಿ ದೇವಾಲಯ
ಮಠಗಳ ಕಸ ಗುಡಿಸುವ
ದೊಡ್ಡವರ ಹೊಲದಲ್ಲಿ
ಕಸ ಕೀಳುವ ಜೀತಕ್ಕೆ ಬಲಿಯಾಗುತ್ತಿದ್ದೆವು
ಬಸವಣ್ಣ
ನೀನು ಬರದಿದ್ದರೆ
ಕನ್ನಡ ಕಲಿಯದೆ
ಸಂಸ್ಕೃತ ಪಂಡಿತರ
ಬ್ರಾಹ್ಮಣ ಪುರೋಹಿತರ
ಚಾಕರಿ ಮಾಡಬೇಕಿತ್ತು
ಬಸವಣ್ಣ
ನೀನು ಬರದಿದ್ದರೆ
ಅವರ ಮನೆಯ ಕಕ್ಕವ
ತಲೆಯ ಮೇಲೆ ಹೊತ್ತು
ಅವರ ಪಾದುಕೆಗೆ ನಮ್ಮ
ಚರ್ಮದ ಜೋಡು ಮಾಡಿಕೊಡಬೇಕಿತ್ತು
ಬಸವಣ್ಣ ನೀನು ಬಂದೆ
ಕಂಗೆಟ್ಟ ಕನ್ನಡದ ಕುಲಕ್ಕೆ
ಬಾಳ ಬಟ್ಟೆಯಾಗಿ
ಬದುಕುವ ಹೊಸ ಕನಸಿನ
ಕ್ರಾಂತಿ ಸೂರ್ಯನಾಗಿ
ನಮೋ ನಮೋ ಬಸವಣ್ಣ
—————————————
ಡಾ ಶಶಿಕಾಂತ ಪಟ್ಟಣ ರಾಮದುರ್ಗ