ಧಾರವಾಡ : ಜನವಿರೋಧಿ ದುಷ್ಟ ದುರಹಂಕಾರದ ರಾಕ್ಷಸೀ ಗುಣಸ್ವಭಾವಗಳ ನಿವಾರಣೆಗಾಗಿಯೇ ಶಿವ ಸಂಕಲ್ಪದಿಂದ ಅವತಾರವಾದ ವಿರಾಟರೂಪಿ ವೀರಭದ್ರ ದೇವರು ಅಪಾರ ಶಕ್ತಿಶಾಲಿ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ಭಾದ್ರಪದ ಮಾಸದ ಮೊದಲ ಮಂಗಳವಾರ ಕಾಶಿ ಪೀಠದಲ್ಲಿ ಹಮ್ಮಿಕೊಂಡಿದ್ದ ಶ್ರೀವೀರಭದ್ರ ದೇವರ ಜಯಂತಿ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.
ದಕ್ಷಬ್ರಹ್ಮನು ಹಮ್ಮಿಕೊಂಡಿದ್ದ ಶಿವನಿಂದಕ ಯಜ್ಞವನ್ನು ದ್ವಂಸಗೊಳಿಸುವ ಸಂದರ್ಭದಲ್ಲಿ ಯಜ್ಞ ಕುಂಡದಲ್ಲಿ ಉರಿಯುತ್ತಿದ್ದ ಅಗ್ನಿಯನ್ನು ತನ್ನ ಪಾದಗಳಿಂದ ತುಳಿದು ಶಾಂತಗೊಳಿಸಿದ. ಇದರ ದ್ಯೋತಕವಾಗಿಯೇ ಶ್ರೀವೀರಭದ್ರ ದೇವರ ಗುಗ್ಗಳ ಮಹೋತ್ಸವದಲ್ಲಿ ಪುರವಂತರು ತಮ್ಮ ಪಾದಗಳಿಂದ ಅಗ್ನಿ ಕುಂಡದಲ್ಲಿಯ ಬೆಂಕಿಯನ್ನು ತುಳಿದೇ ಗುಗ್ಗಳ ಆರಂಭಗೊಳಿಸುವ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ ಎಂದರು.
ಗುಗ್ಗಳ ಮಹೋತ್ಸವಗಳಲ್ಲಿ ಶಸ್ತ್ರಹಾಕುವ ಪದ್ಧತಿ ಇದ್ದು, ಈ ಶಸ್ತ್ರ ಧಾರಣೆಯಿಂದ ಪುರವಂತರಿಗೆ ಮತ್ತು ಇತರೇ ಭಕ್ತರಿಗೆ ಯಾವುದೇ ನೋವು, ಗಾಯ, ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳದೇ ಇರುವುದನ್ನು ಗಮನಿಸಿದಾಗ ಶ್ರೀವೀರಭದ್ರ ದೇವರ ಮಹಿಮೆ ಮತ್ತು ಅಪಾರ ಶಕ್ತಿಸಂಚಯ ಗೋಚರವಾಗುತ್ತದೆ ಎಂದ ಅವರು, ಕಾಶಿ ಪೀಠದಲ್ಲಿ ಪಂಚಪೀಠಗಳ ಮೂಲ ಆಚಾರ್ಯರ ಮತ್ತು ಗೋತ್ರ ಪುರುಷರ ಎಲ್ಲಾ ಜಯಂತಿಗಳನ್ನು ಹಾಗೂ ಸಾಂಪ್ರದಾಯಕ ಹಬ್ಬಗಳ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದೂ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪ್ರೊ. ರೇವಣಸಿದ್ಧ ಸಾಬಾದೆ ಮತ್ತು ನಲಿನಿ ಚಿಲುಮೆ ಮಾತನಾಡಿದರು. ಶಿವಮೂರ್ತಿ ಹಿರೇಮಠ ಶಿವಾನಂದ ಹಿರೇಮಠ ಹಾಗೂ ವಿನಾಯಕ ಸೇರಿದಂತೆ ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಭಕ್ತರು ಪಾಲ್ಗೊಂಡಿದ್ದರು.
ವಿಶೇಷ ಪೂಜೆ : ಮಂಗಳವಾರ ಪ್ರಾತಃಕಾಲದಲ್ಲಿ ಸ್ವತಃ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶ್ರೀವೀರಭದ್ರ ದೇವರಿಗೆ ಏಕಾದಶ ಮಹಾ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಸಹಿತ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಗುರುಮೂರ್ತಿ ವೀ. ಯರಗಂಬಳಿಮಠ, ಸಂಪಾದಕ (ನಿವೃತ್ತ), ‘ಜೀವನ ಶಿಕ್ಷಣ’ ಮಾಸಪತ್ರಿಕೆ, ಡಯಟ್ ಧಾರವಾಡ (ವಿಳಾಸ : ಅಮ್ಮಿನಬಾವಿ ೫೮೧೨೦೧ ಧಾರವಾಡ ತಾಲೂಕು) ಮೊ : ೯೯೪೫೮೦೧೪೨೨