ಬೀದರ: ಹೊಲದಲ್ಲಿ ಜೂಜಾಟವಾಡುತ್ತಿದ್ದಾರೆ ಎಂದು ಹೇಳಿ ಪೊಲೀಸ್ ಪೇದೆಯನ್ನು ಕರೆಸಿಕೊಂಡು ಅವರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಪೊಲೀಸ್ ಪೇದೆಗೆ ಜೀವದ ಬೆದರಿಕೆ ಹಾಕಿದ ಪ್ರಕರಣ ಔರಾದ ತಾಲೂಕಿನ ಸಂತೆಪೋರ ಪೊಲೀಸ್ ಠಾಣೆಯಿಂದ ವರದಿಯಾಗಿದೆ.
ಹಲ್ಲೆಗೊಳಗಾದ ಪೊಲಿಸ್ ಪೇದೆ ದೂರು ನೀಡಿದ್ದು ಹಲ್ಲೆಕೋರರಾದ ಇವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ದೂರು ನೀಡಿರುವ ಇವರು ಸಂತೆಪೋರ ಠಾಣೆಯ ಸಿಪಿಐ ಯವರ ಆದೇಶದ ಮೇರೆಗೆ ಮಹಾರಾಷ್ಟ್ರ ಕ್ಕೆ ಹೋಗಿ ಅಲ್ಲಿನ ಮಟಕಾ ದಂಧೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಕ್ಕೆ ಸಿಟ್ಟಿಗೆದ್ದ ದುಷ್ಕರ್ಮಿಗಳು ಅವರಿಂದಾಗಿ ತಮ್ಮ ದಂಧೆಯಲ್ಲಿ ಹಾನಿಯಾಗಿದೆ ಎಂದು ಈ ಪೇದೆಯನ್ನು ನಿರ್ಜನ ಪ್ರದೇಶಕ್ಕೆ ಕರೆಸಿ ಹಲ್ಲೆ ಮಾಡಿದ್ದಲ್ಲದೆ ಸುಮ್ಮನೆ ಇರದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ ಸಂತ್ರಸ್ತ ಪೇದೆಯು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತನಿಖೆ ಮುಂದುವರೆದಿದೆ.
ಉಸ್ತುವಾರಿ ಸಚಿವರು ಗಮನಿಸುವರೆ ?
ತಮ್ಮದೇ ತಾಲೂಕಾದ ಔರಾದನಲ್ಲಿ ಪೊಲೀಸರೆಂದರೆ ಭಯವೇ ಇಲ್ಲದಂತೆ ಜನರು ವರ್ತನೆ ಮಾಡಿತ್ತಿದ್ದಾರೆ. ಸಚಿವರ ತವರಿನಲ್ಲಿ ಅಕ್ರಮ ದಂಧೆ ನಡೆಯುತ್ತಿದೆ, ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆಯಾಗುತ್ತಿದೆ, ಕಾನೂನು ವ್ಯವಸ್ಥೆ ಹದಗೆಟ್ಟಿದೆ ಆದರೂ ಸಚಿವರ ಗಮನಕ್ಕೆ ಇದು ಬಂದೇ ಇಲ್ಲವೆ ಎಂದು ಸಾರ್ವಜನಿಕರು ಕೇಳುವಂತಾಗಿದೆ. ಪೊಲೀಸರ ಮೇಲೆಯೇ ಹಲ್ಲೆ ಮಾಡುವ ದುಷ್ಕರ್ಮಿಗಳು ಸಾಮಾನ್ಯ ಮನುಷ್ಯರ ಪಾಡೇನು ಎಂಬ ಪ್ರಶ್ನೆ ಏಳುತ್ತದೆ. ಈ ಪ್ರಕರಣ ನಡೆದುದನ್ನು ಗಮನಿಸಿದ ಮೇಲಾದರೂ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ರೀತಿ ಸೂಕ್ತ ಕ್ರಮ ಕೈಗೊಂಡು ಕಾನೂನು ವ್ಯವಸ್ಥೆಯನ್ನು ಪಾಲಿಸುತ್ತಾರೋ ನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ