ಲಿಂ. ಡಾ.ಮಹಾಂತ ಶ್ರೀಗಳ 6 ನೆಯ ಶರಣೋತ್ಸವ ಕಾರ್ಯಕ್ರಮದಲ್ಲಿ ಬಾಲ್ಕಿ ಶ್ರೀಗಳ ಅಭಿಪ್ರಾಯ
ಹುನಗುಂದ:ನಾವು ಲಿಂಗಾಯತರು ವಚನ ಸಾಹಿತ್ಯದಿಂದ ದೂರ ಸರಿಯುತ್ತಿದ್ದೇವೆ ಹೀಗಾಗಿ ನಾವು ದಿಕ್ಕು ತಪ್ಪುತ್ತಿದ್ದೇವೆ,ವಚನ ಸಾಹಿತ್ಯದಲ್ಲಿರುವ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ ದೇವರು ಹೇಳಿದರು.
ಗುರುವಾರ ಪಟ್ಟಣದ ಬಸವ ಮಂಟಪದಲ್ಲಿ ಶರಣ ಸಿದ್ದಾಂತ ವಿದ್ಯಾಪೀಠದ 53ನೇ ಶಿವಾನುಭವ ತರಬೇತಿ ಶಿಬಿರ ಹಾಗೂ ಮಹಾಂತ ಶಿವಯೋಗಿಗಳ ಆರನೇ ಶರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಶರಣ ಸಿದ್ದಾಂತದ ವಿದ್ಯಾಪೀಠದ ಮೂಲಕ ನಾಡಿನಾದ್ಯಂತ ಸಂಚರಿಸಿ ಬಸವಾದಿ ಶರಣರ ವಿಚಾರಗಳನ್ನು ಪ್ರಚಾರ ಮಾಡಿದ ಶ್ರೇಯಸ್ಸು ಚಿತ್ತರಗಿ ಸಂಸ್ಥಾನಮಠದ ಲಿಂ,ಡಾ.ಮಹಾಂತ ಶ್ರೀಗಳಿಗೆ ಸಲ್ಲುತ್ತದೆ. ಧರ್ಮ ಗುರು ಬಸವಣ್ಣನವರು,ವಚನಗಳೇ ನಮ್ಮಗಳ ಧರ್ಮ ಗ್ರಂಥ ಎಂದು ಎದೆಗಾರಿಕೆಯಿಂದ ಹೇಳಿದ ಬಾಲ್ಕಿ ಮಠ ಬಿಟ್ಟರೇ ಇದೇ ರೀತಿ ನಡೆದುಕೊಂಡ ಮಠವೇ ಇಳಕಲ್ಲ ಮಠವಾಗಿದೆ ಎಂದರು.
ವಿಜಯ ಮಹಾಂತೇಶ ಸಂಘ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಾಂತ ಜೋಳಿಗೆ ಮೂಲಕ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಎನ್ನುವ ಸಂದೇಶವನ್ನು ನಾಡಿಗೆ ನೀಡಿದವರು ಇಳಕಲ್ಲದ ಲಿಂ,ಡಾ.ಮಹಾಂತ ಶ್ರೀಗಳ ಕಾರ್ಯ ಮಾದರಿಯಾಗಿದೆ ಎಂದರು.
ಶಿವಾನುಭವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಧ್ವಜಾರೋಹವನ್ನು ಪಟ್ಟಣದ ಅಕ್ಕನ ಬಳಗದ ಅಧ್ಯಕ್ಷೆ ದೊಡ್ಡಮ್ಮ ಹವಾಲ್ದಾರ ನೆರವೇರಿಸಿದರು.
ಅಧ್ಯಕ್ಷತೆಯನ್ನು ಶಿರೂರಿನ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ವಹಿಸಿಕೊಂಡಿದ್ದರು, ರಾಮದುರ್ಗದ ಸಿದ್ದಣ್ಣವರ ಲಂಗೋಟಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮರೆಗುದ್ದಿಯ ಗುರುಮಹಾಂತ ಶ್ರೀ ಜಮಖಂಡಿಯ ಬಸವರಾಜ ದೇವರು, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮಹೇಶ ಅಥಣಿ, ನಿರ್ದೇಶಕ ಗುರುಬಸವ ಸೂಳೆಬಾವಿ,ಡಾ.ಮಹಾಂತೇಶ ಕಡಪಟ್ಟಿ,ಶಿವಾನಂದ ಕಂಠಿ ಉಪಸ್ಥಿತರಿದ್ದರು.