ಬೆಳಗಾವಿ – ದಿನಾಂಕ 9 ರಂದು ಬೆಳಗಾವಿ ನಗರದ, ಲಿಂಗಾಯತ ಸಂಘಟನೆ ಫ.ಗು ಹಳಕಟ್ಟಿ ಭವನ, ಮಹಾಂತೇಶ್ ನಗರ ಬೆಳಗಾವಿಯಲ್ಲಿ, ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಉಪನ್ಯಾಸಕರಾದ ಡಾ. ನಳಿನಿ ವಾಗ್ಮಾರೆ, ಸಂಶೋಧಕರು ಉಪನ್ಯಾಸಕಿ, ಇವರು ಧರ್ಮಗುರು ಬಸವಣ್ಣವರ ಆದರ್ಶ ತತ್ವಗಳಿಂದ ಪ್ರಭಾವಿತರಾಗಿ ಬಸವಣ್ಣವರ ಆದರ್ಶ ಕುರಿತು ಸಂಶೋಧನೆ ನಡೆಸಿ ಡಾಕ್ಟರ್ ಪದವಿಯನ್ನು ಪಡೆದಿದ್ದಾರೆ. ಬಸವಣ್ಣವರ ತತ್ವಗಳು ಮತ್ತು ಶರಣರ ವಚನಗಳ ವಿಷಯದಲ್ಲಿ ಮತ್ತಷ್ಟು ಸಂಶೋಧನೆ ನಡೆಸುತ್ತಿದ್ದಾರೆ. ಉಪನ್ಯಾಸದಲ್ಲಿ, ಬಸವಣ್ಣನವರು ಅವರ ವಚನಗಳು ಶರಣರ ವಚನಗಳ ಮೂಲ ಮತ್ತು ದಾಖಲಾತಿಗಳ ಕುರಿತು ವಿವರಿಸುತ್ತಾ ಉಪನ್ಯಾಸವನ್ನು ಮಾಡಿದರು.
ಮತ್ತೋರ್ವ ಉಪನ್ಯಾಸಕಿ ಪ್ರೊಫೆಸರ್ ಮಂಜುಶ್ರೀ ಬಸವರಾಜ ಹಾವಣ್ಣವರ,ಸಹ ಪ್ರಾಧ್ಯಾಪಕರು, ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನ ಮಹಾವಿದ್ಯಾಲಯ,ಇವರು ಶರಣೆಯರ ವಚನ ರಚನೆಯಲ್ಲಿ ಸಾಮಾಜಿಕ ಪ್ರಜ್ಞೆ ಎಂಬ ವಿಷಯದಲ್ಲಿ, 12ನೇ ಶತಮಾನದಲ್ಲಿ ಬಸವಣ್ಣನವರು ಲಿಂಗ ಭೇದವಿಲ್ಲದೆ ಸ್ತ್ರೀ ಪುರುಷ ಸಮಾನತೆ ನೀಡಿ ಒಂದು ಸ್ತ್ರೀ ಕೂಡ ವಚನವನ್ನು ರಚನೆ ಮಾಡಬಲ್ಲಳು ಸಮಾಜಪರ ಚಿಂತನೆ ಮಾಡಬಲ್ಲಳು,ಸಮಾಜವನ್ನು ಪರಿವರ್ತಿಸುವಲ್ಲಿ ಅತ್ಯುತ್ತಮ ಪಾತ್ರವಹಿಸಬಲ್ಲಳು, ಎಂದು ಬಸವಣ್ಣನವರು ಸಮಾನತೆ ನೀಡಿದ್ದರ ಬಗ್ಗೆ ಮಾತನಾಡುತ್ತಾ, ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ಇರುವ ಒಂದಿಷ್ಟು ಮೌಲ್ಯಯುತ ವಚನಗಳನ್ನು ವಿಶ್ಲೇಷಣೆ ಮಾಡುವ ಮೂಲಕ ಶರಣೆಯರ ಆಲೋಚನೆ,ಅವರ ಸಮಾಜಪರ ಚಿಂತನೆ ಇವೆಲ್ಲದಕ್ಕೂ ಕನ್ನಡಿ ಹಿಡಿದಂತೆ ಅವರು ಬಹಳ ಸುದೀರ್ಘಕಾಲ ತಮ್ಮ ಉಪನ್ಯಾಸವನ್ನು ನೀಡಿದರು.
ಇದೆ ಸಮಯದಲ್ಲಿ ಪೂಜ್ಯರಾದ ಮೃತ್ಯುಂಜಯ ಮಹಾಸ್ವಾಮಿಗಳು ಉಪಸ್ಥಿತರಿದ್ದು ಸಮಾಜದ ಸದ್ಯದ ಪರಿಸ್ಥಿತಿ ಮತ್ತು ವಚನಗಳ ಓದುವ ಮೂಲಕ ಆ ಎಲ್ಲ ಪರಿಸ್ಥಿತಿಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು.
ಶರಣರಾದ ದೇವರಮನಿಯವರು ಮಠಗಳಿಗೂ ಮತ್ತು ಗುರುಕುಲಕ್ಕೂ ಇರುವ ವ್ಯತ್ಯಾಸಗಳ ಕುರಿತು ಕೆಲವೊಂದು ವಿಚಾರಗಳನ್ನು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶರಣ ಶಂಕರ ಗುಡಸ ಅವರು,ವಚನಗಳನ್ನು ಪಾಲಿಸುವಲ್ಲಿ , ಶರಣ ಶರಣೆಯರು ವಚನ ಸಾಹಿತ್ಯದ ಮೂಲಕ ನಮಗೆ ತೋರಿಸಿ ದಾರಿಯಲ್ಲಿ ನಾವು ಹೇಗೆ ನಡೆಯಬೇಕು,ಈ ಸಮಾಜ ಕಲ್ಯಾಣಕ್ಕೆ ವಚನ ಸಾಹಿತಿ ಎಷ್ಟು ಮುಖ್ಯ, ಎಂಬುದನ್ನ ಬಹಳ ಸುಂದರವಾಗಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಲಿಂಗಾಯತ ಸಂಘಟನೆ ಎಲ್ಲ ಸದಸ್ಯರು,ಪದಾಧಿಕಾರಿಗಳು ಮತ್ತು ಶಂಕರ ಗುಡಸ
ಶರಣ ಬಳಗದ ಎಲ್ಲ ಶರಣ ಶರಣೆಯರು
ಉಪಸ್ಥಿತರಿದ್ದರು. ಸುರೇಶ ನರಗುಂದ ನಿರೂಪಿಸಿದರು.