Homeಸಂಪಾದಕೀಯಮೂಡಲಗಿಯ ಸಮಗ್ರ ಅಭಿವೃದ್ಧಿಯಾಗುವುದು ಯಾವಾಗ ?

ಮೂಡಲಗಿಯ ಸಮಗ್ರ ಅಭಿವೃದ್ಧಿಯಾಗುವುದು ಯಾವಾಗ ?

ಬೆಳಗಾವಿ ಜಿಲ್ಲೆಯ ವಾಣಿಜ್ಯ ನಗರವಾದ ಮೂಡಲಗಿ ತಾಲೂಕಾ ಪ್ರದೇಶವಾಗಿ ಐದಾರು ವರ್ಷಗಳೇ ಕಳೆದರೂ ನಗರದಲ್ಲಿ ಯಾವುದೇ ಅಭಿವೃದ್ಧಿ ಇಲ್ಲದೆ, ನಗರದಲ್ಲಿ ಸ್ವಚ್ಛತೆ ಶಿಸ್ತು ಯಾವುದೂ ಇಲ್ಲದೆ ಅತ್ಯಂತ ಬೇಕಾಬಿಟ್ಟಿಯಾಗಿ ಬೆಳೆದು ನಿಂತಿದ್ದು ಶಾಸಕರು, ಪುರಸಭೆಯವರು, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ…..ಹೀಗೆ ಎಲ್ಲಾ ಇಲಾಖೆಗಳಿಂದಲೂ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಡಲಗಿ ಪುರವೆಂಬುದು ಇತ್ತ ನಗರವೂ ಅಲ್ಲದೆ ಇತ್ತ ಪುರವೆಂಬುದೂ ಅಲ್ಲದೆ ತ್ರಿಶಂಕು ಸ್ಥಿತಿಯಲ್ಲಿದೆ.

ಮೊದಲಿಗೆ ಮೂಡಲಗಿ ನಗರದ ಸ್ವಚ್ಛತೆಯ ಬಗ್ಗೆ ಹೇಳಬೇಕೆಂದರೆ, ಇಲ್ಲಿನ ಒಳ ಚರಂಡಿ ವ್ಯವಸ್ಥೆಯ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು. ಎಲ್ಲ ಕಡೆಗಳಲ್ಲೂ ಗಟಾರುಗಳು ತುಂಬಿಕೊಂಡು ಕಿಚಿಕಿಚಿ ಎನ್ನುತ್ತಿವೆ. ಕೆಲವು ಕಡೆ ಗಬ್ಬು ವಾಸನೆಯೆದ್ದು ಜನತೆ ಗಟಾರದ ವಾಸನೆಯ ಜೊತೆಜೊತೆಗೇ ಊಟವನ್ನೂ ಸೇವಿಸಬೇಕಾಗಿದೆ. ಈ ಬಗ್ಗೆ ಹಲವು ಬಾರಿ ಪತ್ರಿಕೆಗಳಲ್ಲಿ ಬರೆದು ಗಮನ ಸೆಳೆದರೂ ಪುರಸಭೆಯ ಮುಖ್ಯಾಧಿಕಾರಿಗಳಾಗಲಿ, ಆರೋಗ್ಯಾಧಿಕಾರಿಗಳಾಗಲೀ ಯಾವುದಕ್ಕೂ ಸ್ಪಂದಿಸದೆ ಜನತೆಯ ಅಹವಾಲುಗಳಿಗೆ ಬೆಲೆಯಿಲ್ಲದಂತಾಗಿದೆ. ಕೆಲವು ಕಡೆ ತುಂಬಿಕೊಂಡ ಗಟಾರುಗಳಿಂದಾಗಿ ನೆರೆಹೊರೆಯವರು ಜಗಳವಾಡುವ ಪ್ರಸಂಗಗಳೂ ಬಂದು ಹೋಗಿವೆ.
ಈ ಪುರಸಭೆಯವರು ಮಾಡಿರುವ ಒಂದು ಪುಣ್ಯದ ಕಾರ್ಯವೆಂದರೆ ಹಂದಿಗಳನ್ನು ನಿಯಂತ್ರಣ ಮಾಡಿದ್ದು ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳಬೇಕು. ಅಲ್ಲದೆ ಮನೆ ಮನೆಗೆ ಮುಸುರೆ ಎತ್ತುವ ಗಾಡಿ ಬರುತ್ತಿದ್ದು ಗಟಾರಕ್ಕೆ ಮುಸುರೆ ಬೀಳುವುದೂ ಕೂಡ ಕಡಿಮೆಯಾಗಿದೆ. ಆದರೆ ಮೊದಲಿನಿಂದ ತುಂಬಿಕೊಂಡಿರುವ ಗಟಾರುಗಳನ್ನು ಕ್ಲೀನ್ ಮಾಡಿಸುವ ಕೆಲಸವೊಂದನ್ನು ಪುರಸಭೆಯವರು ಮಾಡಿಸಿದರೆ ಜನತೆ ಅವರಿಗೆ ಮತ್ತಷ್ಟು ಕೃತಜ್ಞರಾಗಿರುತ್ತಾರೆ.

ಮೂಡಲಗಿ ನಗರದಲ್ಲಿ ಎದ್ದು ಕಾಣುವ ಅಂಶವೆಂದರೆ ರಸ್ತೆಗಳ, ಸೇತುವೆಗಳ ಅವ್ಯವಸ್ಥೆ. ಕಲ್ಮೇಶ್ವರ ವೃತ್ತದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಡಬಲ್ ರಸ್ತೆಯಾಗಬೇಕು. ಆದರೆ ಇರುವ ರಸ್ತೆಯೇ ತಗ್ಗು ದಿನ್ನೆಗಳಿಂದ ಮುಕ್ತವಾದರೆ ಸಾಕು ಎನ್ನುವಂತಾಗಿದೆ. ಈ ರಸ್ತೆಯ ಡಿವೈಡರ್ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ನಿರ್ಮಾಣ ಮಾಡಿ ಗಿಲಾವ್ ಮಾಡಿಲ್ಲ ! ಇತ್ತೀಚೆಗೆ ನಡೆದ ರಸ್ತೆ ಡಾಂಬರೀಕರಣ ಕೂಡ ಕಳಪೆಯಲ್ಲಿ ಎತ್ತಿದ ಕೈಯಾಗಿದೆ. ಡಿವೈಡರ್ ಯಾರು ಮಾಡಿದರೋ ಗೊತ್ತಿಲ್ಲ ಆದರೆ ಈಚೆಗೆ ಪೊಲೀಸ್ ಸ್ಟೇಶನ್ ವರೆಗೆ ಕೈಗೊಂಡ ಕಾಮಗಾರಿಗೆ ಪ್ರಶಸ್ತಿ ಕೊಡಬೇಕು. ಈಗಾಗಲೇ ಅದು ಕಿತ್ತೆದ್ದು ಹೋಗುವ ತಯಾರಿಯಲ್ಲಿದೆ. ಇದರ ಗುತ್ತಿಗೆದಾರರು ಅಭಿನಂದನಾರ್ಹರು !

ಮೂಡಲಗಿಯ ಪ್ರಸಿದ್ಧ ದನಗಳ ಪೇಟೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆಯೆಂದರೆ ತಪ್ಪಲ್ಲ. ಪರಸ್ಥಳದಿಂದ ಬರುವ ರೈತರಿಗೆ ಉಳಿದುಕೊಳ್ಳಲು ಸರಿಯಾದ ವಸತಿ ವ್ಯವಸ್ಥೆ ಇಲ್ಲ, ದನಕರುಗಳಿಗೆ ಕುಡಿಯಲು ನೀರು ಇಲ್ಲ, ಮೇವು ಇಲ್ಲ, ರೈತರ ದುಡ್ಡಿಗೆ ಸುರಕ್ಷತೆ ಇಲ್ಲ…..ಹೀಗೆ ಇಲ್ಲಗಳ ಕಂತೆಯೇ ಈ ಊರಿನ ದನಗಳ ಪೇಟೆಯಲ್ಲಿ ಸಿಗುತ್ತದೆ.

ಇದೇ ರೀತಿ ಗುರ್ಲಾಪೂರ ಕಡೆಗೆ ಹೋಗುವ ರಸ್ತೆ ಹಳ್ಳದ ಸೇತುವೆ ದಾಟಿದ ಕೂಡಲೇ ಸಿಂಗಲ್ ಆಗುವ ರಸ್ತೆಯ ಒಂದು ಪಕ್ಕದಲ್ಲಿ ತಗ್ಗಿನಲ್ಲಿ ಸರ್ಕಸ್ ಮಾಡುತ್ತ ಸಂಚರಿಸಬೇಕು. ಇಲ್ಲಿಯೇ ಕೋರ್ಟ್, ಪೋಸ್ಟ್ ಆಫೀಸು, ಸಾರಾಯಿ ಅಂಗಡಿ, ಬೈಕ್ ರಿಪೇರಿ ಅಂಗಡಿಗಳು, ತೂಕದ ಸೇತುವೆ ( weigh bridge ) ಇರುವುದರಿಂದ ರಸ್ತೆ ಅತ್ಯಂತ ಬಿಜಿಯಾಗಿರುತ್ತದೆ. ಯಾವಾಗ ಯಾರಿಗೆ ಅಪಘಾತವಾಗುತ್ತದೆಯೋ ಗೊತ್ತಿಲ್ಲ. ರಸ್ತೆ ಮಾತ್ರ ಇಲ್ಲಿ ಅತೀವ ನೋವು ಉಣ್ಣುತ್ತಿದೆ !

ಇನ್ನು ಹಳ್ಳದ ಮೇಲಿನ ಸೇತುವೆಯ ಬಗ್ಗೆ ಒಂದು ಕತೆಯನ್ನೇ ಬರೆಯಬಹುದು. ಹಳೆಯ ಸೇತುವೆ ಏನು ಪಾಪ ಮಾಡಿದೆಯೋ ಏನೋ ಅದರ ರಿಪೇರಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದರ ಮೇಲೆ ಯಾರೂ ಸಂಚರಿಸುತ್ತಲೂ ಇಲ್ಲ ! ಎರಡೂ ಸೇತುವೆಗಳ ಮೇಲೆ ಡಾಂಬರೀಕರಣ ಮಾಡಿ ವಾಹನಗಳು ಎಡಕ್ಕೆ ಸಂಚರಿಸುವಂತೆ ಮಾಡಿದರೆ ದೊಡ್ಡ ಸೇತುವೆಯ ಮೇಲೆ ಸ್ವಲ್ಪ ಟ್ರಾಫಿಕ್ ಕಡಿಮೆಯಾಗಬಹುದು. ಸಣ್ಣ ಸೇತುವೆ ಡಾಂಬರೀಕರಣಗೊಂಡು, ಅದರ ಮುಂದಿನ ರಸ್ತೆ ಟಿಪ್ಪು ಸರ್ಕಲ್ ವರೆಗೆ ಡಬಲ್ ರಸ್ತೆ ಯಾವ ಕಾಲಕ್ಕೆ ಆಗುತ್ತೋ ಕಾದು ನೋಡಬೇಕು.

ಬೆಳೆಯುತ್ತಿರುವ ಮೂಡಲಗಿ ನಗರದಲ್ಲಿ ಬೆಳೆಯುತ್ತಿರುವ ಇನ್ನೊಂದು ಸಮಸ್ಯೆ ಎಂದರೆ ಟ್ರಾಫಿಕ್ ಸಮಸ್ಯೆ. ದಿನದಿಂದ ದಿನಕ್ಕೆ ನಗರದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ರಸ್ತೆಯ ಮಧ್ಯೆ ಬೇಕಾಬಿಟ್ಟಿಯಾಗಿ ಬೈಕ್ ನಿಲ್ಲಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಕಲ್ಮೇಶ್ವರ ಸರ್ಕಲ್ ನ ನಾಲ್ಕೂ ದಿಕ್ಕಿನ ರಸ್ತೆಯಲ್ಲಂತೂ ಅಂಗಡಿಗಳ ಮುಂದೆ ಯಾವುದೇ ದರಕಾರಿಲ್ಲದೆ ರಸ್ತೆಯ ಅರ್ಧದಷ್ಟು ಮಧ್ಯದಲ್ಲಿಯೇ ಗಾಡಿ ನಿಲ್ಲಿಸಿ ಹೋಗುವುದರಿಂದ ಮಹಿಳೆಯರು ಮಕ್ಕಳು ಸಂಚಾರ ಮಾಡುವುದು ಕಷ್ಟವಾಗಿದೆ. ಇದೇ ಪರಿಸ್ಥಿತಿ ಮಾರುಕಟ್ಟೆಯಲ್ಲಿಯೂ ಇದೆ. ಕಾರು, ಬಸ್ಸುಗಳು ಸುರಳಿತವಾಗಿ ದಾಟಿ ಬರುವುದಕ್ಕೆ ಕಷ್ಟವಾಗುತ್ತಿದೆ. ಪೊಲೀಸರು ಶಿಸ್ತಿನ ಟ್ರಾಫಿಕ್ ನಿರ್ವಹಣೆ ಮಾಡುವ ಅಗತ್ಯವಿದೆ.

ಇದಲ್ಲದೆ ಬೇಕಾಬಿಟ್ಟಿಯಾಗಿ ಬೈಕ್ ಮೇಲೆ ಮೂರು ಸೀಟ್ ಹಾಕಿಕೊಂಡು, ವೇಗವಾಗಿ ಹೋಗುವ ದುರ್ವೇಗಿಗಳನ್ನೂ ಪೊಲೀಸರು ನಿಯಂತ್ರಿಸಬೇಕಾಗಿದೆ. ಕೆಲವು ಅಪ್ರಾಪ್ತರೂ ಬೈಕ್ ಓಡಿಸತೊಡಗಿದ್ದು ದಾರಿಯಲ್ಲಿ ನಡೆದು ಹೋಗುವ ಜನರಿಗೇ ಗಾಡಿ ಹಾಯಿಸಿ ಅಪಘಾತ ಮಾಡಿರುವ ಪ್ರಕರಣಗಳು ನಡೆದಿವೆ. ಪೊಲೀಸರು ಬೈಕ್ ಸವಾರರ ಮೇಲೆ ನಿಗಾ ಇಡಬೇಕಾಗಿದೆ. ಪಾರ್ಕಿಂಗ್ ಶಿಸ್ತಿನ ಮೇಲೆಯೂ ನಿಗಾ ಇಡಬೇಕಾಗಿದೆ.

ಹಾಗೆಯೇ ಮುಂದೆ ಸಾಗಿದರೆ ಟಿಪ್ಪು ಸರ್ಕಲ್ ದಿಂದ ಡಬಲ್ ರಸ್ತೆ. ಅಲ್ಲಿ ಡಿವೈಡರ್ ಇದೆ. ದಾರಿದೀಪಗಳಿಲ್ಲ ! ಒಂದೇ ಕಡೆಗೆ ಹಳೆಯ ಲೈಟ್ ಕಂಬಗಳನ್ನೇ ಉಳಿಸಿಕೊಂಡಿದ್ದು ಇನ್ನೊಂದು ಕಡೆಗೆ ಕತ್ತಲೇ ಇರುತ್ತದೆ. ಇದೇ ಡಿವೈಡರ್ ಮುಂದಿನ ತಿರುವಿನತನಕ ಇದೆ ಆದರೆ ಗುರ್ಲಾಪೂರದಿಂದ ರಾತ್ರಿ ವೇಗವಾಗಿ ಬರುವ ಗಾಡಿಗಳಿಗೆ ಇಲ್ಲಿ ಡಿವೈಡರ್ ಇದೆ ಎಂಬ ಸೂಚನೆ ನೀಡಲು ರೇಡಿಯಂ ಹಚ್ಚಬೇಕಾಗಿತ್ತು. ಸಂಬಂಧಪಟ್ಟವರ ದಿವ್ಯ ನಿರ್ಲಕ್ಷ್ಯಕ್ಕೆ ಯಾವ ವಾಹನ, ಯಾರ ಜೀವ ಬಲಿಯಾಗುವುದೊ ಏನೋ !

ಇನ್ನು ಮಾರುಕಟ್ಟೆಗೆ ಬಂದರೆ ನಟ್ಟ ನಡುವೆಯೇ ಇರುವ ಹಳೆಯ ಮಾರುಕಟ್ಟೆ ಕಟ್ಟಡ ಉರುಳಿಸಿ ಹಲವು ವರ್ಷಗಳೇ ಸಂದರೂ ಅದನ್ನು ಅಲ್ಲಿಂದ ನಿವಾರಿಸುವ ಕೆಲಸ ಆಗಿಲ್ಲ. ಊರ ಮರ್ಯಾದೆ ಕೆಡಿಸುತ್ತಿರುವ ಈ ಕಟ್ಟಡದ ಕಲ್ಲು ಮಣ್ಣು ತೆಗೆದು ಸ್ವಚ್ಛ ಮಾಡಿ, ರಸ್ತೆಯ ಮೇಲೆ ಕುಳಿತುಕೊಳ್ಳುವ ಮಾರಾಟಗಾರರಿಗೆ ಇಲ್ಲಿ ಜಾಗ ಕೊಟ್ಟು ರಸ್ತೆಯನ್ನು ಟ್ರಾಫಿಕ್ ನಿಂದ ಮುಕ್ತಗೊಳಿಸಬಹುದು. ಈ ಬಗ್ಗೆ ವಿಚಾರ ಮಾಡಲು ಕೂಡ ಪುರಸಭೆಗೆ ಟೈಮ್ ಸಿಕ್ಕಿಲ್ಲವೆ ? ಅಥವಾ ಅದರ ಬಗ್ಗೆಯೂ ಯಥಾರೀತಿ ನಿರ್ಲಕ್ಷ್ಯವೆ ?

ಶಾಸಕರ ಮಲತಾಯಿ ಧೋರಣೆ ;
ಮೂಡಲಗಿ ನಗರ ಕುರಿತಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತೀವ್ರ ಮಲತಾಯಿ ಧೋರಣೆ ತಾಳಿದ್ದಾರೆ ಎನ್ನಬಹುದು. ಯಾಕೆಂದರೆ, ಮೂಡಲಗಿ ತಾಲೂಕಾಗಿದ್ದನ್ನು ರದ್ದುಪಡಿಸಿದ ಆಗಿನ ಸಚಿವ ರಮೇಶ ಜಾರಕಿಹೊಳಿಯವರ ವಿರುದ್ಧ ಹಾಗೂ ಬಾಲಚಂದ್ರ ಜಾರಕಿಹೊಳಿಯವರ ವಿರುದ್ಧ ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೋರಾಟಕ್ಕಿಳಿದು ಮತ್ತೆ ಮೂಡಲಗಿ ತಾಲೂಕಾಗುವಂತೆ ಮಾಡಿಕೊಂಡಿದ್ದರಿಂದ ಅಂದಿನಿಂದ ಶಾಸಕರು ಮೂಡಲಗಿ ನಗರದ ಬಗ್ಗೆ ಅಷ್ಟಕ್ಕಷ್ಟೇ ಎಂಬಂತಿದ್ದಾರೆ. ಆದರೂ ಈ ಭಾಗದ ಜನರು ಬಾಲಚಂದ್ರ ಜಾರಕಿಹೊಳಿಯವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಶಾಸಕರಿಗೆ ಮಾತ್ರ ಮೂಡಲಗಿಯ ಅಭಿವೃದ್ಧಿ ಯ ಬಗ್ಗೆ ಮನಸಾಗುತ್ತಿಲ್ಲ. ಹೀಗಾಗಿ ಮೂಡಲಗಿ ಮಾತ್ರ ಇನ್ನೂ ಭರದಿಂದ ಮೇಲೇಳುತ್ತಿಲ್ಲ.

ಒಂದು ತಾಲೂಕಾ ಪ್ರದೇಶ ಹೇಗಿರಬೇಕೆಂದರೆ ಮೂಡಲಗಿಯಂತೆ ಮಾತ್ರ ಇರಬಾರದು ! ಐದು ವರ್ಷಗಳಾದರೂ ಇನ್ನೂ ಕೆಲವು ತಾಲೂಕಾ ಕಚೇರಿಗಳು ಇಲ್ಲಿ ಆಗಿಲ್ಲ. ಶಿಕ್ಷಣ ವ್ಯವಸ್ಥೆ ಸುಧಾರಿಸಿಲ್ಲ. ನಗರದ ಅದೇ ಹಳೆಯ ಕನ್ನಡ ಶಾಲೆಗೆ ಅರ್ಧದಷ್ಟು ತಗಡು ಹಾಕಿ ಇನ್ನರ್ಧ ಹಾಗೆಯೇ ಬಿಡಲಾಗಿದೆ ! ಅದೂ ಕೂಡ ಒಂದುಮೂಲೆಯಿಂದ ಯಾವಾಗ ಹಾರಿ ಹೋಗುತ್ತದೆಯೋ ಗೊತ್ತಿಲ್ಲ! ಇಲ್ಲಿ ಸರಿಯಾದ ಶೌಚಾಲಯ ಕೂಡ ಇಲ್ಲ. ಕನ್ನಡ ಶಾಲೆಯ ಆವರಣದಲ್ಲಿರುವ ಮೌಲಾನಾ ಆಜಾದ ಶಾಲೆಯ ಶೌಚಾಲಯದ ಭೀಕರತೆ ವರ್ಣಿಸಲು ಸಾಧ್ಯವಿಲ್ಲ.

ಮೂಡಲಗಿ ಎಂಬ ನಗರದ ಬಗ್ಗೆ ಎಷ್ಟು ಬರೆದರೂ ಸಾಲದು ವಾಣಿಜ್ಯಿಕ ನಗರವಾಗಿರುವ ಇಲ್ಲಿನ ಯಾರಿಗೂ ನಗರ ಸುಧಾರಣೆಯ ಬಗ್ಗೆ ಇಚ್ಛಾಸಕ್ತಿ ಇಲ್ಲದ್ದು ಎದ್ದು ಕಾಣುತ್ತದೆ. ಆದರೆ ರಾಜಕಾರಣ ಮಾತ್ರ ಇಲ್ಲಿನ ಜನರ ನರ ನಾಡಿಗಳಲ್ಲಿ ತುಂಬಿಕೊಂಡಿದೆ. ( ಇನ್ನು ಮೂಡಲಗಿ ನಗರದಲ್ಲಿನ ಕಚೇರಿಗಳು, ಪುರಸಭೆ, ಶಿಕ್ಷಣ ಇಲಾಖೆಯಲ್ಲದೆ ಇತರೆ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದು ಕಾದಂಬರಿಯೇ ಆಗುತ್ತದೆ. ಅದರ ಬಗ್ಗೆ ಮುಂದೆ ನೋಡೋಣ) ಶೈಕ್ಷಣಿಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಪುರಸಭೆಗಳಲ್ಲಿ ರಾಜಕಾರಣ ಭರಪೂರ ತುಂಬಿಕೊಂಡಿದೆ ಆದರೆ ನಗರದ ಸುಧಾರಣೆಯತ್ತ ಮಾತ್ರ ಯಾರೂ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ.

ಉಮೇಶ ಬೆಳಕೂಡ, ಮೂಡಲಗಿ
umeshmbelakud@gmail.com

RELATED ARTICLES

Most Popular

error: Content is protected !!
Join WhatsApp Group