ಬೀದರ – ಮೋದಿಯವರ ನ ಖಾವೂಂಗಾ ನ ಖಾನೆ ದೂಂಗಾ ಎಂಬ ಘೋಷಣೆ ಎಲ್ಲಿ ಹೋಯಿತು ಈಗ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೀಗಳೆದರು.
ಮುಖ್ಯಮಂತ್ರಿಯಾಗಲು ೨೫೦೦ ಕೋಟಿ ಕೊಡಬೇಕು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ವಿಚಾರವನ್ನು ಭಾಲ್ಕಿಯಲ್ಲಿ ಪ್ರಸ್ತಾಪಿಸಿದ ಅವರು, ಕೇಂದ್ರದಲ್ಲಿ ಇರುವವರು ಮೂವರೇ, ಒಬ್ಬರು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಜೆ ಪಿ ನಡ್ಡಾ ಅವರು….ಈ ಮೂವರೇ ಕೋಟಿಗಟ್ಟಲೇ ಕೇಳಿದರೆ ಮೋದಿಯವರ ಘೋಷಣೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಅವರದೇ ಪಕ್ಷದ ಶಾಸಕರು ಹಿರಿಯ ಮುಖಂಡರು ಹೇಳುತ್ತಾರೆ ದೆಹಲಿ ವರೆಗೂ ಲಂಚ ಕೊಡಬೇಕಾಗುತ್ತದೆ ಎಂದು. ಕೇಂದ್ರದ ನಾಯಕರೇ ಲಂಚ ಕೇಳಿದರಾ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಖಂಡ್ರೆ ಆಗ್ರಹಿಸಿದರು.
ಇವಾಗ ಈ ವಿಷಯ ಕೇಂದ್ರ ನಾಯಕರ ಬುಡಕ್ಕೇ ಬಂದುಬಿಟ್ಟಿದೆ ಎಂದ ಅವರು ಕೇಂದ್ರ ಸರ್ಕಾರ ತನಿಖೆ ಸಂಸ್ಥೆಗಳಾದ ಇಡಿ. ಸಿಬಿಐ ಮತ್ತು ಸಿಐಡಿಗಳನ್ನು ದುರುಪಯೋಗ ಮಾಡಿಕೊಂಡಿದೆ. ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಉಚ್ಚ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ ಎಂದು ಆಗ್ರಹಿಸಿದರು.