ಮೂಡಲಗಿ – ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗಲಿ ಎಂಬ ಆಶಯದಿಂದ ಘನ ಭಾರತ ಸರ್ಕಾರ ಕಾನೂನು ಪ್ರಾಧಿಕಾರ ರಚಿಸಿದ್ದು ಆರ್ಥಿಕವಾಗಿ ಹಿಂದುಳಿದ ಬಡವ ಹಾಗೂ ಮಹಿಳೆಯರಿಗೆ ನ್ಯಾಯ ಸಿಗುವ ಭರವಸೆ ಮೂಡಿಸಿದೆ. ಮಹಿಳೆಯರು ಇಂದು ಎಲ್ಲಾ ವಿಭಾಗಗಳಲ್ಲಿ ಮುನ್ನುಗ್ಗುತ್ತಿದ್ದು ಅವರ ಸಬಲೀಕರಣ ಅವಶ್ಯವಾಗಿದೆ ಎಂದು ಮೂಡಲಗಿ ಬಾರ್ ಅಸೋಸಿಯೇಶನ್ ಕಾರ್ಯದರ್ಶಿ ಎಲ್ ವಾಯ್ ಅಡಿಹುಡಿ ಹೇಳಿದರು.
ಅವರು ಸ್ಥಳೀಯ ಶ್ರೀಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಮೂಡಲಗಿ ಇವರ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತದಲ್ಲಿ ಮಹಿಳಾ ಕಾನೂನು ಸಬಲೀಕರಣ ಎಂಬ ವಿಷಯದ ಕುರಿತು ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಇಂದು ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಪಾಲು, ಮಹಿಳೆಯರಿಗೆ ಲಭ್ಯವಿರುವ ಕಾನೂನಿನ ಸೌಲಭ್ಯಗಳು ಶಿಕ್ಷಣ ಪಡೆಯುವದರ ಮೂಲಕ ಕಾನೂನಿನ ಅರಿವು ಮೂಡಿಸಿಕೊಳ್ಳುವ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ವಾಯ್ ಎಸ್ ಖಾನಟ್ಟಿ ಪೆನೆಲ್ ಅಡ್ವೊಕೇಟ್ ಮೂಡಲಗಿ ಅವರು ಮಾತನಾಡುತ್ತ, ಸರಕಾರ ಬಡ ಹಾಗೂ ಮಹಿಳೆಯರ ರಕ್ಷಣೆಗಾಗಿ ಪ್ರಾಧಿಕಾರ ರಚಿಸಿ ಉಚಿತ ಕಾನೂನು ಸೇವೆ ನೀಡುತ್ತಿರುವದು ಸ್ತುತ್ಯರ್ಹ ಕಾರ್ಯ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಅಪ್ಪಯ್ಯ ನಾಯಕರವರು ಮಾತನಾಡುತ್ತಾ, ಮಹಿಳಾ ಸಬಲೀಕರಣದಲ್ಲಿ ಕಾನೂನು ಮತ್ತು ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಸ್.ಡಿ. ಗಾಣಿಗೇರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಇವತ್ತಿನ ಜಾಗತೀಕರಣದ ಸಂದರ್ಭದಲ್ಲಿ ಅನೇಕ ಕಾಯಿದೆಗಳು ಜನರ ತಿಳಿವಳಿಕಯನ್ನು ಹೆಚ್ಚಿಸುತ್ತಿದ್ದು ಎಲ್ಲರೂ ಕೂಡಾ ಕಾನೂನಿನ ಅರಿವು ಪಡೆದುಕೊಳ್ಳುವದು ಅಗತ್ಯವಾಗಿದೆ ಈ ದಿಸೆಯಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಮಹಿಳಾ ವೇದಿಕೆಯ ಸಂಯೋಜಕರಾದ ಶ್ರೀಮತಿ ಶೀತಲ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ರೆಡ್ ಕ್ರಾಸ್ ಸಂಯೋಜಕರಾದ ಹನುಮಂತ ಕಾಂಬಳೆ, ಎನ್.ಎಸ್.ಎಸ್ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ, ನಟರಾಜ್ ಎಚ್ ಭಾಗವಹಿಸಿದ್ದರು. ಬಸಪ್ಪ ಹೆಬ್ಬಾಳ ಸ್ವಾಗತಿಸಿದರು. ಶಿವಕುಮಾರ ನಿರೂಪಿಸಿದರು. ಮಲ್ಲಿಕಾರ್ಜುನ ಸಜ್ಜನವರ ವಂದಿಸಿದರು.