ಮೈಸೂರು -ಮೈಸೂರು ಮಹಾನಗರಪಾಲಿಕೆ ಜಯನಗರ ವಲಯ-2ರಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ-2ರ ಆಯುಕ್ತರಾದ ನಾಗರಾಜು ಅವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿ, ಮಾತನಾಡುತ್ತಾ, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ, ಜವಾಬ್ದಾರಿ. ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಮನುಷ್ಯನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗಿದೆ. ಅದನ್ನು ಉಪಯೋಗಿಸಿಕೊಂಡು, ಮನುಷ್ಯ ಆಸೆಗಳನ್ನು ಪೂರೈಸಿಕೊಳ್ಳಬೇಕೇ ಹೊರತು ದುರಾಸೆಗಳನ್ನಲ್ಲ ಎಂದು ಕಿವಿಮಾತು ಹೇಳಿದರು.
ಹಣದ ಬೆನ್ನು ಹತ್ತಿರುವ ಮಾನವ ಪ್ರಕೃತಿಯನ್ನು ನಾಶ ಮಾಡುತ್ತಾ, ಅಟ್ಟಹಾಸ ಮೆರೆಯುತ್ತಿದ್ದಾನೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಯುವಕರು ಪರಿಸರ ಸಂರಕ್ಷಣೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕೆಂದು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿಯಾದ ಪಾಲಿಕೆಯ ಅಭಿವೃದ್ಧಿ ಅಧಿಕಾರಿ ಚೇತನ್ ಬಾಬು ಅವರು ಮಾತನಾಡಿ, ಈ ಭೂಮಿ ನಾವು ನಮ್ಮ ಹಿರಿಯರಿಂದ ಪಡೆದ ಬಳುವಳಿಯಲ್ಲ. ನಮ್ಮ ಮಕ್ಕಳಿಗೆ ಸಲ್ಲಿಸಬೇಕಾದ ಋಣ. ಆದ್ದರಿಂದ ಮಕ್ಕಳಿಗೆ ಆಸ್ತಿ, ಹಣ, ಅಂತಸ್ತು ಮಾಡುವುದು ಮುಖ್ಯವಲ್ಲ. ಪರಿಸರವನ್ನು ರಕ್ಷಣೆ ಮಾಡಿ, ಶುದ್ಧವಾದ ಗಾಳಿ, ನೀರು, ಬೆಳಕು, ಸ್ವಚ್ಛಂದವನ್ನು ಕಾಪಾಡುವುದೇ ಮುಂದಿನ ತಲೆಮಾರಿಗೆ ಬಿಟ್ಟ ಬಹು ದೊಡ್ಡ ಕೊಡುಗೆ ಎಂದು ತಿಳಿಸಿದರು. ಪರಿಸರ ದಿನಾಚರಣೆ ಎಂಬುದು ಆ ದಿನಕ್ಕೆ ಸೀಮಿತವಾಗದೇ ನಿತ್ಯವೂ ಕೂಡ ಗಿಡ, ಸಸಿಗಳನ್ನು ನೆಟ್ಟು, ಕಾಪಾಡಿ ಜಾಗೃತಿ ವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ಅಭ್ಯಂತರರಾದ ಮಹದೇವಮ್ಮ, ವರ್ಕ್ ಇನ್ಸ್ಪೆಕ್ಟರ್ ಶಿವಸ್ವಾಮಿ, ಆರೋಗ್ಯ ಪರೀಕ್ಷಕರಾದ ಅಶ್ವತ್, ಕೃಷಿ ಇಲಾಖೆಯ ಕುಮಾರ್, ಪುನೀತ್ ಉಪಸ್ಥಿತರಿದ್ದು, ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.