Homeಸುದ್ದಿಗಳುಇಂದು ಕನ್ನಡದ ಹಿರಿಯ ಸಾಹಿತಿ.ವಿಮರ್ಶೆ,ಸಾಹಿತ್ಯ ಚರಿತ್ರೆ ಮತ್ತು ಅಲಂಕಾರಶಾಸ್ತ್ರ ಪ್ರಾಕಾರಗಳಲ್ಲಿ ಪಾಂಡಿತ್ಯಪೂರ್ಣ ಕೃತಿಗಳನ್ನು ರಚಿಸಿದ ಉದ್ಧಾಮ...

ಇಂದು ಕನ್ನಡದ ಹಿರಿಯ ಸಾಹಿತಿ.ವಿಮರ್ಶೆ,ಸಾಹಿತ್ಯ ಚರಿತ್ರೆ ಮತ್ತು ಅಲಂಕಾರಶಾಸ್ತ್ರ ಪ್ರಾಕಾರಗಳಲ್ಲಿ ಪಾಂಡಿತ್ಯಪೂರ್ಣ ಕೃತಿಗಳನ್ನು ರಚಿಸಿದ ಉದ್ಧಾಮ ಸಾಹಿತಿ.ಪ್ರೊ ಎಸ್ ವಿ ರಂಗಣ್ಣನವರು ಜನಿಸಿದ ದಿನ

ಜನನ

ರಂಗಣ್ಣನವರು ೧೮೯೮ ಡಿಸೆಂಬರ ೨೪ ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಹುಟ್ಟಿದರು. ತಂದೆ ವೆಂಕಟಸುಬ್ಬಯ್ಯ, ತಾಯಿ ವೆಂಕಟಲಕ್ಷ್ಮಮ್ಮ.

ಓದು

ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ೧೯೧೯ರಲ್ಲಿ ಬಿ.ಎ. ಪದವಿ (ಮೊದಲಿಗರಾಗಿ ತೇರ್ಗಡೆಯಾದ ಕಾರಣ ಚಿನ್ನದ ಪದಕ)
ಮೈಸೂರು ವಿಶ್ವವಿದ್ಯಾಲಯದಿಂದ ಸುವರ್ಣ ಪದಕದೊಡನೆ ಎಂ.ಎ. ಪದವಿ.

ವೃತ್ತಿ

ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಬೋಧನಾ ವೃತ್ತಿ. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಆರಂಭ. ಕೆಲಕಾಲ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತೆ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪ್ರಾಚಾರ‍್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ. ನಿವೃತ್ತಿಯ ನಂತರವೂ ನಿರಂತರ ಅಧ್ಯಯನ, ಅಧ್ಯಾಪನ. ೧೯೨೧ರಲ್ಲಿ ಎಂ.ಎ.ಪದವಿ ಪಡೆದ ರಂಗಣ್ಣನವರು, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಓದಿ ಅಲ್ಲಿಯೇ ಅಧ್ಯಾಪಕರಾಗಿ ನೇಮಕಗೊಂಡರು. ೧೯೫೪ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ರಂಗಣ್ಣನವರು ತಮ್ಮ ವಿಮರ್ಶಾಕೃತಿಗಳಿಗಾಗಿ ಹೆಸರಾದವರು. ಸ್ಕೌಟ್ಸ್ ಶಿಕ್ಷಣಕ್ಕೆ ಆದ್ಯತೆ ನೀಡಿದ ಪ್ರೊ. ರಂಗಣ್ಣ ರಜತಗಜ ಪ್ರಶಸ್ತಿ ಪಡೆದರು.

ಸಾಹಿತ್ಯ ಸೇವೆ

ಬಿ.ಎಂ.ಶ್ರೀಕಂಠಯ್ಯ ಅವರ ಅಚ್ಚುಮೆಚ್ಚಿನ ಶಿಷ್ಯರಾದ ರಂಗಣ್ಣನವರು ಅವರಂತೆಯೇ ಪ್ರೊಫೆಸರಾಗಿ ಕೆಲಸ ಮಾಡಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮೂರು ವರ್ಷ ಇಂಗ್ಲಿಷ್ ಆನರ್ಸ್ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಎ ಆರ್ ಕೃಷ್ಣಶಾಸ್ತ್ರಿಗಳ ಪ್ರೇರಣೆಯಿಂದ ಬರವಣಿಗೆ ಆರಂಭಿಸಿದ ರಂಗಣ್ಣನವರು, ರಂಗಣ್ಣನವರು ಎಲ್ಲ ವಿಷಯಗಳ ಆನರ್ಸ್ ವಿಧ್ಯಾರ್ಥಿಗಳಿಗೆ ಹ್ಯಾಮ್ಲೆಟ್ ಪಾಠ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಅವರು ಪಾಠ ಮಾಡಿದ ವಿಷಯಕ್ಕೆ ಮತ್ತೆ ಯಾವ ಪುಸ್ತಕವನ್ನೂ ಮುಟ್ಟುವ ಅಗತ್ಯ ಇರುತ್ತಿರಲಿಲ್ಲ.

ರಂಗಣ್ಣನವರು ಯಾವುದೇ ಕವಿ ಅಥವಾ ವಿಷಯವನ್ನು ಕುರಿತ ಮುಖ್ಯ ವಿಮರ್ಶಕರ ಅಭಿಪ್ರಾಯಗಳನ್ನೆಲ್ಲ ಹೇಳಿಯೇ ವಿಮರ್ಶಿಸುತ್ತಿದ್ದರು. ಅವರು ಆಗಿನ ಕಾಲದಲ್ಲಿ ‘ರೆಟಿರಿಕ್’ ಎಂದು ಕರೆಯುತ್ತಿದ್ದ ಅಲಂಕಾರ ಶಾಸ್ತ್ರವನ್ನೂ ಸಾಹಿತ್ಯ ಚರಿತ್ರೆಯನ್ನೂ ಕಲಿಸುತಿದ್ದರು. ಯಾವ ವಿಷಯವನ್ನಾದರೂ ತೆಗೆದುಕೊಳ್ಳಲಿ, ಅದನ್ನು ಕುರಿತ ಪ್ರಮುಖ ಅಭಿಪ್ರಾಯಗಳ ಸಂಗ್ರಹ, ವಿಶ್ಲೇಷಣೆ, ಎಲ್ಲ ಮುಖ್ಯ ವಾದಗಳ ಕ್ರಮವಾದ ಅಧ್ಯಯನ, ಮುಖ್ಯ ವಿಮರ್ಶಕರ ಮಾತುಗಳಲ್ಲಿ(ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು) ಅವರ ಅಭಿಪ್ರಾಯಗಳ ಪರಿಚಯ, ಅನಂತರ ತಮ್ಮ ಅಭಿಪ್ರಾಯದ ಮಂಡನೆ, ಹೀಗೆ ಪ್ರೊ. ಎಸ್ ವಿ ರಂಗಣ್ಣನವರು ಸಮೂಲಾಗ್ರವಾಗಿ ಪಾಠ ಮಾಡುತ್ತಿದ್ದರು. ಆದರೆ ಅಭಿಪ್ರಾಯ ತಪ್ಪು ಎಂದು ಅವರಿಗನ್ನಿಸಿದಾಗ ಮಾತು ಖಾರವಾಗಿರುತ್ತಿತ್ತು. ಪಾಠದಲ್ಲಿ ಶ್ರದ್ದೆಯಿದ್ದ ವಿದ್ಯಾರ್ಥಿಯನ್ನು ಕಂಡರೆ ರಂಗಣ್ಣನವರಿಗೆ ವಾತ್ಸಲ್ಯ. ಅವರು ಒಬ್ಬ ವಿದ್ಯಾರ್ಥಿಯನ್ನು ಕನ್ನಡದಲ್ಲಿ ಏಕವಚನದಲ್ಲಿ ಮಾತನಾಡಿಸಿದರೆ ಅವನು ಅವರಿಗೆ ಮೆಚ್ಚಿಕೆಯಾದ ಎಂದರ್ಥ.ಎಲ್ಲವಾದರೆ ಇಂಗ್ಲೀಷಿನಲ್ಲಿ ಮಾತನಾಡಿಸುವರು, ಕನ್ನಡದಲ್ಲಿ ಮಾತನಾಡಿಸಿದರೂ ’ಮಾಡೋಣ’,’ನೋಡೋಣ’ ಎಂದು ಮಾತನಾಡುತ್ತಿದ್ದರು.

ವ್ಯಕ್ತಿತ್ವ

ರಂಗಣ್ಣನವರು ಯಾವಾಗಲೂ ವರಪೂಜೆಗೆ ಹೊರಟ ವರನಂತೆ ಶಿಸ್ತಾಗಿರುತ್ತಿದ್ದರು. ಒಳ್ಳೆಯ ಅಭಿರುಚಿಯಿಂದ ಆರಿಸಿದ ಬಟ್ಟೆಯ ಸೂಟು, ಅದಕ್ಕೆ ಒಪ್ಪುವ ನೆಕ್-ಟೈ,ಜರತಾರಿ ರುಮಾಲು, ಒಂದಿಷ್ಟೂ ಧೂಳಿಲ್ಲದ ಷೂಗಳು ರಂಗಣ್ಣನವರು. ಬಿ.ಎಂ.ಶ್ರೀ.ಯವರ ಶಿಷ್ಯರೇ. ರಂಗಣ್ಣನವರದು ಅಪೂರ್ವ ವಿದ್ವತ್ತು. ತಮಗೆ ಆಸಕ್ತಿ ಇದ್ದ ವಿಷಯಗಳಲ್ಲಿ ಕೆಲವೇ ದಿನಗಳ ಹಿಂದೆ ಪ್ರಕಟವಾದ ಪುಸ್ತಕಗಳನ್ನು ಸಹ ಅವರು ಓದಿರುತ್ತಿದ್ದರು. ಅವರ ವಿದ್ವತ್ತಿಗೆ ನೆರವಾದದ್ದು ಅವರ ಅಸಮಾನ ಜ್ಞಾಪಕ ಶಕ್ತಿ. ಅವರ ವಿದ್ಯಾರ್ಥಿಗಳೆಲ್ಲ ಅವರ ನೆನಪಿನಲ್ಲಿ ಇರುತ್ತಿದ್ದರು.ಓದಿದುದೆಲ್ಲ ಸ್ಪಷ್ಟವಾಗಿ ನೆನಪಿರುತ್ತಿತ್ತು. ಮಾತನ್ನು ಉದಹರಿಸಿದರೆ, ಖಚಿತವಾಗಿ ಉದಹರಿಸುತ್ತಿದ್ದರು. ಅವರ ಬರಹ, ಇಂಗ್ಲಿಷಿನಲ್ಲಿ ಆಗಲಿ ಕನ್ನಡದಲ್ಲಿ ಆಗಲಿ, ಮುತ್ತಿನಂತಹ ಬರಹ. ದೊಡ್ಡ ಸ್ಫುಟವಾದ ಗುಂಡು ಅಕ್ಷರಗಳು.

ಕನ್ನಡ ಕೃತಿಗಳು

ಮುದ್ದಣನನ್ನು ಕುರಿತು ಬರೆದ ‘ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು’ ಪ್ರಸಿದ್ದ ಪ್ರಬಂಧ. ಅನೇಕರಿಗೆ ಅದರಿಂದ ಅಸಮಾಧಾನವೂ ಆಯಿತು. ಮುದ್ದಣನ ವಿಷಯ ರಂಗಣ್ಣನವರ ನಿಲುವು ಒಪ್ಪಲಿ ಬಿಡಲಿ, ವಿಮರ್ಶೆಯಲ್ಲಿ ಅತ್ಯಭಿಮಾನ ಸಲ್ಲದು, ನಮಗೆ ಯಾವುದೇ ಸಾಹಿತ್ಯೇತರ ಕಾರಣದಿಂದ ಪ್ರಿಯವಾದ ಕೃತಿಯ ಮೌಲ್ಯಮಾಪನ ಮಾಡುವಾಗ ನಿರ್ಲಿಪ್ತತೆ, ಎಚ್ಚರಿಕೆ ಅಗತ್ಯ ಎಂಬುದು ಅವರ ನಿಲುವು. ಕನ್ನಡದ ಮಟ್ಟಿಗೆ ಶೈಲಿಯನ್ನು ಅಭ್ಯಾಸ ಮಾಡಿದ ಪ್ರಾರಂಭದ ವಿಮರ್ಶಕರಲ್ಲಿ ಮೊದಲಿಗರು. ಅವರ ಬೃಹತ್ ವಿಮರ್ಶನಾಕೃತಿ, ‘ಪಾಶ್ಚಾತ್ಯ ಗಂಭೀರ ನಾಟಕಗಳು’ ಒಂದು ಆಕರಗ್ರಂಥ. ಸುಮಾರು ೧೩೫೦ ಪುಟಗಳ ಈ ಕೃತಿಯಲ್ಲೂ ವಿವರವಾದ ವಿಮರ್ಶೆ ಕೊಡಲು ಅವರಿಗೆ ಸಾಧ್ಯವಾಗಿಲ್ಲ.ಆದರೆ ಇಡೀ ಯೂರೋಪಿನ ಗಂಭೀರ ನಾಟಕದ ಬೆಳವಣಿಗೆಯ ವಿಷಯವನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ. ಅವರು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣ ಪ್ರಾರಂಭವಾದಾಗ ಮುಖ್ಯ ಸಂಪಾದಕರಾಗಿದ್ದರು. ಕಾಳಿದಾಸನ ಮೂರು ನಾಟಕಗಳ ವಿವರವಾದ ವಿಮರ್ಶೆಯನ್ನು ಮೂರು ಕೃತಿಗಳಲ್ಲಿ ಕೊಟ್ಟಿದ್ದಾರೆ. ಅವರು ಇದ್ದಷ್ಟು ದಿನ ಇಂಗ್ಲಿಷ್, ಕನ್ನಡ, ಸಂಸ್ಕೃತ, ಯುರೋಪಿಯನ್ ಸಾಹಿತ್ಯಗಳ ಬಗ್ಗೆ ಏನೇ ತಿಳಿವಳಿಕೆ ಬೇಕಾದರೂ ಒಂದು ಜೀವಂತ ಗ್ರಂಥಾಲಯ ಇದ್ದಂತಾಗಿತ್ತು.

ಅವರ ಇತರ ಕೃತಿಗಳು:

  • ಕುಮಾರವ್ಯಾಸ
  • ಶೈಲಿ ಭಾಗ-೧,೨,೩
  • ಹೊನ್ನಶೂಲ
  • ಪಾಶ್ಚಾತ್ಯ ಗಂಭೀರ ನಾಟಕಗಳು
  • ರಂಗಬಿನ್ನಪ
  • ಕವಿಕಥಾಮೃತ
  • ಕೋಲ್ ಕೋಲ್ ಕೂಡಿ ಬರಲಿ
  • ಕುಮಾರವ್ಯಾಸ ವಾಣಿ
  • ವಿಡಂಬನೆ
  • ಕನ್ನಡ ಸಾಹಿತ್ಯದಲ್ಲಿ ಹಾಸ್ಯ.

ಇಂಗ್ಲಿಷ್ ಕೃತಿಗಳು

  • ಬಿ.ಎಂ.ಶ್ರೀಕಂಠಯ್ಯ
  • ಓಲ್ಡ ಟೇಲ್ಸ್ ರಿಟೋಲ್ಡ
  • ಆನ್ ದಿ ಸೆಲ್ಫ್

ಪ್ರಶಸ್ತಿಗಳು;

ಪುರಸ್ಕಾರ

‘ ರಂಗಬಿನ್ನಪ’ ಕೃತಿಗೆ ೧೯೬೫ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ.

ರಂಗಣ್ಣನವರು ೧೯೭೬ ರಲ್ಲಿ ಶಿವಮೊಗ್ಗಾದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಎಸ್.ವಿ.ರಂಗಣ್ಣ ಅವರಿಗೆ ೫೫ ವರ್ಷ ತುಂಬಿದ ಮತ್ತು ಸರ್ಕಾರಿ ಸೇವೆಯಿಂದ ವಿಶ್ರಾಂತಿ ಪಡೆದ ಸಂದರ್ಭದಲ್ಲಿ ೧೯೫೪ರ ಜನವರಿ ೨೬ರಂದು, ಅವರ ಮಿತ್ರರೂ ಶಿಷ್ಯರೂ ಒಪ್ಪಿಸಿದ ಸ್ಮರಣ ಸಂಚಿಕೆ ಬಾಗಿನ. ಇದರ ಸಂಪಾದಕತ್ವವನ್ನು ನೀನಾಸಂ, ಹೆಗ್ಗೋಡುವಿನ ಕೆ.ವಿ.ಸುಬ್ಬಣ್ಣ ಹಾಗೂ ಹೆಸರಾಂತ ಪ್ರಾಧ್ಯಾಪಕ, ಅಂಕಣಕಾರ ಹಾ.ಮಾ.ನಾಯಕ ವಹಿಸಿಕೊಂಡಿದ್ದರು.

ಮರಣ

೧೯೮೭ ಫೆಬ್ರವರಿ ೧೭ರಂದು ತೀರಿಕೊಂಡ ರಂಗಣ್ಣನವರು ಕನ್ನಡನಾಡಿನಲ್ಲಿ ಆಧುನಿಕ ಯುಗದ ದೈತ್ಯ ವಿದ್ವಾಂಸರಲ್ಲಿ ಒಬ್ಬರು. ಡಾಕ್ಟರ್. ಎಸ್. ವಿ. ರಂಗಣ್ಣನವರು ಮರಣದ ವಿಷಯದ ಬಗ್ಗೆ ಯೋಚಿಸಿದ್ದರು, ಹಾಗು ಬರೆದಿದ್ದರು: “ಮರಣವೆಂಬುವುದು ಬಾಳಿನ ಕಟ್ಟ ಕಡೆ ಸಾಫಲ್ಯ. ಅಂಜುವುದೇಕೆ ಜವರಾಯನಿಗೆ? ಅಂಜಬೇಕಯ್ಯ ಜೇವನಕ್ಕೆ.” , ’ಜನನಕ್ಕೆ ಒಂದೇ ಮಾರ್ಗ, ಮರಣಕ್ಕೆ ಹತ್ತೆಂಟು. ಇದರ ಗುಢಾರ್ಥವೇನು, ಶಾಶ್ವತ ರಂಗ? ಬಾಳುವುದು ದೊಡ್ಡ ಹೊಣೆಗಾರಿಕೆ, ಸಾಯುವುದು ಅತಿ ಸುಲಭ.”

ಸ್ವಾರಸ್ಯ

ಪ್ರೊ ಎಸ್ ವಿ ರಂಗಣ್ಣನವರು ೧೯೨೦ರ ದಶಕದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ಮಂಡ್ಯದ ಒಬ್ಬ ರೈತ ಅವರ ಎದುರು ಕುಳಿತು ಪಯಣಿಸುತ್ತಿದ್ದ. ಆತನ ಬದುಕಿನ ಸರಳತೆ, ನಗುಮೊಗ, ಆನಂದವನ್ನು ಕಂಡು ಇಷ್ಟು ಓದಿ, ಹೆಸರು ಗಳಿಸಿದ ಪ್ರೊಫೆಸರ್ ಆದ ನನಗೆ ಇಷ್ಟು ಖುಷಿಯಾಗಿ ಜೀವಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ತಮ್ಮನ್ನೇ ಪ್ರಶ್ನಿಸಿಕೊಂಡ ರಂಗಣ್ಣ, ಅದೇ ಸ್ಪೂರ್ತಿಯಿಂದ ರಂಗಬಿನ್ನಪ ಕೃತಿ ಬರೆದರು. ವಚನದ ರೂಪದಲ್ಲಿರುವ ರಂಗಬಿನ್ನಪ, ಪದ್ಯ-ಗದ್ಯ ಎರಡನ್ನೂ ಮೀರಿದ ಶೈಲಿಯಲ್ಲಿ ಬಲು ಜನಪ್ರಿಯತೆ ಪಡೆಯಿತು.

ಮಾಹಿತಿ ಕೃಪೆ: ವಿಕಿಪೀಡಿಯ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ

RELATED ARTICLES

Most Popular

close
error: Content is protected !!
Join WhatsApp Group