ಮೂಡಲಗಿ:- ಪಟ್ಟಣದ ಗಾಂಧಿ ಚೌಕ, ಪತ್ತಾರ ಓಣಿಯಲ್ಲಿ ಒಳಚರಂಡಿಯ ಮೇಲೆ ಹಾಕಿರುವ ಕಾಂಕ್ರೀಟಿನ ಸಳಿಗಳು ಮೇಲೆ ಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಪುರಸಭೆಯ ದಿವ್ಯ ನಿರ್ಲಕ್ಷ್ಯ ದಿಂದಾಗಿ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
ಶ್ರೀಧರ ಕುಂಬಾರ ಎಂಬ ಯುವಕನಿಗೆ ಗಟಾರದಲ್ಲಿ ಉಳಿದ ಕಬ್ಬಿಣದ ಸಳಿ ಆಳವಾಗಿ ತರಿದು ಗಾಯಗೊಳಿಸಿದ್ದು ಚಿಕಿತ್ಸೆಗೆ ಸುಮಾರು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾಗಿ ಆಸ್ಪತ್ರೆ ಖರ್ಚು ಆಗಿದೆ ಎನ್ನಲಾಗುತ್ತಿದೆ.
ಈ ಹುಡುಗನಿಗೆ ತಂದೆ ಇಲ್ಲದ ಕಾರಣ ಈ ಹುಡುಗನ ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದಾನೆ. ಗಾಯಕ್ಕೆ ಹೊಸಮನೆ ದವಾಖಾನೆಯಲ್ಲಿ ಇಪ್ಪತ್ತು ಹೊಲಿಗೆ ಹಾಕಿದ್ದಾರೆ ಅಂತ ಹೇಳಲಾಗಿದ್ದು ಪುರಸಭೆಯವರ ನಿರ್ಲಕ್ಷ್ಯದಿಂದಾಗಿ ಗಾಯಗೊಂಡ ಬಾಲಕನಿಗೆ ಪರಿಹಾರವನ್ನು ಪುರಸಭೆಯವರೇ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಾನು ಬಡವ ಎಲ್ಲಿಂದ ದುಡ್ಡು ತರಲಿ ಎಂದು ಹುಡುಗನ ಚಿಕ್ಕಪ್ಪ ಶಿವಾನಂದ ಕುಂಬಾರ ಸಂಕಟದಿಂದ ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೊಡಿಕೊಂಡರು.
ಚರಂಡಿಗಳ ಮೇಲೆ ಹಾಕಲಾಗಿದ್ದ ಸಿಮೆಂಟ್ ಛಾವಣಿ ಅತ್ಯಂತ ಕಳಪೆ ದರ್ಜೆಯದಾಗಿದ್ದು ಆಗಲೇ ಕಬ್ಬಿಣದ ಸಳಿಗಳು ಮೇಲೆದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಬಗ್ಗೆ ಕಣ್ಣಿದ್ದೂ ಕುರುಡಾಗಿರುವ ಪುರಸಭೆಯವರು ಇಂಥ ಅಪಾಯ ಸಂಭವಿಸಿದಾಗ ಜವಾಬ್ದಾರಿಯುತವಾಗಿ ವರ್ತಿಸಿ ಅಪಾಯಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಬೇಕಾಗುತ್ತದೆ ಎಂಬುದು ಸಾರ್ವಜನಿಕರ ಅಂಬೋಣ