ರವಿವಾರದ ಕವನಗಳು

Must Read

ಅತಿಥಿಗಳು ನಾವು

ಜಗತ್ತಿಗೆ ಬಂದ ಅತಿಥಿಗಳು
ಮಾಲಿಕರೆಂಬ ಗತ್ತು
ಬಂದು ಹೋಗುವ ಮಧ್ಯ
ಭಿನ್ನತೆಯ ಠಾವು
ಆಮಿಷಗಳ ಬಲಿಯಾಗಿ
ಅಧಿಕಾರದ ಮದವೇರಿ
ಸಂಪತ್ತು ಗಳಿಕೆಯ ಹುನ್ನಾರದಿ
ಹೊಸಗಿ ಹಾಕುತಿರುವೆವು
ನನ್ನವರೆಂಬ ಹೂ ಬಳ್ಳಿ
ನಾನಷ್ಟೆ ಎಂಬ ಭ್ರಮೆ
ಕಳಚುವ ಪರಿ
ಬಂದೆ ಬರುವುದು
ನಶ್ವರದ ಬದುಕು
ಅರ್ಥ ಮಾಡಿಕೊಳ್ಳದ
ಮೂಢತೆ ಆವರಿಸಿ
ಕೃತಕಗಳ ಮರ್ಮ
ಸ್ವೇಚ್ಛಾಚಾರದ ನಡವಳಿಕೆ
ಕಡಿವಾಣ ವಿಲ್ಲದ ಬಂಡಿ
ಎತ್ತೆಂದರೆತ್ತ ಸಾಗಿ
ಮಧುರ ಮನಗಳಿಗೆ
ಹಾಕಿದೆ ಬೀಗ
ತಕ್ಕಡಿಯ ಹಾಗೆ ಹೋರಳುತ
ಸಕ್ಕರೆಯ ಬಯಸುತ
ಅಕ್ಕರೆಯ ಮಾತನಾಡುವ
ನಟನ ಬದುಕು
ಪರದೆ ಮುಗಿಯುವ
ಮುನ್ನ ಎಚ್ಚರಿಕೆ ಇರಲಿ
ಕ್ಷಣ ಹೊತ್ತು
ಅಣಿ ಮುತ್ತು
ಇರಲಿ ಕೊಡುಗೆ
ನಿನ್ನದೊಂದು ಕೈವಾಡದಿ
ಆಸೆ ಪಡದೆ
ಇದ್ದುದನ್ನು ಅನುಭವಿಸು
ಮತ್ತಷ್ಟಿದ್ದರೆ ಹಂಚು
ಊಟವೆ ಸ್ವಲ್ಪ ಕಾಲ
ಉಳಿವುದು ಗೊತ್ತಿದ್ದರೂ
ಹೊಟ್ಟೆಯ ಮೇಲೆ
ಬಟ್ಟೆ ಕಟ್ಟದಿರು
ಕಲ್ಮಶವ ಸರಿಸಿ
ಸ್ವಾದವ ಅರುಹಿ
ಮಾನವೀಯ ಮಾನವನಾಗು
ದುಸ್ತರ ದಿನ ದೂರಿಲ್ಲ
ಮಾತ್ಸರ್ಯದ ಮನವ
ತಿಳಿಯ ಹೊನಲಾಗಿಸು
ತಿಥಿ ಆಗುವ ಮುನ್ನ
ಅತಿಥಿ ಎಂಬುದನು
ಮರೆಯದಿರು ಇನ್ನ
ಬುದುಕು ಪಯಣ
ಪಯಣದ ರಸದೌತಣ ಅನುಭವಿಸು
ವೃಥಾ ಕಾಲಹರಣ ಬೇಡ
ಮುಖಸ್ತುತಿಗೆ ಕೈ ಹಾಕದಿರು
ನಿನ್ನ ಸ್ತುತಿಸುವ ಹಾಗೆ
ಬದುಕಿ ತೋರಿಸು
ಮನವ ಮಲ್ಲಿಗೆಯಾಗಿಸಿ
ಸದಾಚಾರದ ಘಮ ಬೀರಿ
ಸಹಾರದ ಎಸಳಾಗಿ
ಮಣ್ಣಾಗುವ ಹೊತ್ತು
ಬೇಡ ಗತ್ತಿನ ಮತ್ತು
ಮಣ್ಣಾದರು ಬರಲು
ಮೀನ ಮೇಷ
ಮಾಡುವ ಸ್ಥಿತಿಗೆ
ಮಾಯಕಾರ ತಂದು ನಿಲ್ಲಿಸಿದ
ಇನ್ನಾದರೂ ಮುಂದಡಿ ಇರಿಸು
ಕನ್ನ ಮಾಡದೆ
ಸನ್ಮತಿಯ ಹೊಂದು.

ರೇಷ್ಮಾ ಕಂದಕೂರ


ಅಪ್ಪ ನಿನಗೆ ವಯಸ್ಸಾಗಲ್ಲ

ಕೆಸರು ಮೈಗೆ ಮೆತ್ತಿಕೊಂಡು
ನೇಗಿಲ ಮೇಳಿ
ದಿನದ ಸೂರ್ಯನಂತೆ ಹೊಳೆದು
ಬೆವರ ಹನಿಯ ಭೂಮಿಗಿಳಿಸಿ
ಹಗಲೆಲ್ಲಾ ಕೆಸರ ಗದ್ದೆಯಲ್ಲಿ
ಉತ್ಸಾಹದಿಂದ ದುಡಿಯುತ್ತಿದ್ದೆ
ಅಪ್ಪಾ ನೀನಂದು
ನನಗದು ಅರಗುವುದರೊಳಗೆ
ನೀ ಮುದುಕನಾಗಿದ್ದೆ
ನಾ ಅಪ್ಪನಾಗಿದ್ದೆ
ಅಪ್ಪ ನಿನಗೆ ವಯಸ್ಸಾಗಲ್ಲವೆಂಬುದು
ನನ್ನ ಹಣೆ ಬೆವರಿನಿಂದ ನಾನರಿತಿದ್ದೆ

ಹೊಂಡು ನೀರಿನಲಿ ಮುಖ ತೊಳೆದು
ಹೊಲದ ಬದುವಿನಲಿ ಬಾಗಿ ಕುಳಿತು
ರೊಟ್ಟಿ ಮುರಿಯಲು ನೀ ಕೈಚಾಚಿದಾಗ
ನಿನ್ನ ಅಂಗೈ ಬೊಬ್ಬೆಗೆ
ಕನ್ನಡಿ ಬೇಕಿರಲಿಲ್ಲ
ಅಮ್ಮ ನೋವಲಿ ವಟಗುಟ್ಟಿದಾಗ
ಸುಮ್ಮನೆ ನೀ ಚಂದ್ರನಂತೆ ನಕ್ಕೆಯಲ್ಲ
ಆಗದು ನನಗೊಂದು ತಿಳಿಯಲಿಲ್ಲ
ಬೆಪ್ಪನಾಗಿ ನೋಡುವುದರ ಹೊರತು

ನೀನಾಗ ನೋವು ಸಹಿಸಿದ್ದು
ಈಗೀಗ ನನ್ನ ಕಾಡಲಾರಂಭಿಸಿದೆ
ಮರಕೊರಕ ಹುಳುವಿನಂತೆ
ಅದು ನಮ್ಮ ಹೊಟ್ಟೆ ತುಂಬಿಸುವ
ಭರಾಟೆಯ ಹೋರಾಟವೆಂದು
ಬಾಳಿನರ್ಥದ ಗುಟ್ಟೆಂದು
ಅಪ್ಪ ನಿನಗೆ ವಯಸ್ಸಾಗಲ್ಲ
ನಿನ್ನ ದುಡಿಮೆ ತ್ಯಾಗಕ್ಕೂ

ನಾ ಎಳೆಯರ ಕೆಳೆಯ
ನೀ ಎತ್ತುಗಳ ಗೆಳೆಯ
ಎರರಿಗೆ ಎದೆ ಕಳೆದ
ನೀವು ಪರರುಪಕಾರಿ
ಜೀವನ ಕಲೆಯ ಚೇತೋಹಾರಿ
ಕುಡುಗೋಲು ಬಾರುಕೋಲು ಹಾರೆ ಬುಟ್ಟಿ
ನೀನಿವುಗಳ ಒಡನಾಡಿ
ನಾವು ಬಾನಾಡಿ
ಅಪ್ಪ ನಿನಗೆ ವಯಸ್ಸಾಗಲ್ಲ
ಇಳೆಯ ದಂದುಗದಲ್ಲಿ

ತುತ್ತು ಕಲಸುವ ಕೈಯಿಗೆ
ಸತ್ವ ಒದಗಿಸುವ ಅಪ್ಪ
ನೀನಾಗಿದ್ದೆ ಅಂದು
ಅಂಬೆಗಾಲಿಗೆ ಹಿಂಬುಗಾಲಾಗಿ
ನಾನಿಂದು ನಿಂತಾಗ
ಸಂಸಾರ ರಥ ಎಳೆಯುವ
ಮರ್ಮ ನಾನರಿತಿದ್ದೆ
ಅಪ್ಪ ನಿನಗೆ ವಯಸ್ಸಾಗಲ್ಲವೆಂಬುದು
ನಾನೂ ಸಾಧಾರ ಪಡಿಸಿದ್ದೆ

ಕೆ ಬಿ ವೀರೇಶ
ಮೊ:9980489569


ವಿದ್ಯಾರ್ಥಿಯ ಪ್ರಲಾಪ

ಶಾಲೆ ಎಂಬುದೆ ಕಾಣದಾಗಿದೆ
ಪುಸ್ತಕ ಕನ್ನಡಿ ಗಂಟಾಗಿದೆ
ಗುರುಗಳ ದರುಶನವಿಲ್ಲದೆ ಮನ
ನೊಂದು ಬೆಂದು ನಲುಗಿ ಹೋಗಿದೆ.
ಪ್ರತಿ ವರುಷ ಈ ಹೊತ್ತಿಗೆ
ತೆರೆಯುತ್ತಿದ್ದವು ನಮ್ಮ ಹೊತ್ತಿಗೆ
ಓದು ಬರಹ ಸುಖವಾಗಿ ಸಾಗಿ
ಚಡಪಡಿಸುತ್ತಿದ್ದೆವು ಇನ್ನಷ್ಟು ಓದಿಗಾಗಿ.
ಬರಬಾರದೇನೋ ಬಂದಿತು ಹೀಗೆ
ಹೀಗಾದರೆ ನಮ್ಮ ಅಭ್ಯಾಸ ಹೇಗೆ?
ಓದುವುದ್ಯಾವಾಗ? ಬರೆಯುವುದ್ಯಾವಾಗ?ನಮ್ಮಯ ಹಣೆ ಬರಹ ಹೀಗ್ಯಾಕೆ?.
ಎಂದಿಗೆ ಕೊನೆಯೋ ಯಾರೂ ಕಾಣರು
ಶಾಲೆಯ ಪ್ರಾರಂಭ ಯಾರೂ ಹೇಳರು
ಮನೆ ಹಿಡಿದಿಹೆವು ಟಿವಿ ನೋಡುತ
ಖಂಡಿಸುವವರೆ ನೋಡೆನ್ನುವರು ಖಚಿತ.
ವಿಷಯವೇನೋ ತಿಳಿತಿದೆ ತಿಳಿಯಾಗಿ
ಕೇಳದು ಗುರುಗಳ ದನಿ ಅಲೆಅಲೆಯಾಗಿ
ಗುರು ಶಿಷ್ಯ ಬಾಂಧವ್ಯ ದೊರೆಯದೆ ಹೋಗಿದೆ
ಇನ್ನೆಷ್ಟು ದಿನವಿದು ತಿಳಿಯದಾಗಿದೆ.
ಹೆದರಿದರೆ ಹೆಮ್ಮಾರಿ ಹೋಗದು ಎದುರಿಸಿ ಓಡಿಸಿ ಈ ಕರೋನ ಎಂಬ ರೋಗವನ್ನು .

ಎಂ. ಸಿ .ಅಗಸಗಿ, ಶಿಕ್ಷಕರು

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group