ಸಿಂದಗಿ: ಹಲವಾರು ಪ್ರಕಾಶನಗಳು ಇಂದು ವ್ಯಾಪಾರೀಕರಣ ಅವಲಂಬಿಸಿಕೊಂಡು ಬಂದಿವೆ. ಆದರೆ ಯಾರೂ ಅಳಿಸಲಾಗದ ಚರಿತ್ರೆ ಬರೆದು ಹಲಸಂಗಿ ಗೆಳೆಯರ ಬಳಗ ಇತಿಹಾಸ ಸೃಷ್ಟಿಸಿದೆ ಅಲ್ಲದೆ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಫ.ಗು ಹಳಕಟ್ಟಿ ಸಂಸ್ಥೆಯಾಗಿದೆ ಅದೇ ದಾರಿಯಲ್ಲಿ ಸಿಂದಗಿ ನೆಲೆ ಪ್ರಕಾಶನ ಸಂಸ್ಥೆ ಹಾಗೂ ಎಂ. ಎಂ. ಪಡಶೆಟ್ಟಿ ಪ್ರತಿಷ್ಠಾನವು ಕೂಡಾ ಹಲಸಂಗಿ ಸಂಸ್ಕೃತಿಗೆ ಸೇರಿದಂತಾಗಿದೆ ಎಂದು ಜಾನಪದ ವಿದ್ವಾಂಸ ಡಾ. ವೀರಣ್ಣ ದಂಡೆ ಹೇಳಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ಸಿಂದಗಿ ನೆಲೆ ಪ್ರಕಾಶನ ಸಂಸ್ಥೆ ಮತ್ತು ಎಂ.ಎಂ ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ ಜಾನಪದ ವಿದ್ವಾಂಸ ಡಾ.ವೀರಣ್ಣ ದಂಡೆ ಅವರಿಗೆ 2022ರ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಹಾಗೂ ಊರ್ಧ್ವರೇತ ಕಿರುಚಿತ್ರವನ್ನು ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜಾನಪದ ಲೋಕದಿಂದ ಹುಟ್ಟಿದಂಥ ಮೀಮಾಂಸೆ, ಬೀದಿ ನಾಟಕಗಳೇ ಗ್ರಾಮೀಣ ಜನರ ತಿಳಿವಳಿಕೆಗೆ ಮೂಲ ಕಾರಣವಾಗಿದೆ. ಶಾಸ್ತ್ರಗಳು ಜನಪದರ ಮಾತಿನಿಂದ ಹುಟ್ಟಿವೆ. ಸೃಜನಶೀಲ ಸಾಹಿತ್ಯ ಸಿಗುವುದು ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಲೆ, ಸಾಹಿತ್ಯ, ಸಂಗೀತ ದೇಶೀಯ ಕಲೆಗಳು ಹಳ್ಳಿಯ ಅನಕ್ಷರಸ್ಥ ಜನರಿಂದ ಇಂದಿಗೂ ಜೀವಂತ ಉಳಿದಿವೆ. ಇದನ್ನು ದಾಖಲೆ ಮೂಲಕ ತರಬೇಕು ಎಂದರು.
ಜಾನಪದ ವಿದ್ವಾಂಸ “ಡಾ. ವೀರಣ್ಣ ದಂಡೆ ಅವರ ಕುರಿತ ಬದುಕು ಬರಹ” ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಅಸ್ಕಿಯ ಪ್ರಗತಿಪರ ರೈತ ಎಸ್.ಎಸ್. ಪಾಟೀಲ ಮಾತನಾಡಿ, ದೇಶಿಯತೆ ಎನ್ನುವುದು ನಮ್ಮ ಒಡನಾಟದಿಂದ ನಮ್ಮೊಳಗೆ ಆವರಿಸಿಕೊಳ್ಳುತ್ತದೆ. ನಮ್ಮ ಗುರುಗಳು, ಹಿರಿಯರ ವ್ಯಕ್ತಿತ್ವ ಹಾಗೂ ಒಳ್ಳೆಯ ಓದು ನಮ್ಮನ್ನು ನಮ್ಮತನವನ್ನು ಕಾಪಾಡುವಂತೆ ಮಾಡುತ್ತದೆ ಎಂದು ಹೇಳಿದರು.
ಶಹಾಪುರ ಶರಣ ಮಾರ್ಗ ಪತ್ರಿಕೆಯ ಸಂಪಾದಕ ಹಾಗೂ ಡಾ. ವೀರಣ್ಣ ದಂಡೆ ಅವರ ಕುರಿತ ಬದುಕು ಬರಹ” ಪುಸ್ತಕದ ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಅವರು ಕೃತಿಯ ಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿಯ ಸಂಶೋಧನಾ ಕೇಂದ್ರದ ಸಂಚಾಲಕ ಎಂ.ಎಸ್.ಮದಭಾವಿ, ಹಿರಿಯ ಚಿಂತಕ ಡಾ.ಆರ್.ಕೆ ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಅಶೋಕ್ ವಾರದ ಮಾತನಾಡಿದರು.
ನೆಲೆ ಪ್ರಕಾಶನ ಸಂಸ್ಥೆ ಹಾಗೂ ಎಂ ಎಂ ಪಡಶೆಟ್ಟಿ ಪ್ರತಿಷ್ಠಾನದ ಸಂಚಾಲಕ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ನೆಲೆ ಪ್ರಕಾಶನ ಸಂಸ್ಥೆ ಮತ್ತು ಪ್ರತಿಷ್ಠಾನ ನಡೆದು ಬಂದ ದಾರಿಯನ್ನು ವಿವರಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ.ಪ್ರಭು ಸಾರಂಗ ಶಿವಾಚಾರ್ಯರು ಅವರು ನೆಲೆ ಸಿನಿ ಕ್ರಿಯೇಷನ್ಸ್ ವತಿಯಿಂದ ನಿರ್ಮಾಣಗೊಂಡ ಸುನೀಲಕುಮಾರ ಸುಧಾಕರ ನಿರ್ದೇಶನದಲ್ಲಿ ಚನ್ನಪ್ಪ ಕಟ್ಟಿ ಕಥೆ ಆಧಾರಿತ “ಊರ್ಧ್ವರೇತ” ಕಿರುಚಿತ್ರ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಹ. ಮಾ. ಪೂಜಾರ, ಲಲಿತಾ ಪಡಶೆಟ್ಟಿ, ಗೀತಾ ಕಟ್ಟಿ, ಎಂ. ಎಸ್. ಹೈಯ್ಯಾಳಕರ, ಗೌರೀಶ್ ಹೈಯ್ಯಾಳಕರ, ಸಾಹೇಬಗೌಡ ದುದ್ದಗಿ, ಚನ್ನಪ್ಪ ಕತ್ತಿ, ಚಂದ್ರಶೇಖರ ಚೌರ, ಗೀತಾ ಹರಿಹರ, ಮಲ್ಲಿಕಾರ್ಜುನ ಪಡಶೆಟ್ಟಿ, ಚನ್ನು ಪಡಶೆಟ್ಟಿ, ರವಿ ಗೋಲಾ, ಡಾ. ಶರಣಬಸವ ಜೋಗುರ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.
ನಿವೃತ್ತ ಪ್ರಾಚಾರ್ಯ ಆರ್. ಎಸ್. ಬುಶೆಟ್ಟಿ ಸ್ವಾಗತಿಸಿದರು. ಆರತಿ ಪಡಶೆಟ್ಟಿ ಪ್ರಾರ್ಥಿಸಿದರು. ಸಾಹಿತಿ ಮನು ಪತ್ತಾರ ನಿರೂಪಿಸಿದರು. ಶಿಕ್ಷಕ ಗುರುನಾಥ ಅರಳಗುಂಡಗಿ ವಂದಿಸಿದರು.