ಎನ್. ಶರಣಪ್ಪ ಮೆಟ್ರಿ ಚುಟುಕುಗಳು

Must Read

ದಗ್ಧಪಾದ

ಕೆಲವರು
ಕಾಲಿಟ್ಟಲ್ಲಿ
ಹುಲ್ಲು‌ ಹುಟ್ಟುವುದಿಲ್ಲ
ಮತ್ತೆ ಕೆಲವರು
ಕಾಲಿಟ್ಟಲ್ಲಿ
ಹುಟ್ಟಿದ ಹುಲ್ಲು
ಸುಟ್ಟುಹೋಗುತ್ತದೆ

ಜ(ಗ)ದ್ಗುರುಗಳು

ಮಠದಲ್ಲಿರುವ
ಜಗದ್ಗುರುಗಳು
ತಿಂದು ತಿಂದು
ಆಗಿದ್ದಾರೆ
ಗಜದ್ಗುರುಗಳು

ಅದೃಷ್ಟ ದುರಾದೃಷ್ಟ

ಕೆಲವರು
ಮುಟ್ಟಿದ್ದೆಲ್ಲ
ಚಿನ್ನವಾಗುತ್ತದೆ
ಮತ್ತೆ ಕೆಲವರು
ಮುಟ್ಟಿದ್ದೆಲ್ಲ
ಮಣ್ಣಾಗುತ್ತದೆ

ದುರಭ್ಯಾಸ

ಗೆಳೆಯ ಕೇಳಿದ
” ನಿನ್ನ ಹೆಂಡತಿಗೆ
ಯಾವ ದುರಭ್ಯಾಸವಿದೆ ?”
ಅವನುತ್ತರಿಸಿದ
“ಬೈಯ್ಯುವುದು”
” ಸರಿ ಹಾಗಾದರೆ ನಿನಗೆ ?”
“ಸಹಿಸಿಕೊಳ್ಳುವುದು”

ಮೂರು ಕನ್ನಡಿ

ಇತಿಹಾಸ
ಭೂತಕನ್ನಡಿ
ಸಾಹಿತ್ಯ
ಕೈಗನ್ನಡಿ
ಕಾವ್ಯ
ರನ್ನಗನ್ನಡಿ

ಹನಿಗವನಗಳು

ಲಕ್ಷ್ಯಕೊಟ್ಟು ಓದಿದರೆ
ಹನಿಗವನಗಳು
ಸಾಹಿತ್ಯ ಸಮುದ್ರದಲ್ಲಿ
ಲಕ್ಷದ್ವೀಪ
ಕಾವ್ಯ ಮಂದಿರದಲ್ಲಿ
ಲಕ್ಷದೀಪ

ಗದ್ದುಗೆ

ಗದ್ದುಗೆಯೇರಿ
ಮೆರೆದನು
ಉರಿದನು
ಕಡೆಗೆ ಕೂತನು
ಗದ್ದುಗೆಯಲ್ಲಿ

ಕವಿತೆಗಿವಿತೆ

ಮತ್ತೆ ಮತ್ತೆ
ಓದಿಸಿಕೊಂಡು ಹೋದರೆ
ಅದು ಕವಿತೆ
ಓಡಿಸಿಕೊಂಡು ಹೋದರೆ
ಅದು ಕವಿತೆಯಲ್ಲ ಗಿವಿತೆ

ಅಮ್ಮಾವ್ರ ಗಂಡ

ಅವಳು
ಕೆಂಡಾದಾಗ
ಹಜಬೆಂಡ
ಬೆಂಡಾದ
ಥಂಡಾದ
ಅವಳ ಕೈಯಾಗಿನ
ಗೋಲಿ ಗುಂಡಾದ
ಚಿಣಿದಾಂಡಾದ

ಭಗ್ನಪ್ರೇಮಿ

ಅವಳಿಗಾಗಿ
ಲೈನ್ ಹೊಡೆದ
ಸಿಗದ್ದಕ್ಕ
ವೈನ್ ಕುಡಿದ
ಕುಡಿತ ಹೆಚ್ಚಾಗಿ
ಆರೋಗ್ಯ ಕಳಕೊಂಡ
ಆಸ್ಪತ್ರೆ ಸೇರಿ
ಸಲೈನ್ ಹಚ್ಚಿಸಿಕೊಂಡ

ವೈವಿಧ್ಯ

ನೆಲ ಜಲ ಗಾಳಿ ಬಿಸಿಲು
ಒಂದೆಯಾದರು
ಬೆಳೆವ
ನಿಂಬೆ ನೀರಲ
ದಾಳಿಂಬೆ ದ್ರಾಕ್ಷಿ
ಬೇರೆಬೇರೆ

ಸಂಸಾರ ಸಮ್ಮಿತ

ಸಂಸಾರದಲ್ಲಿ
ಹೆಂಡತಿ ಪ್ರಭುಸಮ್ಮಿತ
ಅಥವಾ ಕಾಂತಾಸಮ್ಮಿತ
ಗಂಡ ಕಾಂತಾಸಮ್ಮಿತ
ಅಥವಾ ಪ್ರಭುಸಮ್ಮಿತ
ಆಗಬಾರದು
ಇಬ್ಬರು ಮಿತ್ರಸಮ್ಮಿತ
ಆಗುವುದೊಳ್ಳೆಯದು

ಶತ್ರು

ನನಗೆ ಯಾರಿಲ್ಲ
ಬೇರೆ ಶತ್ರು
ನನಗೆ
ನಾನೆ ಶತ್ರು

(ಅ)ಪರಿಚಿತ

ನಾನು ಎಲ್ಲರಿಗೆ
ಪರಿಚಿತ
ನನಗೆ ನಾನೆ
ಅಪರಿಚಿತ

ಶತ್ರುಗಳು

ಹಗೆಗಳಲ್ಲಿ
ಎರಡು ಬಗೆ
ಮೊದಲು
ನಮ್ಮವರೆ
ನಮಗೆ ಹಗೆ

ನಾನ್(ಫುಲ್) ಸ್ಟಾಪ್

ಹೆಂಡತಿಯ ಬಾಯಿ
ನಾನ್ ಸ್ಟಾಪ್
ಗಂಡನದೋ
ಫುಲ್ ಸ್ಟಾಪ್

ಸ್ಮರಣೀಯರು

ಸದಾ ನೆನಪಿನಲ್ಲಿ
ಉಳಿಯುವವರು
ದೇವರಲ್ಲ
ದೇವಮಾನವರಲ್ಲ
ಸಾಲ ಪಡೆದು
ಹಿಂತಿರಿಗಿಸದ
ಮಹಾನುಭಾವರು

ಆತ್ಮ ವಿಮರ್ಶೆ

ಇನ್ನೊಬ್ಬರನ್ನು
ಬೈಯ್ಯುವುದು
ಸುಲಭದ ಕೆಲಸ
ತನ್ನ ತಾನು
ಬೈಯ್ದುಕೊಳ್ಳುವದು
ಆಗದ ಕೆಲಸ

ಅವಳು

ಹೌದು ಅವಳು
ಸೂಜಿಮಲ್ಲಿಗೆ
ಮಾತಿನಲ್ಲಿ ಸೂಜಿ
ಮೈಯಲ್ಲಿ ಮಲ್ಲಿಗೆ

ರಾಜಕಾರಣಿ

ತಲೆಗೆ
ಟೋಪಿ‌‌ ಹಾಕಿದ
ರಾಜಕಾರಣಿ
ಆರಿಸಿಬಂದ ಮೇಲೆ
ಜನಕ್ಕೆ
ಟೋಪಿ ಹಾಕಿದ

ಸುಲಿಗೆ

ಮಾಂತ್ರಿಕ
ಮಂತ್ರಿಸಿದರೆ
ಮಾವಿನಕಾಯಿ
ಉದುರುವುದಿಲ್ಲ
ಬದಲಿಗೆ
ಜನರಿಂದ
ಹಣ ಉದುರುತ್ತದೆ

ನಿಜ

ಕೋಡಗನ
ಕೋಳಿ ನುಂಗಿತ್ತ
ಎಂಬುದು ಸುಳ್ಳು
ಕೋಳಿನ
ಎರಡು ಕಾಲಿನ
ಕೋಡಗ ನುಂಗಿದ್ದಂತು ನಿಜ

ತ್ರಿಕಾಲ ಸತ್ಯ

ಹೆಂಡತಿ‌ ನಕ್ಕರೆ
ಗುಳಿಕಕಾಲ ;
ಮುನಿಸುಗೊಂಡರೆ
ರಾಹುಕಾಲ ;
ಕಡೆತನಕ ತಪ್ಪಿದ್ದಲ್ಲ
ಗಂಡನಿಗೆ ಯಮಗಂಡಕಾಲ !

ಕ(ವಿ)ತೆ

ಕವಿತೆ ಸೊಟ್ಟಗೆ
ಕತೆ ನೆಟ್ಟಗೆ
ಇದ್ದರೆ ಚಂದ
ಕೊಡುವುದಾನಂದ

ಸಾರ್ಥಕ ಸಾಲು

ಕವಿತೆಯ
ಒಂದೊಂದು ಸಾಲು
ಬೆಳಗುವ
ದೀಪದ ಸಾಲು
ಆದರೆ ಮೇಲು
ಆಗದಿರಲಿ ಶಬ್ಧ ಪೋಲು

ಮತ್ತೇಕೆ

ಕವಿತೆ
ಆಗಿದ್ದರೆ
ಕೈಗನ್ನಡಿ
ಮತ್ತೇಕೆ
ಮುನ್ನುಡಿ
ಹಿನ್ನುಡಿ
ಬೆನ್ನುಡಿ

ಶರಣರ ಸಂಗ

ಶರಣರು
ಬೆಂಕಿಯ ಹಾಗೆ
ದೂರದಿಂದ
ಚಳಿಕಾಯಿಸಿಕೊಳ್ಳಬೇಕು
ಮುಟ್ಟಿ ತಟ್ಟಿ
ಕೈ ಸುಟ್ಟುಕೊಳ್ಳಬಾರದು

ಕಾಂತ

ಕಾಂತೆಯಾದವಳು
ಆಕರ್ಷಿಸುವ ಆಯಸ್ಕಾಂತ
ಆಕರ್ಷಿತನಾದವ
ಆಯಾಸದ ಕಾಂತ
ಬಳಲಿ ಬಳಲಿ ಕುಂತ

ತಕ್ಕಡಿ

ಸಂಸಾರ
ಒಂದು ತಕ್ಕಡಿ
ಸರಸ ವಿರಸ
ಎರಡು ಪರಡಿ
ಏರುತ್ತವೆ
ಇಳಿಯುತ್ತವೆ
ಜೀವನವಿಡಿ

ದುಃ(ಸು)ಖಿಗಳು

ಜಗತ್ತಿನಲ್ಲಿ
ಎಲ್ಲರೂ ದುಃಖಿಗಳು
ಇವರು ಮಾತ್ರ
ಬಲು ಸುಖಿಗಳು
ಮರ್ತ್ಯಕ್ಕೆ
ಬಾರದವರು
ಮಸಣದಲ್ಲಿ
ಮಲಗಿದವರು

ಬಳಸಿ ಬಿಸಾಕು

ಯುಜ್ ಅಂಡ್ ಥ್ರೋ
ಸಾಮಾನುಗಳು ಬಂದ ಮೇಲೆ
ಮಾನವನ ಬದುಕು ಕೂಡ ಆಗಿದೆ
ಯುಜ್ ಅಂಡ್ ಥ್ರೋ


ಎನ್.ಶರಣಪ್ಪ ಮೆಟ್ರಿ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group