ರಾಜಕೀಯ ಎಂದರೆ ಪರರನ್ನು ಆಳೋದು. ರಾಜಯೋಗವೆಂದರೆ ಪರಮಾತ್ಮನನ್ನು ತಿಳಿಯೋದು.ಆತ್ಮಾವಲೋಕನ ಇಂದು ಎಲ್ಲರಿಗೂ ಅಗತ್ಯವಿದೆ. ಸಮಸ್ಯೆಗೆ ಪರಿಹಾರ ಒಳಗಿದ್ದರೂ ಹೊರಗೆ ಹುಡುಕುತ್ತಿದ್ದರೆ ಜೀವ ಒಮ್ಮೆ ಹೋಗೋದೆ.
ಆದರೆ ಸಮಸ್ಯೆ ಹೋಗೋದಿಲ್ಲ ಮುಂದಿನ ಪೀಳಿಗೆಗೆ ದಾಟುತ್ತದೆ. ಮಕ್ಕಳಿಗೆ ಸಮಸ್ಯೆಯನ್ನು, ಸಾಲವನ್ನು, ಸಂಕಟ, ಕಷ್ಟ, ದುಃಖ ಬಿಟ್ಟು ನಡೆದರೆ ಸಾಧನೆಯೆ? ಅಧ್ಯಾತ್ಮ ಕಬ್ಬಿಣದ ಕಡಲೆ ಎಂದು ತಿಳಿದು ಸಣ್ಣ ವಿಚಾರವನ್ನೂ ತಿಳಿಸದೆ,ತಿಳಿಯದೆ ಮುಂದೆ ನಡೆದವರು ಈಗಿಲ್ಲವೆಂದರೂ ಈಗ ಅನುಭವಿಸುತ್ತಿರುವ ಎಲ್ಲಾ ಕಷ್ಟ ನಷ್ಟ,ಸಮಸ್ಯೆಗಳಿಗೆ ಇದೇ ಕಾರಣ.
ಈಗಿನವರೂ ಇದೇ ದಾರಿ ಹಿಡಿದರೆ ಯಾವ ಅಧ್ಯಾತ್ಮ ಸಾಧನೆಯಿಂದ ಯಾರಿಗೆ ಲಾಭ ನಷ್ಟವೋ ಎಲ್ಲಾ ಕಾಲದ ಪ್ರಭಾವ. ಇಂದಿನ ಅರಸ ಮುಂದಿನ ಆಳು. ಇಂದಿನ ಆಳು ಮುಂದಿನ ಅರಸನಾಗಬಹುದು. ಆದರೆ, ಜನ್ಮ ಜನ್ಮದ ಧರ್ಮ ಕರ್ಮ ಒಂದೆ.ಜನ್ಮಕ್ಕೆ ತಕ್ಕಂತೆ ಕರ್ಮ. ಕರ್ಮಕ್ಕೆ ತಕ್ಕಂತೆ ಶಿಕ್ಷಣವಿದ್ದರೆ ಪ್ರಗತಿ. ರಾಜಕಾರಣಿಗಳಿಗೆ ಹೆಚ್ಚಿನ ಧಾರ್ಮಿಕ ಪ್ರಜ್ಞೆ ನೀಡುವುದು ಧಾರ್ಮಿಕ ಗುರು ಹಿರಿಯರ ಧರ್ಮವಾಗಿತ್ತು.
ಓದಿ ತಿಳಿಸುವಾಗ ವಾಸ್ತವತೆ ಅರ್ಥ ಮಾಡಿಕೊಳ್ಳುವುದು ಅಗತ್ಯ. ರಾಜಪ್ರಭುತ್ವ ಪ್ರಜಾಪ್ರಭುತ್ವ ಒಂದಾಗಲು ಸಾಧ್ಯವೆ? ನಾವು ರಾಜರೆ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸ್ವಾತಂತ್ರ್ಯ ಕೇವಲ ರಾಜಕೀಯಕ್ಕೆ ಬಳಸಿದರೆ ಮನಸ್ಸು ಹೊರಗಿದ್ದು ಆತ್ಮನ ದರ್ಶನ ವಾಗಲು ಅಸಾಧ್ಯ. ಉತ್ತಮ ಬದಲಾವಣೆಗೆ ಸ್ಪಂದಿಸುವ ಗುಣ ಧಾರ್ಮಿಕ ವರ್ಗದವರು ಪಕ್ಷಪಾತವಿಲ್ಲದೆ ಬೆಳೆಸಿಕೊಂಡರೆ ದೇಶದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗುತ್ತದೆ.
ಸತ್ಯ ತಿಳಿಸುವವರನ್ನೇ ಕಾಲೆಳೆದು ಬೀಳಿಸುವುದಕ್ಕೆ ಸಹಕರಿಸಿದಷ್ಟೂ ತಮ್ಮ ಕಾಲಕೆಳಗೆ ಅಸತ್ಯ ತಾಂಡವವಾಡುತ್ತದೆ. ಪರಕೀಯರ ಜೀವಕ್ಕೆ ಬೆಲೆಕೊಡುವ ನಮಗೆ ನಮ್ಮವರ ಜೀವನವೆ ಹಿಂದುಳಿಯುತ್ತಿರುವುದರ ಅರಿವಿಲ್ಲವಾದರೆ ರಾಜಕೀಯ ನಮ್ಮಲ್ಲಿದೆ. ರಾಜಕೀಯ ಎಂದರೆ ರಾವಣ, ಜರಾಸಂಧ, ಕೀಚಕ,ಯಮ. ಇವರ ಪುರಾಣ ಹೇಳುತ್ತಾ, ಕೇಳುತ್ತಾ, ತೆಗಳುತ್ತಾ ಅವರೆ ಒಳಗೆ ಸೇರಿದರೂ ಕಾಣದಿರೋದೆ ಸಮಸ್ಯೆಗಳಿಗೆ ಕಾರಣ.
ನಾವು ಏನನ್ನು ಹೇಳುತ್ತೇವೋ, ಕೇಳುತ್ತೇವೋ, ಮಾಡುತ್ತೇವೋ, ಓದುತ್ತೇವೋ, ನೋಡುತ್ತೇವೋ ಅದೇ ಶಕ್ತಿಯಾಗಿ ದೇಹವನ್ನು ಆಳೋದಷ್ಟೆ. ನಕಾರಾತ್ಮಕ ಶಕ್ತಿಯಿಂದ ಉಳಿಗಾಲವಿಲ್ಲ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು