ಗುರುವಾರ ದಿ.28 ರಂದು ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಸರಕಾರಿ ಕನ್ನಡ, ಮರಾಠಿ,ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಕಡೋಲಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಸರ್ಕಾರದ ‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನದ ‘ಕನ್ನಡ ಗೀತ ಗಾಯನ’ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಂದ ಮೊಳಗಿದ ನಾಡಗೀತೆ ಮತ್ತು ಕನ್ನಡ ಗೀತೆಗಳು ಗ್ರಾಮಸ್ಥರಲ್ಲಿ ಕನ್ನಡದ ಕಂಪನ್ನು ಇಮ್ಮಡಿಗೊಳಿಸಿದವು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು , ಅಧಿಕಾರಿವರ್ಗ, ಗ್ರಾಮದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವರ್ಗ ಅಚ್ಚುಕಟ್ಟಾಗಿ ವಿಶೇಷ ಆಸಕ್ತಿ ವಹಿಸಿ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವಾನಂದ ತಲ್ಲೂರ ಸ್ವಾಗತಿಸುವುದರ ಜೊತೆಗೆ, ಕನ್ನಡಪರವಾದ ಅಭಿಮಾನದ ಕನ್ನಡ ಉಳಿಸಿ, ಬೆಳೆಸಿ, ಪೋಷಿಸುವ ಸಂಕಲ್ಪ ಶಪಥ ಮಾಡಿಸಿದರು. ಕಡೋಲಿ ಸಿ ಆರ್ ಪಿ ಗಳಾದ ಕೃಷ್ಣನೊಜಿ, ಊರ ಹಿರಿಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಮುಖ್ಯೋಪಾಧ್ಯಾಯರಾದ ಸಿ. ಎನ್. ಜಾಧವ ವಂದಿಸಿದರು.