ಸವದತ್ತಿಃ ಪಟ್ಟಣದ ಸಬನೀಸ ಓಣಿಯಲ್ಲಿರುವ ದತ್ತ ಮಂದಿರದಲ್ಲಿ ಗುರುವಾರದಂದು ವಿಶಿಷ್ಟ ಪೂಜೆ,ಆರತಿ, ಭಜನಾ ಮಂಡಳಿಯಿಂದ ಭಜನೆ,ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ವೆಂಕಟೇಶ್ವರ ಮಹಿಳಾ ಭಜನಾ ಮಂಡಳದ ಮಹಿಳೆಯರಾದ ಸುಮಾ ರಾಮತೀರ್ಥ,ವಂದನಾ ಕುಲಕರ್ಣಿ,ಆಶಾ ಕುಲಕರ್ಣಿ,ಸುಮಾ ಕುಲಕರ್ಣಿ,ರುಕ್ಮಿಣಿ ಸಂತ, ಮಾಧುರಿ ಸಬನೀಸ, ಪುಷ್ಪಾ ಮುನವಳ್ಳಿ,ಜಯಶ್ರೀ ಮುಧೋಳ, ಶಾರದಾಬಾಯಿ ಚಿಪ್ಪಡಿ,ಪೂಜಾ ಮುಧೋಳ ಮುಂತಾದವರಿಂದ ಶ್ರೀ ದತ್ತನ ಕುರಿತು ಭಕ್ತಿಗೀತೆಗಳು ಮತ್ತು ಮಹಾ ಮಂಗಳಾರುತಿ ಜರುಗಿತು.
ದತ್ತ ಮಂದಿರದ ವೈಶಿಷ್ಟ್ಯತೆ
ಅತಿಥಿ ಸತ್ಕಾರ ನಮ್ಮ ಸಂಸ್ಕಾರವನ್ನು ಸೂಚಿಸುತ್ತದೆ.ಸವದತ್ತಿಯ ಸಬನೀಸ ಓಣಿಯಲ್ಲಿರುವ ದತ್ತ ಮಂದಿರ ಬಹಳ ಪುರಾತನವಾದದ್ದು. ಸಬನೀಸ್ ಮನೆತನದ ಹಳೆಯ ತಲೆಮಾರುಗಳ ಹಿರಿಯರ ಮನೆಗೆ ಒಂದು ದಿನ ಮೂವರು ಯತಿಗಳು ಆಗಮಿಸಿದರು.
ಅವರ ಪೂಜೆಯ ಕುರಿತು ವಿಚಾರಿಸಲಾಗಿ ಅವರು ಮಲಪ್ರಭಾ ನದಿಯಲ್ಲಿ ಸ್ನಾನಗೈದು ಬರುವುದಾಗಿ ಹೇಳಿ ತಮ್ಮ ಕಮಂಡಲ ಮತ್ತು ಪಾದುಕೆಯನ್ನು ಬಿಟ್ಟು ನದಿಯತ್ತ ತೆರಳಿದರು. ಇತ್ತ ಮನೆಯಲ್ಲಿ ಹಿರಿಯರು ಪೂಜೆಯ ತಯಾರಿ ಮಾಡಿಕೊಂಡು ನೈವೇದ್ಯಕ್ಕೆ ಪಕ್ವಾನ್ನಗಳನ್ನು ಮಾಡಿ ಆ ಮೂವರು ಯತಿಗಳ ಆಗಮನಕ್ಕಾಗಿ ಕಾದು ಕುಳಿತರು. ರಾತ್ರಿಯಿಡೀ ಕಾಯ್ದರು ಯತಿಗಳು ನದಿಯ ಸ್ನಾನಕ್ಕೆ ಹೋದವರು ಮರಳಿ ಬರಲಿಲ್ಲ. ಮರುದಿನ ಕೂಡ ಇದೇ ರೀತಿಯಾಯಿತು.
ಆ ದಿನ ಹಿರಿಯರು ನಿದ್ರೆಗೆ ಜಾರಿದಾಗ ಸಬನೀಸರ ಅಜ್ಜನ ಕನಸಿನಲ್ಲಿ ಆ ಯತಿಗಳು ಬಂದು ಅವರು ತ್ರಿಮೂರ್ತಿ ರೂಪ ದತ್ತನ ಅವತಾರಿಗಳು. ತಮ್ಮ ಭಕ್ತಿಯ ಮೆಚ್ಚಿ ತಮ್ಮ ಕುಟುಂಬಕ್ಕೆ ದರ್ಶನ ನೀಡಿದೆವು. ತಮ್ಮ ಕಮಂಡಲ ಪಾದುಕೆಗಳನ್ನು ಪೂಜಿಸುತ್ತ ಸಾಗಿರಿ.ಸಕಲವೂ ಸನ್ಮಂಗಳವಾಗುವುದು ಎಂದು ನುಡಿದಂತೆ ಕನಸು ಕಾಣಲು ಮನೆಯವರಿಗೆಲ್ಲ ಈ ವಿಷಯ ತಿಳಿಸಿ ಅಂದಿನ ಒಂದು ಜೊತೆ ಪಾದುಕೆಗಳನ್ನು ಪೂಜಿಸ ತೊಡಗಿದರು.
ಅವರ ಕುಟುಂಬಕ್ಕೆ ಒಳ್ಳೆಯದೇ ಆಯಿತು. ಅಂದಿನಿಂದ ಇಂದಿನವರೆಗೂ ಅವರ ಮನೆತನ ದತ್ತನ ಪೂಜೆ ಪುನಸ್ಕಾರಗಳನ್ನು ಮಾಡುತ್ತ ಬರುತ್ತಿರುವುದು. ಕಳೆದ ಹತ್ತು ವರ್ಷಗಳ ಹಿಂದೆ ಸಬನೀಸರು ಮಂದಿರವನ್ನು ಪುನರುಜ್ಜೀವನಗೊಳಿಸಿದರು.
ದತ್ತಾತ್ರೇಯ ಮೂರ್ತಿ ಪ್ರತಿಷ್ಠಾಪನೆ ಮಾಡುವ ಜೊತೆಗೆ ಪಾದುಕೆಗಳನ್ನು ಇಂದಿಗೂ ಪೂಜಿಸುತ್ತ ಬರುತ್ತಿದ್ದೇವೆ ಎಂದು ಮಧುಕರ ಸಬನೀಸ ನುಡಿಯುವರು.
ಕಳೆದ ಎರಡು ವಾರಗಳಿಂದ ಪ್ರತಿ ಗುರುವಾರ ಶ್ರೀ ವೆಂಕಟೇಶ್ವರ ಮಹಿಳಾ ಭಜನಾ ಮಂಡಳಿಯ ಸದ್ಭಕ್ತ ಮಹಿಳೆಯರು ಬೆಳಿಗ್ಗೆ ೧೨.೩೦ ರ ಹೊತ್ತಿಗೆ ಇಲ್ಲಿ ಬಂದು ಭಜನೆ ಸೇವೆ ಮಾಡುವರು. ನಂತರ ಮಹಾಮಂಗಳಾರತಿ ಜರುಗಿ ಪ್ರಸಾದ ಜರಗುವುದು ಎಂದು ಶಶಿಧರ ಕುಲಕರ್ಣಿ ನುಡಿದರು.
ನಿಜಕ್ಕೂ ಬೇಡಿದವರಿಗೆ ಇಷ್ಟಾರ್ಥ ಸಿದ್ದಿ ನೀಡುವ ದತ್ತಾತ್ರೇಯನ ಪೂಜೆ ಸವದತ್ತಿಯ ದತ್ತ ಮಂದಿರದಲ್ಲಿ ಜರುಗುತ್ತಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲ ಪ್ರತಿ ವರ್ಷ ದತ್ತ ಜಯಂತಿಯನ್ನು ಕೂಡ ಇಲ್ಲಿ ವಿಶಿಷ್ಟವಾಗಿ ಜರುಗಿಸುತ್ತ ಬರುತ್ತಿದ್ದು. ಸಬನೀಶರ ಮನೆಯವರು ನಿರಂತರ ೭ ದಿನಗಳ ಕಾಲ ದತ್ತನ ಮಹಿಮೆಯ ಪಾರಾಯಣವನ್ನು ಜರುಗಿಸುವ ಜೊತೆಗೆ ದತ್ತ ಮಂದಿರದಲ್ಲಿ ಸಾರ್ವಜನಿಕರಿಗಾಗಿ ೩ ದಿನಗಳ ಕಾಲ ಪಾರಾಯಣ ಪ್ರವಚನಗೈಯುವ ಮೂಲಕ ದತ್ತ ಜಯಂತಿ ಜರುಗಿಸುತ್ತ ಬಂದಿರುವುದು ಕೂಡ ಈ ಮನೆತನದ ವಿಶೇಷತೆ.
ಅತ್ರಿಯು ಎಂಥ ಕಷ್ಟ ಎದುರಾದರೂ ಅತಿಥಿಗಳ ಸೇವೆಯಲ್ಲಿ ಲೋಪವಾಗಬಾರದೆಂದು ನಿಯಮವನ್ನು ಕಟ್ಟುನಿಟ್ಟಾಗಿ ಸೂಚಿಸಿದ್ದರ ಪರಿಣಾಮವಾಗಿ ದತ್ತಾತ್ರೇಯನ ಉದಯವಾಯಿತು. ಹಾಗಾಗಿಯೇ ಅತಿಥಿಯನ್ನು ದೇವರ ಸ್ಥಾನದಲ್ಲಿಟ್ಟು ಸತ್ಕರಿಸಿದರೆ ನಮಗೆ ಎಲ್ಲ ಸುಖಭೋಗಗಳು ಒದಗಿ ಬರುವುದು ಎಂದು ವೇದ ಪುರಾಣಗಳೂ ಹೇಳುವಂತೆ ಸಬನೀಸರ ಮನೆತನವು ತಮ್ಮ ಮನೆಗೆ ಬಂದ ಯತಿಗಳ ಸೇವೆಯನ್ನು ಮಾಡುವ ಮೂಲಕ ಅವರಿಗೆ ದತ್ತಾತ್ರೇಯನ ಸಾಕ್ಷಾತ್ಕಾರ ಉಂಟಾಯಿತು ಎಂದು ಇಂದಿಗೂ ಅವರ ಮನೆತನದಲ್ಲಿ ದತ್ತ ಮಂದಿರ ನಿರ್ಮಾಣಗೊಂಡು ಹಿರಿಯರಿಂದ ಇಂದಿನ ಪೀಳಿಗೆವರೆಗೂ ದತ್ತಾತ್ರೇಯನ ಸೇವೆ ಪೂಜೆಯ ಮೂಲಕ ಜರುಗಿಸುತ್ತ ಬರುವ ಜೊತೆಗೆ ತಮ್ಮ ಸಂಬಂಧಿಕರು. ಕುಟುಂಬದವರು ಎಲ್ಲರೂ ಸೇರಿ ದತ್ತ ಜಯಂತಿ ಹಮ್ಮಿಕೊಳ್ಳುವುದಲ್ಲದೇ ಕಳೆದ ಗುರುವಾರದಿಂದ ವಿಶೇಷ ಪೂಜೆ ಭಜನೆ. ಮಂಗಳಾರತಿ.ಪ್ರಸಾದ ಸೇವೆ ಹಮ್ಮಿಕೊಳ್ಳುವ ಮೂಲಕ ಸಕಲರನ್ನೂ ಕೈಗೂಡಿಸಿಕೊಂಡು ದತ್ತನ ಸೇವೆಯಲ್ಲಿ ತೊಡಗಿರುವುದು ವಿಶೇಷ.
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ