ಇಂದಿನ ಸಮಾಜಕ್ಕೆ ಸುತಾರ ಅವರ ಭಾವೈಕ್ಯತೆ ಅತೀ ಅವಶ್ಯ ಕಸಾಪ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ

Must Read

ಬೆಳಗಾವಿ : ಭಾವೈಕ್ಯತೆಯ ಕೊಂಡಿಯಾಗಿ ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ತಮ್ಮ ಪ್ರವಚನ, ಹಾಡುಗಳಿಂದ ಶ್ರಮಿಸಿದ ಆಧುನಿಕ ಕನ್ನಡದ ಕಬೀರ ದಿವಂಗತ ಇಬ್ರಾಹಿಂ ಸುತಾರ ಅವರ ಅಗಲಿಕೆ ಈ ನಾಡಿಗೆ ತುಂಬಲಾರದ ನಷ್ಟವುಂಟು ಮಾಡಿದೆ. ಇವತ್ತಿನ ಸಮಾಜದಲ್ಲಿ ಜಾತಿ ಮತ ಪಂಥಗಳ ಮೇಲೆ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ದೇಶದ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಪ್ರಸ್ತುತ ನಮ್ಮ ಸಮಾಜಕ್ಕೆ ದಿವಂಗತ ಇಬ್ರಾಹಿಂ ಸುತಾರರವರು ತೋರಿಸಿಕೊಟ್ಟ ಸಾಮಾಜಿಕ ಧಾರ್ಮಿಕ ಭಾವೈಕ್ಯತೆ ಅತೀ ಅವಶ್ಯವಾಗಿದೆ. ಪ್ರತಿಯೊಬ್ಬರು ಅವರ ಆದರ್ಶ, ಭಾವೈಕ್ಯತೆಯ ನೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜಾತ್ಯತೀತ ಸದೃಢ ಬಾರತ ದೇಶದ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಕರೆ ನೀಡಿದರು.

ದಿವಂಗತ ಪದ್ಮಶ್ರೀ ಇಬ್ರಾಹಿಂ ಸುತಾರರವರ ಜೀವನದ ಸಂದೇಶದ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್ ಚಿಕ್ಕೋಡಿ ತಾಲೂಕಾ ಘಟಕದಿಂದ ಆಯೋಜಿಸಲ್ಪಟ್ಟಿದ್ದ ವೆಬಿನಾರದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಬನಹಟ್ಟಿಯ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಉಪನ್ಯಾಸ ನೀಡುತ್ತಾ ಇಬ್ರಾಹಿಂ ಸುತಾರರವರು ನಮ್ಮ ಕನ್ನಡ ನಾಡಿನ ಹೆಮ್ಮೆಯ ಸುಪುತ್ರರಾಗಿದ್ದು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರೂ ಸಹ ಅವರಲ್ಲಿ ಎಳ್ಳಷ್ಟೂ ಅದರ ಬಗ್ಗೆ ಅಹಂಕಾರ ಇರಲಿಲ್ಲ. ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿನ ಜಾತಿ ಮತ ಪಂಥಗಳ ಬೇದಭಾವ ಅಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಅವರ ಜೀವನದ ಸರಳತೆ, ಆಚಾರ ವಿಚಾರ, ನೀತಿ ಇಂದಿನ ನಮ್ಮ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದು ಅಭಿಪ್ರಾಯ ಪಟ್ಟು ಅವರ ಜೊತೆಗಿನ ಒಡನಾಟ ಸ್ಮರಿಸಿಕೊಂಡು ಭಾವುಕರಾದರು.

ಇತ್ತಿಚೆಗೆ ನಮ್ಮನ್ನಗಲಿದ ಇಬ್ರಾಹಿಂ ಸುತಾರ, ಖ್ಯಾತ ಪ್ರವಚನಕಾರ ಈಶ್ವರ ಮಂಟೂರ, ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ, ಖ್ಯಾತ ಸಾಹಿತಿ ಚಂಪಾ, ಹಿರಿಯ ಪತ್ರಕರ್ತ ಭೀಮಸೇನ ತೊರಗಲ್, ಸಾಹಿತಿ ಶ್ರೀನಿವಾಸ ಕುಲಕರ್ಣಿ, ಶ್ರೀಮತಿ ಸುನೀತಾ ಮೊರಬದ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ‍್ಯಕ್ರಮದಲ್ಲಿ ಡಾ.ವೆ.ಜಿ.ಕೆಂಪಣ್ಣವರ, ಶ್ರೀಪಾದ ಕುಂಬಾರ, ಮಿಥುನ ಅಂಕಲಿ, ಶಿರಗಾಂವಿ, ಅವಲಕ್ಕಿ ರವರನ್ನು ಒಳಗೊಂಡಂತೆ ಅನೇಕ ಸಾಹಿತಿಗಳು ಗಣ್ಯರು ಪಾಲ್ಗೊಂಡಿದ್ದರು.

ಮೊದಲಿಗೆ ಚಿಕ್ಕೋಡಿ ಕೆ.ಎಲ್.ಇ. ತಾಂತ್ರಿಕ ಮಹಾವಿದ್ಯಾಲಯದ ಸುಮಿಧಾ ಸದಾಶಿವ ಪ್ರಾರ್ಥನೆಯೊಂದಿಗೆ ಉಪನ್ಯಾಸ ಕಾರ‍್ಯಕ್ರಮ ಪ್ರಾರಂಭಗೊಂಡಿತು. ಡಾ. ಜಯಶ್ರೀ ನಾಗರಳ್ಳಿ ಸ್ವಾಗತಿಸಿ ಪರಿಚಯಿಸಿದರು. ವೈದ್ಯ ಸಾಹಿತಿ ಡಾ.ದಯಾನಂದ ನೂಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಸಾಪ ಚಿಕ್ಕೋಡಿ ತಾಲೂಕಿನ ಗೌರವ ಕಾರ‍್ಯದರ್ಶಿ ಪ್ರೊ. ಸಚಿನ್ ಮೆಕ್ಕಳಿಕೆ ವಂದಿಸಿದರು. ಚಿಕ್ಕೋಡಿ ತಾಲೂಕಾ ಕಸಾಪ ಅಧ್ಯಕ್ಷ ಡಾ.ಸುರೇಶ ಉಕ್ಕಲಿ ಕಾರ‍್ಯಕ್ರಮ ಸಂಯೋಜಿಸಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group