ಗಣರಾಜ್ಯೋತ್ಸವ ದಿನ ಪವಿತ್ರ ದಿನ – ಶಾಸಕ ಭೂಸನೂರ

Must Read

ಸಿಂದಗಿ: ಸ್ವಾತಂತ್ರ್ಯ ಪಡೆದು ಮೂರು ವರ್ಷಗಳ ನಂತರ ಅನೇಕ ಚರ್ಚೆಗಳು ನಡೆದು ಪ್ರಪಂಚಕ್ಕೆ ಮಾದರಿಯಾಗುವಂತೆ ಡಾ. ಬಾಬಾಸಾಹೇಬ ಅಂಬೇಡ್ಕರರು ರಚಿಸಿದ ಸಂವಿಧಾನವು ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿದೆ ಅಲ್ಲದೆ ಭಾರತೀಯರಿಗೆ ಗಣರಾಜ್ಯೋತ್ಸವವು ಪವಿತ್ರ ದಿನವಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡ 74ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಗಳ ಪ್ರಜಾತಂತ್ರದ ಮೌಲ್ಯಗಳ ಬುನಾದಿಯಲ್ಲಿ ದೇಶ ಕಟ್ಟಬೇಕೆಂಬ ಸಂಕಲ್ಪ ಕೈಗೊಂಡ ದಿನ. ಪ್ರಜೆಗಳೇ ಪ್ರಭುಗಳಾದ ಶುಭದಿನವಿದು. ಭಾರತ ಸಾರ್ವಭೌಮ ಪ್ರಜಾಪ್ರಭುತ್ವ ರಾಷ್ಟ್ರದ ರೂಪಧಾರಣೆ ಮಾಡಿದ ಈ ಸಂದರ್ಭದಲ್ಲಿ ರಾಷ್ಟ್ರ ನಾಯಕರನ್ನು ನೆನೆಯಬೇಕಾಗುತ್ತದೆ. ಎಂದರು.

ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಅನೇಕತೆಯಲ್ಲಿ ಏಕತೆ ಭಾರತದ ವೈಶಿಷ್ಟ್ಯ ಸರ್ವ ಜಾತಿ ಮತ ಧರ್ಮ ಪಂಥೀಯರು ಕೂಡಿಬಾಳುವ ಅಪರೂಪದ ನೆಲ. ನಾವೆಲ್ಲರೂ ಒಂದೇ ಮತ ಒಂದೇ ಧರ್ಮ ನಾವು ಮನುಜರು ಎಂಬುದು ವಿಶ್ವಕ್ಕೆ ಭಾರತೀಯರು ನೀಡಿರುವ ದಿವ್ಯ ಸಂದೇಶ. ಸಾಮಾಜಿಕ ನ್ಯಾಯಕ್ಕೆ ಸದಾ ಹೆಸರುವಾಸಿ ಸರ್ವರಿಗೂ ಸಮಪಾಲು ಸಮಬಾಳು ಎನ್ನುವುದು ಈ ದೇಶದ ಮೂಲ ಉದ್ದೇಶ. ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ರಾಜನೀತಿ ಈ ಮೂರು ಅಡಕಗಳನ್ನು ಅಳವಡಿಸಿಕೊಂಡ ಸಂವಿಧಾನದ ಮೂಲ ಕರ್ತವ್ಯಗಳನ್ನು ನಾವೆಲ್ಲ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಧ್ವಜಾರೋಹಣ ನೇರವೇರಿಸಿದ ತಹಶೀಲ್ದಾರ ನಿಂಗಣ್ಣ ಬಿರಾದಾರ ಮಾತನಾಡಿ, ಆಗಸ್ಟ್ 15, 1947ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ 29ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿ ಮಾಡಿ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ 4, 1947ರಂದು ಶಾಸನಸಭೆಯಲ್ಲಿ ಮಂಡಿಸಿತು. 19 ನವೆಂಬರ್1949 ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26, 1950ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಜನವರಿ 26, 1929 ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊಂಡಿತ್ತು. ಲಾಹೋರನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು ಎಂದರು.

ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ತಾಪಂ ಇಓ ಬಾಬು ರಾಠೋಡ ಪುರಸಭೆಯ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಉಪಾದ್ಯಕ್ಷ ಹಾಸೀಂ ಆಳಂದ, ಸಿಪಿಐ ಡಿ.ಹುಲಗೇಪ್ಪ ವೇದಿಕೆಯ ಮೇಲಿದ್ದರು.

ಬಿಇಓ ಎಚ್.ಎಂ.ಹರನಾಳ ಸ್ವಾಗತಿಸಿದರು. ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group