ಬಣ್ಣದ ಹಬ್ಬದ ಕವಿತೆಗಳು

Must Read

ಹೋಳಿ ಹುಣ್ಣಿಮೆ 

ಹೋಳಿ ಹುಣ್ಣಿಮೆಯ ಶುಭದಿನ ಬಂದಿದೆ

ಧರೆಗೆ ರಂಗಿನ ಅಭಿಷೇಕ ತಂದಿದೆ 

ಕೆಟ್ಟದ್ದನ್ನ ಸುಟ್ಟು ಭಸ್ಮ ಮಾಡಿದೆ

ಒಳ್ಳೆಯದನ್ನು ಧರೆಯಲ್ಲಿ ಸ್ಥಿರವಾಗಿ ಮೆರೆಸಿದೆ 

ನಮ್ಮ ಜೀವನದ ಕೆಡುಕನ್ನು ತೊರೆದು

ರಂಗು ರಂಗಿನ ಬಣ್ಣಗಳ ಹಾಗೆ 

ಹೊಂಬೆಳಕು ತರಲೆಂದು ಹರಿ ಹರರಲ್ಲಿ

 ಬೇಡುವ ಶುಭದಿನ ಬಂದಿದೆ

ರತಿ ಮನ್ಮಥರ ಮಹತ್ವ ತಿಳಿಸಿದೆ 

ಲೋಕ ಕಲ್ಯಾಣಕ್ಕಾಗಿ ಮಾಡಿದ ತ್ಯಾಗವ 

ಸ್ಮರಿಸುವ ಶುಭ ಸಮಯ ಬಂದಿದೆ

ಒಂದುಗೂಡುವ ಪವಿತ್ರ ಹೋಳಿ ಬಂದಿದೆ

ಶಿವನ ರುದ್ರ ರೂಪವ ತೋರಿದೆ

ಶಿವನ ಮಹಿಮೆ ಸಾರುವ ಸಂಭ್ರಮದ

ಹೋಳಿ ಬಂದಿದೆ

ಶಿವ ಪಾರ್ವತಿಯರ ಮಿಲನವಾಗಿದೆ

ಎಲ್ಲೆಲ್ಲೂ ಓಕುಳಿಯ ರಂಗೇರಿದೆ

ಹರಿ ನಾಮವ ಭಜಿಸಿದ ಪ್ರಹ್ಲಾದನ 

ಭಕ್ತಿ ಸಾರಿದ ಹೋಳಿ ಬಂದಿದೆ

ಕೆಡಕು ಮಾಡಿದ ಹೋಲಿಕಾಳ ದಹನ

ಮಾಡಿದ ಹೋಳಿ ಬಂದಿದೆ

ಪರಮ ಪವಿತ್ರ ಓಕುಳಿಯಿಂದ ಜಗವೆಲ್ಲ ರಂಗಾಗಿದೆ 

ಶ್ರೀಮತಿ ಸೌಭಾಗ್ಯ ಅಶೋಕ ಕೊಪ್ಪ


ಹೋಳಿ ಹಬ್ಬ

ಬಂತು, ಬಂತು

ಹೊಯ್ಕೊಳ್ಳುವ

ಹಬ್ಬ !

ಬಂತು  ಬಂತು

ಬಣ್ಣ ಹಚ್ಚುವ

ಹಚ್ಚಿಸಿಕೊಳ್ಳುವ

ಹಬ್ಬ!

ಬಂತು  ಬಂತು

ಹೋಳಿ ಹುಣ್ಣಿಮೆ

ಬಾನ  ತುಂಬ  ತುಂಬಿದ

ಪೌರ್ಣಿಮೆ!

ಕಣ್ಣಿಗೆ ಕಾಣಿಸುವುದು

ಮೈಯ ಬಣ್ಣ

ಕಣ್ಣಿಗೆ ಕಾಣಿಸದು

ಮನಸಿನ ಬಣ್ಣ!

ಕನಸಲಿ ಕಂಡ

ನೂರಾರು ಬಣ್ಣ

ನನಸಾದರೆ ಎಷ್ಟು ಚೆನ್ನ!

ಕಟ್ಟಿಗೆ ಕದ್ದು

ಕುಳ್ಳನು ಕದ್ದು

ಕಾಮನ ಸುಡುವ

ಕಾಮಣ್ಣನ ಹಬ್ಬ!

ಮನಸಿನ ಕಲ್ಮಶಗಳನೆಲ್ಲ

ಸುಟ್ಟು

ಮನಸನು ಶುಚಿಗೊಳಿಸುವ

ಹಬ್ಬ!

ಕಾಮನ ಹಬ್ಬ,

ಹೋಳಿಯ ಹಬ್ಬ!

ಸೋಮರಸವ  ಕುಡಿದು

ಪಾದರಸದಂತೆ ಓಡಾಡಿ

ಮನ ಬಂದಂತೆ ಕಿರುಚಾಡಿ

ಹೊಯ್ಕೊಳ್ಳುವ ಹಬ್ಬ

ಹೋಳಿ ಹಬ್ಬ!!

ಡಾ. ಜಯಾನಂದ. ಧನವಂತ


ರಂಗಿನ ಹೋಳಿ

ಹೋಳಿ ಹೋಳಿ ಹೋಳಿ ರಂಗುರಂಗಿನಾ ಬಣ್ಣದಾ ಹೋಳಿ

ಹೋಳಿ ಹೋಳಿ ಹೋಳಿ ಬಣ್ಣ ಬಣ್ಣದಾ ರಂಗಿನಾ ಹೋಳಿ//ಪ//

ರಂಗಿನಾ ಗುಂಗಲ್ಲಿ ಮೈಮರೆತು ಕುಣಿಯೋಣ

ಬಾನಿಗೆ ಏಣಿ ಹಚ್ಚಿ ಬಿಲ್ಲನ್ನು ಕೊಯ್ಯೋಣ

ಪ್ರೀತಿಯಾ ರಥವೇರಿ ಚುಕ್ಕಿ ಚಂದ್ರರ ಸೇರೋಣ

ಎಲ್ಲರೂ ಜೊತೆ ಸೇರಿ ಕೂಡಿ ಸಂತಸ ಹಂಚೋಣ//

ಗಾಳಿಯಾ ಮೈ ಬಳಸಿ ಬಣ್ಣದಲಿ ಮಿಯೋಣ

ಬಣ್ಣ ಬಣ್ಣದಾಸೆಗಳಿಗೆ ರೆಕ್ಕೆ ಪುಕ್ಕ ಹಚ್ಚಿ ಹಾರೋಣ

ಬಣ್ಣದಾ ಉಯ್ಯಾಲೆಯಲಿ ಬಾಂದಳಕೆ ಹಾರೋಣ

ರಂಗು ರಂಗಿನ ಬಣ್ಣಗಳ ಮೈ ಮೇಲೆ ಎರಚೋಣ//

ಎಲೆ ಬಳ್ಳಿ ಹೂವಿಂದ ಸುಗಂಧ ಹೀರೋಣ

ಎಲ್ಲೆಲ್ಲೂ ತುಂಬಿರುವ ರಂಗನ್ನು ಬಾಚೋಣ

ತುಂತುರು ನೀರಿನ ಹನಿಗಳಲಿ ತಣಿಯೋಣ

ನಾವು ನೀವು ಎಲ್ಲಾ ಭೇದ ಮರೆತು ನಲಿಯೋಣ//

ಜಾತಿ ಮತ ಧರ್ಮ ಪಂಥಗಳ ಪರದೆ ಸರಿಸೋಣ

ನಾಡು ನುಡಿ ಭಾಷೆಗಳ ಬಿಗುಮಾನ ತೊರೆಯೋಣ

ಪ್ರೀತಿ ಮಮತೆ ಹಂಚಿ ಆನಂದ ಹೊಂದೋಣ

ಜಗದಾಲಯದಿ ಒಂದಾಗಿ ಚೆಂದಾಗಿ ಕುಣಿಯೋಣ//

ಪ್ರೇಮದೂರಿಂದ ಪಾರಿಜಾತಗಳ ತರೋಣ

ಒಲವಿನ ಓಕುಳಿಯ ವೈಯ್ಯಾರದೆ ಬಳಸೋಣ

ಚೆಲುವಿನ ಚಿತ್ತಾರಗಳ ತೊಟ್ಟು ಕುಣಿಯೋಣ

ಬಂಧ ಸಂಬಂಧ ಪ್ರೀತಿಯಲಿ ಒಂದಾಗೋಣ//

ಬಾಳಿನ ಗೋಳು ಕಷ್ಟ ಸಂಕಷ್ಟ ಮರೆಯೋಣ

ಸ್ನೇಹ ಗೆಳೆತನದ ಬಣ್ಣದಲಿ ಒಂದಾಗೋಣ

ಎಲ್ಲ ಮರೆತೊಮ್ಮೆ ಸಂತಸದಿ ಕುಣಿಯೋಣ

ಬಣ್ಣ ಬಣ್ಣ ರಂಗಲಿ ಸಂಬಂಧ ಸ್ನೇಹ ಬೆಸೆಯೋಣ//

ಡಾ ಅನ್ನಪೂರ್ಣ ಹಿರೇಮಠ

Latest News

ಪರಿಸರ ಸಂರಕ್ಷಣೆ ಮಾಡಿ, ಮಾನವಕುಲ ರಕ್ಷಿಸಿ ; ಸಾಹಿತಿ ಭೇರ್ಯ ರಾಮಕುಮಾರ

ಮೈಸೂರು - ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವನ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಅತಂಕ...

More Articles Like This

error: Content is protected !!
Join WhatsApp Group