ಮೂಡಲಗಿ – ದಕ್ಷಿಣ ಭಾರತದಲ್ಲಿಯೇ ನಮ್ಮ ಮೂಡಲಗಿ ದನದ ಪೇಟೆ 2 ನೇ ಸ್ಥಾನದಲ್ಲಿದ್ದರೂ, ಇಲ್ಲಿಯವರೆಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಗಿಡಗಂಟಿಗಳು ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿ ಅನೇಕ ರೋಗಗಳಿಗೆ ಕಾರಣವಾಗಿದೆ. ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹಿತ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸುರೇಶ ನಾಯ್ಕ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡರು.
ಬೆಳಗಾವಿ ಜಿಲ್ಲೆಯ ಮೂಡಲಗಿಯ ದನಗಳ ಪೇಟೆಯ ಸಮಗ್ರ ಅಭಿವೃದ್ಧಿ ಗಾಗಿ ಮೂಡಲಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ದನದ ಪೇಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸರಿಯಾದ ವಿದ್ಯುತ್ ಇಲ್ಲದ ಕಾರಣ ಕಳ್ಳರ ಹಾವಳಿ ಹೆಚ್ಚಾಗಿದೆ. ಸ್ವಚ್ಛತೆ ಇಲ್ಲದೇ ಇರುವುದರಿಂದ ಸುತ್ತಮುತ್ತಲಿನ ಜನರಿಗೆ ರೋಗ ರುಜಿನಗಳು ಅಂಟಿಕೊಂಡು ಆರೋಗ್ಯ ಹದಗೆಡುತ್ತಿದೆ. ಜೊತೆಗೆ ರೈತರಿಗೆ ಅನೂಕೂಲವಾಗುವ ದೃಷ್ಟಿಯಿಂದ ಸಮುದಾಯ ಭವನ ನಿರ್ಮಿಸಿದ್ದರೂ ಸ್ವಚ್ಛತೆ ಇಲ್ಲದ ಕಾರಣ ಸಮರ್ಪಕ ಬಳಕೆ ಆಗುತ್ತಿಲ್ಲ. ಹೀಗಾಗಿ ದೂರದ ಉರಿನಿಂದ ಬಂದ ರೈತರು ದನಗಳ ಜೊತೆಯೇ ಮಲಗಬೇಕಾದ ಪರಿಸ್ಥಿತಿ ಎದುರಾಗಿದೆ.ನಮ್ಮ ಮನವಿ ಸ್ವೀಕರಿಸಿ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಅಧಿಕಾರಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ರೈತರು ಒಕ್ಕೊರಲಿನಿಂದ ಮೂಡಲಗಿ ದನದ ಪೇಟೆ ಅಭಿವೃದ್ಧಿಗೆ ಆಗ್ರಹಿಸಿದರು. ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ, ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಮೂಡಲಗಿ ತಾಲೂಕಾಧ್ಯಕ್ಷ ಭೀಮಪ್ಪ ರೊಡ್ಡನವರ ಅಜ್ಜಪ್ಪ ದಂಗನಾಯಕ, ಪಾರಿಸ್ ಉಪ್ಪಿನ, ಸಂಗಪ್ಪ ಹಡಪದ,ಮಹಾದೇವ ಬಂಗೆನ್ನವರ, ಸಿದ್ದಪ್ಪ ನಡಹಟ್ಟಿ, ಬಸಪ್ಪ ಮಿರ್ಜಿ, ಬಸಯ್ಯ ಹಿರೇಮಠ, ಈಶ್ವರ ಮುಗಳಖೋಡ ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.