ಬೀದರ: ತಮಿಳುನಾಡಿನ ಸ್ಟಾಲಿನ್ ಮೆಚ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ರೀತಿ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಯಾಕೆಂದರೆ ಸ್ಟಾಲಿನ್ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದಾರೆ ಅವರನ್ನು ಮೆಚ್ಚಿಸಲು ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ಬಿಟ್ಟಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಕಾವೇರಿ ಪ್ರಾಧಿಕಾರದ ಸೂಚನೆಯ ಮೇರೆಗೆ ತಮಿಳುನಾಡಿಗೆ ನೀರು ಬಿಟ್ಟ ವಿಚಾರ ಕುರಿತಂತೆ ಬೀದರನಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಬಹಳ ದೊಡ್ಡ ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ಕೋರ್ಟ್ಗೆ ಲೇಟಾಗಿ ಅಫಿಡವಿಟ್ ಮಾಡಿ ಎಡವಟ್ಟು ಮಾಡಿದೆ. ತಮಿಳುನಾಡು ಕಾವೇರಿ ವಿಚಾರ ಬಂದಾಗ ನಾವು ಮೊದಲೇ ಅಫಿಡವಿಟ್ ಹಾಕುತ್ತಿದ್ದೆವು. ಇಂಡಿಯಾ ಮೈತ್ರಿ ಕೂಟಕ್ಕೆ ಬೆಂಬಲ ನೀಡಲು ಈ ರೀತಿ ಮಾಡುತ್ತಿದ್ದಾರೆ. ಯಾಕೆಂದರೆ ತಮಿಳುನಾಡಿನ ಸ್ಟಾಲಿನ್ ಸರ್ಕಾರ ಮೈತ್ರಿ ಕೂಟದ ಭಾಗವಾಗಿದೆ. ನಮ್ಮ ಸರ್ಕಾರ ನಿಮಗೆ ಸಹಾಯ ಮಾಡಿದೆ ಎಂದು ಬಿಂಬಿಸಲು ಕಾಂಗ್ರೆಸ್ ಈ ರೀತಿ ಮಾಡಿದೆ ಎಂದರು.
ನಮ್ಮ ಸರ್ಕಾರ ಇದ್ದಾಗ ತಕ್ಷಣ ನೀರು ಕೊಡುವಂತಹ ಕೆಲಸ ಮಾಡುತ್ತಿರಲಿಲ್ಲ. ಮೊದಲು ನಮ್ಮ ರೈತರಿಗೆ ನೀರು ಕೊಡುತ್ತಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯ ಮಾಡುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು ಮಾಜಿ ಸಚಿವ ಶ್ರೀರಾಮುಲು.
ಪ್ರಧಾನಿ ಮೋದಿ ವಿಶ್ವವೇ ಮೆಚ್ಚುವ ನಾಯಕ. ಇಂಡಿಯಾ ಮೈತ್ರಿ ಕೂಟದಿಂದ ಮೋದಿ ಅವರನ್ನು ಸೋಲಿಸಲು ಸಾದ್ಯವಾಗಲ್ಲ.
ಈಗಾಗಲೇ ಇಂಡಿಯಾ ಮೈತ್ರಿ ಕೂಟದಲ್ಲಿ ಕಿತ್ತಾಟಗಳು ಪ್ರಾರಂಭವಾಗಿದೆ ಎಂದರು.
ಮಾಜಿ ಸಚಿವ ಪ್ರಭು ಚೌಹಾಣ್ v/s ಕೇಂದ್ರ ಸಚಿವ ಭಗವಂತ ಖೂಬಾ ಕಿತ್ತಾಟ ವಿಚಾರ ಮಾತನಾಡಿದ ಶ್ರೀರಾಮುಲು ಇಬ್ಬರ ಕಿತ್ತಾಟ ನನ್ನ ಹಾಗೂ ಹೈಕಮಾಂಡ್ ಗಮನಕ್ಕೆ ಬಂದಿದೆ. ಇಬ್ಬರು ಅನುಭವಿ ರಾಜಕಾರಣಿಗಳು ಇದ್ದಾರೆ, ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಇಬ್ಬರ ಕಿತ್ತಾಟಕ್ಕೆ ಹೈಕಮಾಂಡ್ ಇತಿಶ್ರೀ ಹಾಡುತ್ತದೆ ಎಂದು ಆಂತರಿಕ ಕಲಹಕ್ಕೆ ತೇಪೆ ಹಾಕಿದರು.
ವರದಿ: ನಂದಕುಮಾರ ಕರಂಜೆ, ಬೀದರ