20 ನೇ ವಯಸ್ಸಲ್ಲಿ ಎಮ್ಮೆ ಕದ್ದು, 77 ರಲ್ಲಿ ಸಿಕ್ಕಿಬಿದ್ದ!

1
1794

ಬೀದರ: 20 ನೇ ವಯಸ್ಸಿನಲ್ಲಿ 2 ಎಮ್ಮೆ ಹಾಗು ಒಂದು ಕರು ಕದ್ದ ಖದೀಮನೊಬ್ಬ 77 ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದ ಅಪರೂಪದ ಘಟನೆ ಬೀದರ್‌ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಮೇಹಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1965 ರಲ್ಲಿ ಮಹಾರಾಷ್ಟ್ರ ಮೂಲದ ಇಬ್ಬರು ಎರಡು ಎಮ್ಮೆ ಹಾಗು ಒಂದು‌ ಕರು ಕದ್ದು ಪರಾರಿಯಾಗಿದ್ದರು. ಬಳಿಕ ಪೊಲೀಸರು ಇಬ್ಬರನ್ನ‌ ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದರು. ಆದರೆ ಜಾಮೀನು ಮೇಲೆ ಬಿಡುಗಡೆ ಆದ ಗಣಯ್ಯ ಅಲಿಯಾಸ್ ಗಣಪತಿ ಎಂಬಾತ ತಲೆಮರಿಸಿಕೊಂಡಿದ್ದ. ಸತತವಾಗಿ ಅಂದಿನಿಂದ ಆರೋಪಿ ಪತ್ತೆಗಾಗಿ ಜಾಲ‌ ಬೀಸಿದ್ದ ಪೊಲೀಸರು 57 ವರ್ಷಗಳ ಬಳಿಕ ಮಹಾರಾಷ್ಟ್ರ ಜಿಲ್ಲೆಯ ನಾಂದೇಡ ತಾಲೂಕಿನ ಟಾಕಳಗಾಂವ್ ಗ್ರಾಮದಲ್ಲಿ ಆರೋಪಿ ಗಣಯ್ಯನನ್ನ ಬಂಧಿಸಿದ್ದಾರೆ. ಇಬ್ಬರು ಆರೋಪಿತರಲ್ಲಿ ಇನ್ನೋರ್ವ ಆರೋಪಿ ಕಿಶನ್ ಚಂದರ್ ಈಗಾಗಲೇ ಮೃತಪಟ್ಟಿದ್ದು, ಸದ್ಯ ಬಂಧಿತ ಆರೋಪಿ ಗಣಯ್ಯ‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಾಮೀನು ಸಿಕ್ಕಿದ ಮೇಲೆ ಆರೋಪಿ ತಲೆಮರೆಸಿಕೊಂಡಿದ್ದರಿಂದ ಇದು ಲಾಂಗ್ ಪೆಂಡಿಂಗ್ ಪ್ರಕರಣವಾಗಿ ಕ್ಲೋಸ್ ಆಗದೇ ಪೊಲೀಸರು ತನಿಖೆಯನ್ನು ಜೀವಂತವಾಗೇ ಇಟ್ಟಿದ್ದರು. ಹಲವಾರು ವರ್ಷಗಳ ನಂತರ ಆರೋಪಿ ಸಿಕ್ಕಿಬಿದ್ದಿದ್ದು ಪೊಲೀಸರ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ.

57 ವರ್ಷಗಳ ಹಿಂದಿನ ಪ್ರಕರಣ ಬೇಧಿಸಿದ ಮೇಹಕರ್ ಪೊಲೀಸ್ ಠಾಣಾ ಪೊಲೀಸರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.


ವರದಿ: ನಂದಕುಮಾರ ಕರಂಜೆ, ಬೀದರ

1 COMMENT

Comments are closed.