ಮೂಡಲಗಿ: ಗ್ರಾಮೀಣ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಿದಾಗ ಅವರ ಪ್ರತಿಫಲನ ರಾಷ್ಟ್ರ ನಿರ್ಮಾಣದಲ್ಲಿ ಪರಿಣಾಮ ಬೀರುತ್ತದೆ. ಗ್ರಾಮೀಣ ಭಾರತ ಸದೃಢವಾದರೆ ಮಾತ್ರ ಆತ್ಮನಿರ್ಭರ ಭಾರತ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಚಂದರಗಿಯ ಸ್ಪೋಕೋ ಕ್ರೀಡಾ ಶಾಲೆಯ ಅಧ್ಯಕ್ಷ ಬಸನಗೌಡ ಪಾಟೀಲ ಹೇಳಿದರು.
ಅವರು ಸಮೀಪದ ನಾಗನೂರ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮೂಡಲಗಿ ಹಾಗೂ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಎನ್.ಎಂ.ಎಂ.ಎಸ್. ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ನಡೆದ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ನಮ್ಮ ಮೂಡಲಗಿ ತಾಲೂಕಿನ ಮಕ್ಕಳ ಸಾಧನೆ ಅಭಿನಂದನಾರ್ಹವಾಗಿದೆ. ಪಾಲಕರು ಹಾಗೂ ಶಿಕ್ಷಕರು ಪ್ರತಿ ಮಗುವಿನ ಶೈಕ್ಷಣಿಕ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ತಮಗೆ ವಹಿಸಿರುವ ಜವಾಬ್ದಾರಿ ಅರಿತು ಅವರೆಲ್ಲ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಪ್ರತಿ ಮಗುವಿನಲ್ಲಿಯೂ ಒಂದು ಸುಪ್ತವಾದ ಪ್ರತಿಭೆ ಇದೆ. ಅದನ್ನು ಪಾಲಕರು ಹಾಗೂ ಶಿಕ್ಷಕರು ಹೊರಜಗತ್ತಿಗೆ ಅನಾವರಣಗೊಳಿಸುವಲ್ಲಿ ಶ್ರಮಿಸಬೇಕು. ನಮ್ಮ ಮಕ್ಕಳು ನಮ್ಮ ಮನೆ, ತಾಲೂಕು ಹಾಗೂ ರಾಷ್ಟ್ರದ ಆಸ್ತಿಯಾಗಿದ್ದಾರೆ. ಚಂದ್ರಯಾನ-3ರ ಯಶಸ್ಸು ನಮಗೆ ಹೊಸ ದಾರಿಗಳ ಅವಕಾಶಗಳನ್ನು ತೆರೆದುಕೊಟ್ಟಿದೆ. ಜಗತ್ತಿನೆದುರು ಭಾರತದ ಶಕ್ತಿಯ ಅನಾವರಣವಾಗಿದೆ. ರಾಜ್ಯದಲ್ಲಿಯೇ ಅತಿಹೆಚ್ಚು ಮಕ್ಕಳು ಮೂಡಲಗಿ ತಾಲೂಕಿನಿಂದ ಎನ್.ಎಂ.ಎಂ.ಎಸ್. ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ ಇದು ಇಡೀ ತಾಲೂಕಿಗೆ ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.
ಮೂಡಲಗಿ ತಾಲೂಕಿನಲ್ಲಿ ಎನ್.ಎಂ.ಎಂ.ಎಸ್. ಶಿಷ್ಯವೇತನಕ್ಕೆ ಅರ್ಹರಾದ 112 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಜಂಬಗಿ, ಪ್ರಾಚಾರ್ಯರಾದ ಗಿರೀಶ ಗೋರಬಾಳ, ನಿರ್ದೇಶಕರಾದ ಸಂತೋಷ ಮಿರ್ಜಿ, ಚೇತನ ಜೋಗನ್ನವರ, ಇಸಿಒ ಸತೀಶ, ಸಿಆರ್ಪಿಗಳಾದ ವ್ಬಿ.ಆರ್ ಬರಗಿ, ಆನಂದ ಹಮ್ಮನವರ, ಸಿದ್ದು ಗೋಕಾಕ ಹಾಗೂ ಸಾಧಕ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.
ರಾಚಯ್ಯ ನಿರ್ವಾಣಿ ಸ್ವಾಗತಿಸಿದರು, ರಾಜೇಂದ್ರ ಪಾಟೀಲ, ಸಂಜು ವಡೆಯರ್ ನಿರೂಪಿಸಿದರು. ಸಂಜೀವ ವಾಲಿ ವಂದಿಸಿದರು.