ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆ ಕಾವು ಜೋರಾಗಿದ್ದು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತನ್ನ ತವರೂರು ಭಾಲ್ಕಿ ಕ್ಷೇತ್ರದಲ್ಲಿ ಬರುವ ೧೮ ರಂದು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದಾರೆ.
ಭಾಲ್ಕಿ ಕ್ಷೇತ್ರದಲ್ಲಿ ಗುಡಿಸಲು ಮುಕ್ತ ಭಾಲ್ಕಿಗಾಗಿ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ವೇದಿಕೆ ಸಿದ್ಧಗೊಂಡಿದೆ ಎಂದು ಹೇಳಬಹುದು.
ಇತ್ತ ಕೆಪಿಸಿಸಿ ರಾಜ್ಯ ಕಾರ್ಯಾದ್ಯಕ್ಷ ಈಶ್ವರ ಖಂಡ್ರೆ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಇವರಿಬ್ಬರ ನಡುವಿನ ಗುದ್ದಾಟಕ್ಕೆ ಭಾಲ್ಕಿ ಕ್ಷೇತ್ರದ ಬಡವರು ಬಲಿಪಶು ಆಗುವುದು ಗ್ಯಾರಂಟಿ ಎಂಬ ವಾತಾವರಣ ಮೂಡಿದೆ.
ಇತಿಹಾಸ ಪುಟಗಳನ್ನು ತಿರುಚಿ ನೋಡಿದರೆ. ಗುಡಿಸಲು ಮುಕ್ತ ಕ್ಷೇತ್ರ ಮಾಡುತ್ತೇವೆ ಎಂದು ಭಾಲ್ಕಿ ಕ್ಷೇತ್ರದಲ್ಲಿ ಆಯ್ಕೆಯಾಗಿ ಬಂದ ಹಲವು ಸರ್ಕಾರಗಳು ಏನನ್ನೂ ಮಾಡದೆ ಕೆಲಸ ಕಳೆದು ಕೊಂಡು ಹೋಗಿವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮನೆ ನೀಡಿದ ಹಿನ್ನೆಲೆಯಲ್ಲಿ ಕೆಲವು ಪಿಡಿಒ ಅಧಿಕಾರಿಗಳ ಕೆಲಸಕ್ಕೆ ಕುತ್ತು ಬಂದಿದ್ದು ಕೆಪಿಸಿಸಿ ರಾಜ್ಯ ಕಾರ್ಯಾದ್ಯಕ್ಷ ಅಧ್ಯಕ್ಷ ಈಶ್ವರ ಖಂಡ್ರೆ ತನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ ಮನೆ ಕೊಟ್ಟಿದ್ದಾರೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆ ನಡೆಸಿತ್ತು. ತನಿಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾಬೀತಾದ ಕಾರಣ ರಾಜ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಲು ಹಿಂದೇಟು ಹಾಕಿತ್ತು.
ಈಗ ಖಂಡ್ರೆಯವರು ಮನೆ ಸಿಗದವರ ಪರವಾಗಿ ಹೋರಾಟ ಆರಂಭಿಸುವ ಸೂಚನೆ ನೀಡಿದ್ದು ನಮ್ಮ ಮನೆ ಎಲ್ಲಿ ? ಎಂಬ ಪ್ರಶ್ನೆ ಇಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಯೋಜನೆ ಹಾಕಿದ್ದಾರೆ ಎನ್ನಲಾಗಿದೆ.
ಈಗ ಮತ್ತೆ ಗುಡಿಸಲು ಮುಕ್ತ ಭಾಲ್ಕಿ ಕ್ಷೇತ್ರ ಎಂಬ ರಾಜಕೀಯ ಆಟ ಶುರು ಆಗಿದೆ ಎಂದು ಅಭಿಪ್ರಾಯ ಪಡುತ್ತಾರೆ ಭಾಲ್ಕಿ ಕ್ಷೇತ್ರ ಸಾರ್ವಜನಿಕರು. ಈ ಗುಡಿಸಲು ಮುಕ್ತ ರಾಜಕೀಯ ಗುದ್ದಾಟ ಹೀಗೇ ನಡೆಯುತ್ತದೆಯೋ ಅಥವಾ ಬಡವರಿಗೆ ಮನೆ ಕಟ್ಟಿ ಕೊಡುತ್ತಾರೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ