ಕರ್ನಾಟಕ ಸರ್ವೋದಯ ಮಂಡಲಿಯ ವತಿಯಿಂದ ಬೆಂಗಳೂರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಗಾಂಧಿ ಮಾಸಾಚರಣೆಯ ಪ್ರಯುಕ್ತ ಶಿಕ್ಷೆಗೊಳಪಟ್ಟ ಖೈದಿಗಳಿಗೆ ಮನಃಪರಿವರ್ತನಾ ಕುರಿತು ಉಪನ್ಯಾಸವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು .
ಒಂದು ಕಾಲದಲ್ಲಿ ಅಪರಾಧಿಯಾಗಿ ಶಿಕ್ಷೆ ಅನುಭವಿಸಿ ಕೈದಿಯಾಗಿದ್ದ ಮುಂಬೈನ ಲಕ್ಷ್ಮಣ ತುಕಾರಾಮ ಗೋಲೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಬದುಕು – ಬರಹಗಳಿಂದ ಪ್ರೇರೇಪಣೆಗೊಂಡು ಪರಿವರ್ತಿತಗೊಂಡ ಜೀವಂತ ಉದಾಹರಣೆಯಾಗಿ ನಮ್ಮೊಂದಿಗಿದ್ದಾರೆ . ಅವರು ಶಿಕ್ಷೆಗೊಳಪಟ್ಟ ಖೈದಿಗಳಿಗೆ ಮನಃಪರಿವರ್ತನಾ ಕುರಿತು ಉಪನ್ಯಾಸವನ್ನು ನೀಡಿ ಮಾತನಾಡುತ್ತ, ಕ್ಷಣಿಕ ಕ್ರೋಧದಿಂದ ಅಪರಾಧವೆಸಗಿ ಬಂಧಿಗಳಾಗಿ ಶಿಕ್ಷೆಗೊಳಗಾಗಿ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳದೆ ನಿಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯ ಆಲೋಚನೆಗಳಿಂದ ಸುಧಾರಣೆಯಾಗಿ ಉತ್ತಮ ಪ್ರಜೆಗಳಾಗಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬೆಂಗಳೂರು ನಗರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ.ಶೇಷು ಮೂರ್ತಿ, ಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತಿಯಲ್ಲಿ ಕರ್ನಾಟಕ ಸರ್ವೋದಯ ಮಂಡಲಿಯ ಅಧ್ಯಕ್ಷ ಡಾ.ಹೆಚ್.ಎಸ್. ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯದರ್ಶಿ ಡಾ.ಯ.ಚಿ.ದೊಡ್ಡಯ್ಯ ರವರು ಗಾಯನದ ಮೂಲಕ, ನಿವೃತ್ತ ರಿಜಿಸ್ಟ್ರಾರ್ ರಾಮಕೃಷ್ಣ ಮಂಜ ಕೊಳಲು ವಾದನದಿಂದ, ವಿಶ್ರಾಂತ ಬ್ಯಾಂಕ್ ವ್ಯವಸ್ಥಾಪಕ ನರಸಿಂಹಮೂರ್ತಿ ರಂಜಿಸಿದರು, ಸರ್ವೋದಯ ಮಂಡಲಿಯ ರಾಮನಗರ ಘಟಕದ ಎಂ.ವಿ.ಶ್ರೀನಿವಾಸನ್, ಯಾಕೂಬ್ ಪಾಷಾ , ಬೆಂ.ನಗರ ಜಿಲ್ಲಾಧ್ಯಕ್ಷ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.