ಕವನ

Must Read

ಸತ್ಯ ಸೆರೆಯಾಗಿದೆ

ಸತ್ಯ ಸೆರೆಯಾಗಿದೆ ಇಂದು ನರಳುತಿದೆ ನೊಂದು
ಸುಳೆಂಬ ಮುಳ್ಳು ಕಂಟಿಯಾ ಬೇಲಿಯೊಳು
ಸತ್ಯ ನಲುಗುತಿದೆ ಬೆಂದು ಹೆದರೆನೆನುತಲೇ
ಮೋಸದ ಸರಳುಗಳ ಬಲೆಯ ಬಿಲದೊಳು //

ನೋಟಿನಾ ಕಂತೆ ಕಂತೆಯೊಳು
ಅಧಿಕಾರ ಅಂತಸ್ತಿನ ಸುಳಿಯೊಳಗೆ
ಅಳಲಾರದೆ ನಗಲಾರದೆ ಮುಖ ತೋರಲಾಗದೆ
ಹೆಡೆಮುರಿ ಕಟ್ಟಿಸಿಕೊಂಡು ರಟ್ಟೆ ಮುರಿಸಿಕೊಂಡು
ಸೆರೆಯಾಗಿದೆ ಸತ್ಯ ಸೆರೆಯಾಗಿದೆ ಮಿಸುಕಾಡದೆ //

ಅಬ್ಬರದ ಮಾತಿನೊಳು ಬೊಬ್ಬಿಡುವ ಸುಳ್ಳಿನೊಳು
ವ್ಯಾಪಾರದ ರಂಪ ರಟ್ಟು ರಾಡಿಯೊಳು
ಅಸತ್ಯದ ಗೊಬ್ಬರ ತುಂಬಿದ ಆಡಿಯೊಳು
ಚಿಗುರಲಾರದೆ ಮೊಳೆಯಲಾರದೆ
ಮಣ್ಣು ಗೊಬ್ಬರ ಮೀಟಿ ಏಳುವ ಪ್ರಯತ್ನದಲ್ಲಿ
ಸತ್ಯ ಸೆರೆಯಾಗಿದೆ ಸತ್ಯ ಸೆರೆಯಾಗಿದೆ
ಅಲುಗಾಡದೆ ಮಿಡುಕಾಡದೇ//

ಮೋಸ ವಂಚನೆಯ ಸಂಚಲಿ
ಭ್ರಷ್ಟಾಚಾರದ ಭೂತ ಪ್ರೇತಗಳ ಕುಣಿತದಲಿ
ಲಂಚಕೋರ ಲಪಂಗರ ಕಿಸೆ ನಿಶೆಯೊಳಗೆ
ಅತ್ಯಾಚಾರದ ಕಾಲ್ತುಳಿತದ ನೋವಿನಾ
ಹೆಜ್ಜೆ ಗೆಜ್ಜೆ ಸಪ್ಪಳದ ಮಂಪರಿನಲ್ಲಿ
ಸತ್ಯ ಸೆರೆಯಾಗಿದೆ ಹೆಣ್ಣಿನ ಎದೆಯೊಳಗೆ//

ಗೆಲುವಿನ ನಾಗಾಲೋಟ ಅಟ್ಟಹಾಸ
ಅಧಿಕಾರ ಅಂತಸ್ತು ಸಿರಿವಂತಿಕೆಯ ಭ್ರಮೆ
ಸೊಕ್ಕು ಮದ ದಿಮಾಕಿನ ಅಮಲೊಳಗೆ
ಅಹವಾಲುಗಳ ಉರಿ ಸವಾಲುಗಳ ಜ್ವಾಲೆ
ಬದುಕು ಬಂಡಿಯ ಕೀಲಿಲ್ಲದ ಗಾಲಿಯ ಅಡಿಯೊಳು
ಪುಡಿಯಾಗದೆ ಹುಡಿಗೆ ಕಣ್ಮುಚ್ಚುತ
ಬೆಳಕಾಗದ ದಿನಗಳ ಹಿಂಸೆಯಲಿ
ಸತ್ಯವೆಂಬ ಕಳಸ ಮಿಂಚಲಾರದೆ
ಸೆರೆಯಾಗಿದೆ ಸತ್ಯ ಸುಳ್ಳಿನಾ ಕತ್ತಲೆಯೊಳು//

ಡಾ ಅನ್ನಪೂರ್ಣ ಹಿರೇಮಠ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group