Homeಕವನಕವನ : ಗಾಂಧಿಯನೇಕೆ ಕೊಂದರು ?

ಕವನ : ಗಾಂಧಿಯನೇಕೆ ಕೊಂದರು ?

ಗಾಂಧಿಯನೇಕೆ ಕೊಂದರು ?

ಸತ್ಯ ಶಾಂತಿ ನ್ಯಾಯ ಮೂರ್ತಿ
ಗಾಂಧಿಯನೇಕೆ ಕೊಂದರು ?
ಎಷ್ಟೋ ವರುಷಗಳ ಹಿಂದೆ
ನನ್ನ ಮುಗ್ಧ ಮಗನ ಪ್ರಶ್ನೆಯು

ದಶಕ ಕಳೆಯಿತು ಉತ್ತರ ಹುಡುಕಲು
ಕೊನೆಗೂ ಸಿಕ್ಕಿತು ಕಾರಣ
ಬಿಚ್ಚಿ ಹೇಳಿದೆ ನನ್ನ ಮಗನಿಗೆ
ನಿಜದ ನಿಲುವಿನ ಹೂರಣ

ಬಾಪು ಸರಳ ಸಮತೆ ಪ್ರಿಯ
ಕೈಗೆ ಕೊಟ್ಟನು ಸ್ವಾತಂತ್ರ್ಯ
ದಾಸ್ಯ ತೊಲಗಿಸಿ ದೇಸಿ ಚರಕ
ನೂಲು ನೂತನು ಭಾರತ

ಸುಳ್ಳು ಎಂದೂ ಹೇಳಲಿಲ್ಲ
ಕೋಮು ಗಲಭೆ ಮಾಡಲಿಲ್ಲ
ಜಾತಿ ಧರ್ಮದ ದ್ವೇಷ ಬೆಂಕಿಗೆ
ತುಪ್ಪವನ್ನು ಸುರಿಯಲಿಲ್ಲ

ಗಣಿ ಲೂಟಿ ಹೊಡೆಯಲಿಲ್ಲ
ದೇಶ ಬಿಟ್ಟು ಓಡಲಿಲ್ಲ
ಸುಳ್ಳು ಲೆಕ್ಕದಿ ದುಡ್ಡು ತಿಂದು
ದೊಡ್ಡ ಬಂಗಲೆ ಕಟ್ಟಲಿಲ್ಲ

ರೈತರನ್ನು ಕೊಲ್ಲಲಿಲ್ಲ
ಶ್ರಮಿಕ ಜನರನು ತುಳಿಯಲಿಲ್ಲ
ನಿರುದ್ಯೋಗ ನಿತ್ಯ ತಾಂಡವ
ಕೆರೆಗೆ ಯುವಕರ ನೂಕಲಿಲ್ಲ

ಧರ್ಮ ದೇವರ ಹೆಸರಿನಲ್ಲಿ
ಮೋಸ ಮಾಡಿ ಮೆರೆಯಲಿಲ್ಲ
ಮೌಲ್ಯ ಮೆಟ್ಟಿ ನೆಲದಿ ಹೂತು
ಖುರ್ಚಿ ಗದ್ದುಗೆ ಏರಲಿಲ್ಲ

ಗುಂಡು ಹೊಡೆದರೂ
ಸತ್ಯ ಹೇಳಿದ ನಮ್ಮ
ದೇಶದ ಮೋಹನ
ಗಾಂಧಿ ಮಂತ್ರವೇ ಪಾವನ
_________________________

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

RELATED ARTICLES

Most Popular

error: Content is protected !!
Join WhatsApp Group