spot_img
spot_img

ಅಕ್ಷರದ ಮೂಲಕ ಅಪ್ಪನನ್ನು ಸ್ಮರಿಸಿಕೊಳ್ಳುವ ವಿನೂತನ ಕಾರ್ಯಕ್ರಮ

Must Read

- Advertisement -

ಮುನವಳ್ಳಿ: ಸಮೀಪದ ರೈನಾಪುರ ಗ್ರಾಮದಲ್ಲಿ ದಿ. ಪತ್ರೆಪ್ಪ ಪಟ್ಟಣಶೆಟ್ಟಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಕವಿ ನಾಗೇಶ್ ಜೆ. ನಾಯಕ ಅವರ ಗಜಲ್ ಸಂಕಲನ ‘ಆತ್ಮ ಧ್ಯಾನದ ಬುತ್ತಿ’ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭ ನಡೆಯಿತು.

ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಯರಗಟ್ಟಿ ಎಸ್.ಬಿ. ದೇಸಾಯಿ ಕಾಲೇಜಿನ ಉಪನ್ಯಾಸಕರಾದ ಎಮ್. ಎಸ್. ಜಾವೂರ “ಅಪ್ಪನ ಸ್ಮರಣೆಯಲ್ಲಿ ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಹಮ್ಮಿಕೊಂಡಿದ್ದು ಅವಿಸ್ಮರಣೀಯವಾದದ್ದು. ಆದರ್ಶ ಶಿಕ್ಷಕರಾಗಿ ತಮ್ಮ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಉಳಿಸಿ ಹೋದ ತಂದೆಯನ್ನು ಕುಟುಂಬವರ್ಗದವರು ಹೀಗೆ ಅಕ್ಷರದ ಮೂಲಕ ಅಜರಾಮರವಾಗಿ ಉಳಿಸಿದ್ದು ನಿಜಕ್ಕೂ ಶ್ಲಾಘನೀಯ. ದ್ವೇಷ, ಅಸೂಯೆ, ಸಣ್ಣತನಗಳನ್ನೆಲ್ಲ ಕಳೆದು ಶರಣರ ವಚನದಂತೆ ಬದುಕಿಗೆ ದಾರಿ ದೀಪವಾಗುವ ಮೌಲ್ಯಗಳನ್ನು ಸಂಕಲನದ ಎಲ್ಲ ಗಜಲ್‌ಗಳಲ್ಲಿ ಕಾಣಬಹುದು” ಎಂದು ನುಡಿದರು.

ಕೃತಿ ಪರಿಚಯಿಸಿದ ಯಕ್ಕುಂಡಿ ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ಆರ್ ಕೆ ಮುರಂಕರ ಮಾತನಾಡಿ “ನಾಗೇಶ್ ನಾಯಕರು ಅನುಭಾವದ ನೆಲೆಯಲ್ಲಿ ಕಟ್ಟಿಕೊಟ್ಟ ಗಜಲ್‌ಗಳು ಓದುಗರನ್ನು ಸೂಜಿಗಲ್ಲಿನಂತೆ ಸೆಳೆದುಕೊಳ್ಳುತ್ತವೆ. ಆಧ್ಯಾತ್ಮದ ನಿಟ್ಟಿನಲ್ಲಿ ಬೆಳಕಿನ ಕಿರಣಗಳಂತೆ ಚಿಂತನೆಯನ್ನು ಹೆಪ್ಪುಗಟ್ಟಿಸುವ ಗಜಲ್ ಅರಿವಿನ ದೀಪ ಬೆಳಗಿಸುತ್ತವೆ” ಎಂದರು.

- Advertisement -

ಇದೇ ಸಂದರ್ಭದಲ್ಲಿ ಅಪ್ಪನ ಕುರಿತಾಗಿಯೇ ರಚಿಸಿದ ಕವಿತೆಗಳನ್ನು ಕವಿಗಳಾದ ವಾಯ್. ಬಿ. ಕಡಕೋಳ, ಜಗದೀಶ ಸಂಗನ್ನವರ, ಶಿವಾನಂದ ಬಸಿಡೋಣಿ, ಆನಂದ ಪಾಟೀಲ, ವಿಠಲ ದಳವಾಯಿ, ಬಿ. ಎಂ. ಬಾವಾಖಾನ್, ಇಬ್ರಾಹಿಂ ಚಾಂದಖಾನವರ, ಎಫ್ ಎಲ್ ಮದಹಳ್ಳಿ, ಆಶಾ ಪರೀಟ ಕವನ ವಾಚಿಸಿದರು. ಬಸವರಾಜ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. “ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು.ತಂದೆ ತಾಯಿಗೆ ಗೌರವ ನೀಡುವ ಮೂಲಕ ಅವರನ್ನು ಪೂಜ್ಯನೀಯ ಭಾವದಿಂದ ಕಾಣಬೇಕು.ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕೀರ್ತಿ ಸಂಪಾದಿಸಬೇಕು.ಇಂದು ಪಟ್ಟಣಶೆಟ್ಟಿಯವರ ಪುಣ್ಯ ಸ್ಮರಣೆ ಅವರ ಮಕ್ಕಳು ಹಮ್ಮಿಕೊಂಡಿದ್ದು ಇದು ಉತ್ತಮ ಸಂಸ್ಕೃತಿಗೆ ನಾಂದಿ.ಈ ರೀತಿ ತಮ್ಮ ತಂದೆ ತಾಯಿಯವರನ್ನು ಸ್ಮರಿಸುವ ಮೂಲಕ ಅವರ ಬದುಕಿನ ಆದರ್ಶಗಳನ್ನು ಮುಂದಿನ ಪೀಳಿಗೆಗೂ ಕೂಡ ಪರಿಚಯಿಸುತ್ತ ಸಾಗಬೇಕು” ಎಂದು ಬಾಗೋಜಿಕೊಪ್ಪದ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕೃತಿಕಾರ ನಾಗೇಶ್ ನಾಯಕ ಮಾತನಾಡಿ “ ತಮ್ಮ ಕಾವ್ಯದಲ್ಲಿ ಗಜಲ್ ಹುಟ್ಟಿದ ಸಮಯವನ್ನು ಸ್ಮರಿಸುತ್ತ ಇಂತಹ ಕೃತಿ ಪ್ರಕಟಣೆಗೆ ಪಟ್ಟಣಶೆಟ್ಟಿಯವರ ಕೊಡುಗೆ ನಿಜಕ್ಕೂ ಸ್ಮರಣೀಯ”ಎಂದರು. ಪಟ್ಟಣಶೆಟ್ಟಿ ಕುಟುಂಬದವರಿಂದ ವೇದಿಕೆ ಮೇಲಿನ ಗಣ್ಯರಿಗೆ ಸನ್ಮಾನ ನೆರವೇರಿಸಲಾಯಿತು.

ಮಂಜುಳಾತಾಯಿ ಕುಂಬಾರಗಿರಿಮಠ ಪ್ರಾರ್ಥಿಸಿದರು. ಎನ್. ಎಸ್. ಹೂಗಾರ ಸ್ವಾಗತಿಸಿದರು. ಆರ್.ಕೆ. ತಳವಾರ ವಂದಿಸಿದರು. ಎಂ. ಎಂ. ವಿರಕ್ತಮಠ ನಿರೂಪಿಸಿದರು. ಶಿವಾನಂದ ಮದ್ದಾನಿ, ಕುಮಾರ್ ಹಾದಿಮನಿ, ಮಹಾಂತೇಶ ಪಟ್ಟೇದ, ಶ್ರೀಕಾಂತ ಹೊರಟ್ಟಿ, ಕಾಳಪ್ಪ ಬಡಿಗೇರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group