Homeಸುದ್ದಿಗಳುವ್ಯಸನಮುಕ್ತ ಜೀವನದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ - ಪಿಎಸ್ಐ ಚಂದ್ರಕಲಾ

ವ್ಯಸನಮುಕ್ತ ಜೀವನದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ – ಪಿಎಸ್ಐ ಚಂದ್ರಕಲಾ

ಬನವಾಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಶಿರಸಿ ತಾಲೂಕು ಇವರ‌ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿಯ ಶ್ರೀ ನಾಮದೇವ ಕಲ್ಯಾಣ ಮಂಟಪದಲ್ಲಿ ಒಂದು ವಾರ ನಡೆಯಲಿರುವ 1889ನೇ ಮದ್ಯವರ್ಜನ‌ ಶಿಬಿರವನ್ನು ಬನವಾಸಿ ಪೋಲಿಸ್ ಠಾಣೆಯ ಪಿಎಸ್ಐ ಚಂದ್ರಕಲಾ ಪತ್ತಾರ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವ್ಯಸನ‌ ಮುಕ್ತ ಜೀವನದಿಂದ ಮನುಷ್ಯನಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಲಭಿಸುತ್ತದೆ. ಶಿಬಿರದಲ್ಲಿ ಪಾಲ್ಗೊಂಡವರು ಸ್ವಪ್ರೇರಣೆಯಿಂದ ವ್ಯಸನ‌ಮುಕ್ತರಾಗಿ ಜೀವನ ನಡೆಸಿದಲ್ಲಿ ಅದುವೇ ನೀವು ಶಿಬಿರ ಆಯೋಜಕರಿಗೆ ನೀಡುವ ದೊಡ್ಡ ಗೌರವವಾಗಿರುತ್ತದೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಇಲಾಖೆಯ ಸಂಪೂರ್ಣ ಸಹಕಾರವಿದೆ ಎಂದರು.

ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ್ ಮಾತನಾಡಿ, ವ್ಯಸನ ಮುಕ್ತ ಸಮಾಜದ ನಿರ್ಮಾಣವೇ ಶಿಬಿರದ ಉದ್ದೇಶವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಗೊಂಡ ಮದ್ಯವರ್ಜನ ಶಿಬಿರ ಇಂದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ. ಈವರೆಗೆ 1889 ಶಿಬಿರಗಳು ನಡೆದಿದ್ದು ಈವರೆಗೆ 1 ಲಕ್ಷಕ್ಕೂ ಅಧಿಕ ಜನರನ್ನು ವ್ಯಸನ ಮುಕ್ತರನ್ನಾಗಿಸಲಾಗಿದೆ ಎಂದರು.

ಅಧ್ಯಕ್ಷತೆವಹಿಸಿದ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಜಾನನ ಗೌಡ ಮಾತನಾಡಿ, ದೇಶ ಹಾಗೂ ಸಮಾಜ ಸುಧಾರಣಾ ಕಾರ್ಯದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಮಹತ್ವಪೂರ್ಣವಾಗಿದೆ. ಬನವಾಸಿಯಲ್ಲಿ ಇಂತಹ ಅರ್ಥಪೂರ್ಣ ಸಮಾಜ ಸುಧಾರಣಾ ಕಾರ್ಯಕ್ರಮವನ್ನು ನಡೆಸುವ ಭಾಗ್ಯ ನಮಗೆ ದೊರೆಯುತ್ತಿರುವುದು ನಮ್ಮ ಸೌಭಾಗ್ಯವಾಗಿದೆ. ಇತ್ತಿಚಿನ ದಿನಗಳಲ್ಲಿ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗುತ್ತಿವೆ. ದುಶ್ಚಟದ ವ್ಯಸನದಿಂದಾಗಿ ಎಷ್ಟೋ ಬಡ ಕುಟುಂಬಗಳು ನರಳುತ್ತಿವೆ. ಇವೆಲ್ಲ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಪೂಜ್ಯ ವಿರೇಂದ್ರ ಹೆಗಡೆಯವರು ಜೀವನದ ತಿರುವಿನ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಬೆಳಕಾಗಿದ್ದಾರೆ ಎಂದರು.

ಸಮಿತಿಯ ಗೌರವಾಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ, ಶಿರಸಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಳಿಂಗರಾಜ್, ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾನ್, ಸದಸ್ಯ ನಾಗರಾಜ ಉಪ್ಪಾರ ಮಾತನಾಡಿದರು.

ವೇದಿಕೆಯಲ್ಲಿ ವೈದ್ಯಾಧಿಕಾರಿ ಡಾ. ಜಯಶ್ರೀ ಹೆಗಡೆ, ಗ್ರಾಪಂ ಸದಸ್ಯರಾದ ಜಮೀಲ, ಅಶೋಕ ನಾಯ್ಕ್, ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್ ಇದ್ದರು.

ಒಂದು ವಾರಗಳ ಕಾಲ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಸುಮಾರು 75 ಶಿಬಿರಾರ್ಥಿಗಳು ಭಾಗವಹಿಸಿದ್ದು, ಶಿಬಿರಾಧಿಕಾರಿ ನಾಗೇಂದ್ರ, ಆರೋಗ್ಯ ಸಹಾಯಕಿ ಜಯಲಕ್ಷ್ಮಿ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಕೃಷಿ ಅಧಿಕಾರಿ ರಾಮು ನಿರೂಪಿಸಿದರು. ಸೇವಾ ಪ್ರತಿನಿಧಿ ಅನಿತಾ ಬಂಗ್ಲೆ ಪ್ರಾರ್ಥಿಸಿದರು. ಮೇಲ್ವಿಚಾರಕ ನಾಗರಾಜ ಪಿ. ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸವಿತಾ ಆಚಾರಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group