ಸಿಂದಗಿ: ಕಳೆದ 2021ರ ಉಪ ಚುನಾವಣೆಯಲ್ಲಿ ಕ್ಷೇತ್ರದ ಕಾರ್ಯಕರ್ತರು ಶತಾಗತಾಯವಾಗಿ ಪ್ರಯತ್ನಿಸಿದರು ಕೂಡಾ ಸೋಲು ಕಂಡಿದ್ದೇವೆ ಆದರೆ ಮತದಾರರ ಮನಸ್ಸಿನಿಂದ ಸೋಲು ಕಂಡಿಲ್ಲ ಈ ಸಾರ್ವತ್ರಿಕ ಚುನಾವಣೆಯಲ್ಲಿ 7808 ಮತಗಳ ಅಂತರದ ಅಭೂತಪೂರ್ವ ಗೆಲುವು ತಂದುಕೊಟ್ಟು ಸಂಪೂರ್ಣ ಬಹುಮತದ ಸರಕಾರ ತರುವಲ್ಲಿ ಸಹಕರಿಸಿದ ಮತದಾರ ಪ್ರಭುಗಳಿಗೆ ಅಭಿನಂದನೆ ಎಂದು ನೂತನ ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಆನಂದ ಚಿತ್ರ ಮಂದಿರದಲ್ಲಿರುವ ಶಾಸಕರ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕ್ಷೇತ್ರದ ಫಲಿತಾಂಶವನ್ನು ಪರಿಗಣಿಸಿ 271ಗಳಲ್ಲಿ ಭೂತ್ ಮಟ್ಟದಲ್ಲಿ ಸಂಘಟನೆ ಮಾಡಿದ ಹಿನ್ನೆಲೆಯಲ್ಲಿ ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದ ಅವರು, ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ನಮ್ಮ ತಂದೆಯವರಾದ ದಿ.ಎಂ.ಸಿ.ಮನಗೂಳಿ ಅವರು ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಠು ಅನುದಾನ ತಂದಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸಂಪೂರ್ಣ ಬಹುಮತದ ಕಾಂಗ್ರೆಸ್ ಸರಕಾರ ಇರುವುದರಿಂದ ರೈತರ ಜಮೀನುಗಳೀಗೆ ಬಳಗಾನೂರ ಕೆರೆಯಿಂದ ನೀರಾವರಿ ಕಲ್ಪಿಸುವಂತೆ ತಾಂಬಾದಲ್ಲಿ ಬಹುದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಅದನ್ನು ಇತ್ಯರ್ಥಗೊಳಿಸಲು ಅಧಿಕಾರಿಗಳ ಜೊತೆ ಸಂಪರ್ಕಿಸಿ ಸೂಕ್ತ ಕ್ರಮ ಜರುಗಿಸುವುದು ಮತ್ತು ನೆನೆಗುದಿಗೆ ಬಿದ್ದಿರುವ ಆಲಮೇಲ ತೋಟಗಾರಿಕೆ ಕಾಲೇಜು ಪ್ರಾರಂಭಕ್ಕೆ ಮುಖ್ಯಮಂತ್ರಿಗಳಲ್ಲಿ ಚರ್ಚಿಸುವುದು ಅಲ್ಲದೆ ಆಲಮೇಲ ಪಟ್ಟಣದಲ್ಲಿ ಒಳಚರಂಡಿ ಯೋಜನೆ, ಸಿಂದಗಿಯಲ್ಲಿ ಆರ್ಟಿಓ ಆಪೀಸ್, ಪುರಸಭೆಯಿಂದ ನಗರ ಸಭೆಗೆ ಮೇಲ್ದರ್ಜೆಗೇರಿಸುವುದು, ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ನಿವಾರಣೆ ಮಾಡುವುದು, ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತಕ್ಕೆ ಕಾಯಕಲ್ಪ ಕೊಡುವುದು, ಸಿಂದಗಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದು, ಆಲಮೇಲದಲ್ಲಿ ಮಿನಿ ವಿಧಾನಸೌಧಾ ನಿರ್ಮಾಣ, ಸರಕಾರಿ ಡಿಗ್ರಿ ಕಾಲೇಜು ಮಂಜೂರಿಗೆ ಪ್ರಸ್ತಾವನೆ ಸಲ್ಲಿಸುವುದು ಸೇರಿದಂತೆ ಹತ್ತು ಹಲವು ಮೂಲಭೂತ ಸೌಕರ್ಯಗಳನ್ನು ಯಾವುದೇ ಜಾತಿ ಭೇದ ತೋರದೇ ಪ್ರಾಮಾಣಿಕವಾಗಿ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಅಭಿಮತ ವ್ಯಕ್ತಪಡಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಬಿಜಾಪುರ, ವೈ.ಸಿ.ಮಯೂರ, ಸುರೇಶ ಪೂಜಾರಿ, ಮಹ್ಮದಪಟೇಲ ಬಿರಾದಾರ, ಬಿ.ಜಿ.ನೆಲ್ಲಗಿ ವಕೀಲರು, ರಾಜಶೇಖರ ಕೂಚಬಾಳ, ಡಾ. ರಾಜಶೇಖರ ಸಂಗಮ, ಡಾ. ಶಿವಾನಂದ ಹೊಸಮನಿ, ಸುರೇಶ ಮಳಲಿ ಸೇರಿದಂತೆ ಹಲವರು ಇದ್ದರು