ಸಿಂದಗಿ: ಆಲಮೇಲ ರಸ್ತೆಯಲ್ಲಿರುವ ಮಹಾತ್ಮಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಬಾವುಟ ಹಿಡಿದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರದ ಮೂಲೆ ಮೂಲೆಯಿಂದ ಆಗಮಿಸಿದ್ದ ಅಭಿಮಾನಿಗಳ ಬೆಂಬಲದೊಂದಿಗೆ ಅಶೋಕ ಮನಗೂಳಿಯವರು ಆಗಮಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಆರಾಧ್ಯದೈವ ಮೂಲಕ ಆಂಜನೇಯ ದೇವಸ್ಥಾನ, ಸಂಗಮೇಶ್ವರ ದೇವಸ್ಥಾನ, ಸಾರಂಗಮಠ ನಂತರ ತಮ್ಮ ತಂದೆಯವರಾದ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಸಮಾಧಿ ಬಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಗಾಂಧಿಜಿ ಅವರ ಪುತ್ಥಳಿಗೆ, ಡಾ: ಬಿ.ಆರ್.ಅಂಬೇಡ್ಕರ ಮೂರ್ತಿಗೆ, ಟಿಪ್ಪು ಸುಲ್ತಾನ ವೃತ್ತಕ್ಕೆ, ಸ್ವಾಮಿ ವಿವೇಕಾನಂದ ಮೂರ್ತಿಗೆ ಮಾಲಾರ್ಪಣೆ, ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ತಹಸೀಲ್ದಾರ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ಅಶೋಕ ಮನಗೂಳಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು.
ತೆರೆದ ವಾಹನದಲ್ಲಿ ಅಭ್ಯರ್ಥಿ ಅಶೋಕ ಮನಗೂಳಿ ಮೆರವಣಿಗೆ ಸಾಗಿತು. ಮಧ್ಯಾಹ್ನ 1 ಗಂಟೆ ಆಗಿದ್ದರಿಂದ ಬಿಸಿಲಿನ ಪ್ರಖರತೆಯನ್ನು ಲೆಕ್ಕಿಸದೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಜಯ ಘೋಷಗಳೊಂದಿಗೆ ಅಪಾರ ಸಂಖ್ಯೆಯ ಜನಸ್ತೋಮದೊಂದಿಗೆ ಬೃಹತ್ ಮೆರವಣಿಗೆಯೊಂದಿಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಜಾತಿಯ ಆಧಾರದ ಮೇಲೆ ಚುನಾವಣೆ ಎದುರಿಸುವುದಿಲ್ಲ. ಬದಲಾಗಿ ಮಾನವೀಯ ನೆಲೆಗಟ್ಟಿನ ಮೇಲೆ ಸ್ಪರ್ಧೆ ಎದುರಿಸುತ್ತೇನೆ. ಚುನಾವಣೆಗಳಲ್ಲಿ ಜಾತಿ ಅಂತ ಬರಬಾರದು. ಎಲ್ಲರನ್ನೂ ಸರಿಸಮನಾಗಿ ಕಾಣುವುದು ಜನಪ್ರತಿನಿಧಿಗಳ ಧರ್ಮ. ಸಿಂದಗಿ ಎಂದರೆ ಅದು ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ನನಗೆ ಎಲ್ಲರೂ ಮುಖ್ಯ. ಜಾತಿ, ಮತ ಧರ್ಮ, ಪಂಥ ಎಂದು ನೋಡುವುದಕ್ಕಿಂತ ಮಾನವೀಯ ನೆಲೆಗಟ್ಟಿನಲ್ಲಿ ಎಲ್ಲರನ್ನೂ ಕಾಣಬೇಕು. ಎಲ್ಲ ಸಮುದಾಯದ ಜನರು ನನ್ನ ಜತೆ ಇದ್ದಾರೆ. ಇದೇ ನಂಬಿಕೆಯಿಂದ ನಾನು ಸ್ಪರ್ಧಿಸಿದ್ದೇನೆ. ಜನ ಗೆಲ್ಲಿಸುವ ಭರವಸೆ ನನಗಿದೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮೀತಿಯ ಅಧ್ಯಕ್ಷ ವಿಠ್ಹಲ ಕೊಳ್ಳುರ, ಎಸ್,ಎಮ್ ಪಾಟೀಲ(ಗಣೀಹಾರ), ಪುರಸಭೆ ಉಪಾಧ್ಯಕ್ಷ ಹಾಸೀಮ್ ಆಳಂದ, ರಾಕೇಶ ಕಲ್ಲೂರ, ದಯಾನಂದಗೌಡ ಬಿರಾದಾರ, ಮುತ್ತು ಮನಗೂಳಿ, ಗುರುಣಗೌಡ ಬಿರಾದಾರ್, ಬಿ,ಜಿ, ಪಾಟೀಲ್, ಡಾ. ಶಾಂತವೀರ ಮನಗೂಳಿ, ಮಂಜುನಾಥ್ ಬಿಜಾಪುರ, ಎಮ್,ಎಮ್ ಹಂಗರಗಿ, ಮಹಮ್ಮದ್ ಪಟೇಲ್ ಬಿರಾದಾರ, ಅರವಿಂದ್ ಹಂಗರಗಿ, ಸಾಹೇಬ್ಪಟೇಲ್ ಅವಟಿ, ನಾಗರತ್ನ ಮನಗೂಳಿ, ಡಾ. ಸಂಧ್ಯಾ ಮನಗೂಳಿ, ಪ್ರತಿಭಾ ಕಲ್ಲೂರ ಸೇರಿದಂತೆ ಅನೇಕರು ಇದ್ದರು.