ಮೂಡಲಗಿ: ಬಬಲಾದಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಮಠದ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಅರಳಿಮಟ್ಟಿ ಗ್ರಾಮದ ಶ್ರೀ ಸದಾಶಿವ ಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ನಮ್ಮ ದೇಶದಲ್ಲಿ ಅನೇಕ ಕಾಲ ಜ್ಞಾನಿಗಳು ತಮ್ಮ ತಪಸ್ಸು, ಪೂಜೆಯ ಮೂಲಕ ಭವಿಷ್ಯದಲ್ಲಿ ಜರುಗುವ ಸಂಗತಿಗಳನ್ನು ಅಂದಾಜಿಸುವ ಕಾಲಜ್ಞಾನದ ಶಕ್ತಿಯನ್ನು ಸಿದ್ದಿಸಿ ಕೊಂಡಿದ್ದಾರೆ.
ಅಂತಹ ಧಾರ್ಮಿಕ ಪರಂಪರೆಯನ್ನು ಸದಾಶಿವ ಶಾಖಾ ಮಠದ ಮೂಲಕ ಈ ಭಾಗದ ಜನರಿಗೆ ಧಾರ್ಮಿಕ, ಸಾಂಸ್ಕೃತಿಕ ಮಾರ್ಗದರ್ಶನ ಮಾಡುವ ಮುಂಚೂಣಿಯ ಮಠಗಳಲ್ಲಿ ಒಂದಾಗಿದೆ. ಗ್ರಾಮಗಳಲ್ಲಿನ ಜಾತ್ರೆ ಧಾರ್ಮಿಕ ಕಾರ್ಯಗಳು ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಚಟುವಟಿಕೆಗಳಾಗಿವೆ. ಇವುಗಳನ್ನು ಗ್ರಾಮದ ಜನತೆ ಶ್ರದ್ದಾ ಭಕ್ತಿಯಿಂದ ಆಚರಣೆ ಮಾಡುತ್ತಾ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ಒಳಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬಬಲಾದಿ ಶಾಖಾ ಮಠ ಕೊಲೂರದ ಪೂಜ್ಯ ಶ್ರೀ ಚಿಕ್ಕಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು, ಶ್ರೀಶೈಲ ಪೂಜೇರಿ, ಅಶೋಕ ಶಿವಾಪೂರ, ಶ್ರೀಶೈಲ ತುಪ್ಪದ, ಅಲ್ಲಪ್ಪ ನಂದಗನ್ನವರ, ಮಲ್ಲಪ್ಪ ಕುದ್ರಿಮನಿ, ಹಣಮಂತ ರಬಕವಿ, ಬಸವರಾಜ ಪಡಶೆಟ್ಟಿ, ರಾಮನಗೌಡ ಪಾಟೀಲ, ಬಸಪ್ಪ ಮಾಳಪ್ಪನವರ, ಬಸವರಾಜ ಕುದ್ರಿಮನಿ, ಸದಾಶಿವ ರಬಕವಿ, ಗೌಡಪ್ಪ ನಾಗನೂರ, ಬಸಪ್ಪ ನಾಡಗೌಡ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿರಿದ್ದರು.