ಸನ್ಮಾನ ಅಭಿನಂದನೆ ಕಾರ್ಯಕ್ರಮಗಳು ಯುವಕರು ಕ್ರಿಯಾಶೀಲರಾಗಿ ಭವಿಷ್ಯತ್ತನ್ನು ರೂಪಿಸಿಕೊಳ್ಳಲು ಪ್ರೇರಕ ಶಕ್ತಿಯಾಗಿ ನಿಲ್ಲುತ್ತವೆ. ವಿಶಿಷ್ಟ ಪದವಿಧರ ಯುವಕರು ಸದೃಢ, ಸಚ್ಚಾರಿತ್ರ್ಯ ಸಮಾಜ ಕಟ್ಟುವಲ್ಲಿ ಮುಂಚೂಣಿಯಲ್ಲಿ ಇರಬೇಕೆಂದು ಡಾ.ಗಡ್ಡಿಗೌಡರ್ ಹೇಳಿದರು.
ಸುಲಧಾಳ ಗ್ರಾಮದಲ್ಲಿ ಜರುಗಿದ ಐದು ಜನ ಪಿ.ಎಚ್.ಡಿ ಪಡೆದ ಮತ್ತು ಇಬ್ಬರು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿದ್ದಕ್ಕಾಗಿ ಅಭಿನಂದಿಸಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವ್ಯವಸ್ಥಿತ, ನಿರಂತರ ಕಲಿಕೆ ಜೀವನದಲ್ಲಿ ಉತ್ತಮ ಮಾರ್ಗದರ್ಶನ ಆಗುತ್ತದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ ಬಿ ಬಳಗಾರ ಮಾತನಾಡುತ್ತ, ಮೊದಲು ಹಳ್ಳಿಗಳ ಶ್ರೀಮಂತಿಕೆಯನ್ನು ಅಲ್ಲಿಯ ಒಕ್ಕಲುತನದಿಂದ ಅಳೆಯುತ್ತಿದ್ದರು. ಈಗ ಕಾಲ ಬದಲಾಗಿದೆ ಗ್ರಾಮದಲ್ಲಿ ಎಷ್ಟು ಜನ ಉನ್ನತ ಪದವಿ ಸಂಪಾದಿಸಿದ್ದಾರೆ ಎಂಬುದನ್ನು ಗಮನಿಸುವ ಕಾಲ ಬಂದಿದೆ. ಸುಲಧಾಳ ಗ್ರಾಮದಲ್ಲಿ ಒಂದೇ ವರ್ಷದಲ್ಲಿ ಐದು ಜನ ಪಿ.ಎಚ್.ಡಿ ಸಂಪಾದನೆ ,ಇಬ್ಬರು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದು ಗ್ರಾಮೀಣ ಪ್ರತಿಭೆಗಳು ನಗರವಾಸಿಗಳಿಗಿಂತ ಹಿಂದೆ ಬಿದ್ದಿಲ್ಲ ಎಂಬುದನ್ನು ತೋರಿಸುತ್ತದೆ. ಯುವಕರು ಸತತ ಪ್ರಯತ್ನಶೀಲರಾಗಿ ಸಮಾಜದ ಉನ್ನತಿಗೆ ಶ್ರಮಿಸಬೇಕೆಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಸನ್ಮಾನಿತ ಪ್ರತಿಭೆಗಳಾದ ಡಾ. ಶ್ರೀಕಾಂತ್ ಮೋದ್ಗಿ,ಡಾ. ಕೆಂಚಪ್ಪ ಬೆಟಗೇರಿ,ಡಾ ಆನಂದ್ ಕುಮಾರ್ ಜಕ್ಕಣ್ಣವರ.ಡಾ. ಗೀತಾಂಜಲಿ ಮುದಕವಿ.ಡಾ. ಸುನಿಲ್ ಕುಮಾರ್ ಜಾಬಗೌಡರ ಮತ್ತು ಅಭಿಷೇಕ್ ಕಿಲಾರಿ, ರಾಜೇಶ್ ಉದ್ದಾನಾಯಕ್ ತಮ್ಮ ಅನುಭವ ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯರಾದ ಬಾಳಗೌಡ ಪಾಟೀಲರು ವಹಿಸಿದ್ದರು. ಆರ್ ವೈ ಸನದಿ ಸ್ವಾಗತಿಸಿದರು. ಎಂ ಆರ್ ಬಾಗೇವಾಡಿ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಪ್ರೊ. ಬಸವರಾಜ್ ಕೊಳವಿ ಪ್ರತಿಭೆಗಳ ಪ್ರತಿಭೆಗಳನ್ನು ಪರಿಚಯಿಸಿದರು. ಎ.ಕೆ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಂ ಬಿ ಮುಸಲ್ಮಾರಿ ವಂದನಾರ್ಪಣೆ ಮತ್ತು ಸುರೇಶ್ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ಜಿ ಆರ್ ಸನದಿ, ಆರ್ ಎಂ ತೇಲಿ ಮುಂತಾದವರು ಭಾಗವಹಿಸಿದ್ದರು.