spot_img
spot_img

ಗುರುಹಿರಿಯರ ಆಸ್ತಿ ಬೇಕೋ, ಆರೋಗ್ಯವೋ?

Must Read

- Advertisement -

ಹಿರಿಯರ ಆಸ್ತಿಯಲ್ಲಿ ನ್ಯಾಯವಾಗಿ ನಮಗೆ ಬರುವ ಪಾಲನ್ನು ಪಿತೃಗಳ ಆಶೀರ್ವಾದ ಎಂದು ಪಡೆದು ಅವರ ಹೆಸರಲ್ಲಿ ಧರ್ಮ ಕಾರ್ಯ ನಡೆಸುತ್ತಿದ್ದರೆ ಯಾವುದೇ ಸಮಸ್ಯೆಗೆ ಅವಕಾಶವಿರುವುದಿಲ್ಲ.

ಬಂದರೂ ಪರಿಹಾರ ನಮ್ಮೊಳಗೆ ನಮ್ಮ ಹತ್ತಿರವೆ ಇರುತ್ತದೆ. ಆದರೆ ಆಸ್ತಿಗಾಗಿ ಹೋರಾಟ ಮಾಡಿ, ಮನೆಯವರನ್ನೇ ದ್ವೇಷ ಮಾಡುತ್ತಾ ಮುಂದೆ ನಡೆದರೆ ಆಪತ್ತು ಕಟ್ಟಿಟ್ಟ ಬುತ್ತಿ. ಇದು  ಮಕ್ಕಳು ಮೊಮ್ಮಕ್ಕಳವರೆಗೆ ಹೋಗುವ ಮೊದಲು ಎಚ್ಚರವಾಗಿ ತಿರುಗಿ ಬಂದು ಆಸ್ತಿಯನ್ನು ದಾನ ಧರ್ಮಕ್ಕೆ ಬಳಸಿದರೆ ಪರಿಹಾರವಿದೆ.

ನಾವು ಈಗ ಕಾಣುತ್ತಿರುವುದು ಅಪ್ಪನ ಆಸ್ತಿಯನ್ನು ಬಳಸಿಕೊಂಡು ಮಕ್ಕಳು ತಮ್ಮ ಕಾಲಮೇಲೆ ನಿಲ್ಲುವ ಶಿಕ್ಷಣ ಪಡೆಯಬಹುದು. ಆದರೆ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಕ್ಕಿ ಅಪ್ಪನ  ಮೂಲ ಕರ್ಮ ಬಿಟ್ಟು ಹೊರಗೆ ನಡೆದ ಮೇಲೆ ಅವನ ಸಂಸಾರಕ್ಕೆ ಬೇಕಾದಷ್ಟು ದುಡಿದು ಗಳಿಸಿ ತನ್ನ ಮಕ್ಕಳನ್ನು ಸಾಕಿ ಸಲಹಿ ಶಿಕ್ಷಣ ನೀಡಿ ಅವರೂ ಉತ್ತಮ ಉದ್ಯೋಗ ಪಡೆದು ಸ್ವತಂತ್ರ ಜೀವನ  ನಡೆಸುತ್ತಿದ್ದರೂ ಕೊನೆಯಲ್ಲಿ ಪಿತ್ರಾರ್ಜಿತ ಆಸ್ತಿ ಮಕ್ಕಳು ಮೊಮ್ಮಕ್ಕಳವರೆಗೆ ಹಂಚುತ್ತಾರೆ.

- Advertisement -

ಆದರೆ ಅವರ ಧರ್ಮ ಕರ್ಮ, ಶಿಕ್ಷಣ,ಶಾಸ್ತ್ರ, ಸಂಪ್ರದಾಯ ದೇವರನ್ನು ಮರೆತು ಕೇವಲ ಹಣ ಆಸ್ತಿ ಪಡೆದರೆ ಇದರ ಪ್ರತಿಫಲವೆ ರೋಗ. ಇಲ್ಲಿ ರೋಗ ನಿವಾರಣೆಗೆ ಧಾರ್ಮಿಕ ಕಾರ್ಯ ನಡೆಸಿದರೂ ಅದರಲ್ಲಿಯೂ ನಮ್ಮದೆ ಹಣ ಎನ್ನುವ ಅಹಂಕಾರ, ಸ್ವಾರ್ಥವಿದ್ದು ನಂತರದ ದಿನಗಳಲ್ಲಿ ಸಮಸ್ಯೆ ಇನ್ನೂ  ಹೆಚ್ಚುತ್ತದೆ.

ಹೀಗಾಗಿ ಯಾರೇ ಆಗಲಿ ಆಸ್ತಿಗಾಗಿ ಹೋರಾಟ ನಡೆಸುವಾಗ ಅಗತ್ಯಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಬೇಕಿದೆ. ಸಾಧ್ಯವಾದರೆ ಧರ್ಮ ಕಾರ್ಯಕ್ಕೆ ಬಳಸಿದರೆ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಇಲ್ಲವಾದರೆ ಬಳಸಿದವರ ಜೀವನದಲ್ಲಿ ಅಶಾಂತಿ,ರೋಗ, ದ್ವೇಷ, ಕ್ರಾಂತಿ ಬೆಳೆಯುತ್ತದೆ. ಮಾನವನಿಗೆ ಕಾಡುತ್ತಿರುವ ಋಣಭಾಧೆಯೇ ಎಲ್ಲಾ ಸಮಸ್ಯೆಗಳಿಗೆ ಕಾರಣ.

ಇದು ಒಳಗಿರಬಹುದು ಹೊರಗಿರಬಹುದು ತೀರಿಸದೆ ಮುಕ್ತಿ ಇಲ್ಲ. ಅವರವರು ಪಡೆದು ಬಂದಷ್ಟೇ ಸಿಗೋದು.ಎಷ್ಟು ಧರ್ಮದಿಂದ ಗಳಿಸಿರುವೆವೋ ಅಷ್ಟು ಶಾಂತಿಸಿಗುವುದು. ಅದರಲ್ಲಿ ಬ್ರಾಹ್ಮಣನಿಗೆ ಜ್ಞಾನವೇ ಆಸ್ತಿ. ಕಾಲಪ್ರಭಾವ ಬ್ರಾಹ್ಮಣ ಕುಟುಂಬದಲ್ಲಿ ಹಣವಿದ್ದರೆ ಹೆಣ್ಣಿನಲ್ಲಿ ಗುಣದಕೊರತೆ. ಗುಣವಿದ್ದವರಿಗೆ ಹಣದ ಕೊರತೆ.

- Advertisement -

ಹೀಗಾಗಿಯೇ ಹಿಂದೆ ಬಡವರ ಮನೆಯ ಹೆಣ್ಣನ್ನು ಶ್ರೀಮಂತ ಗಂಡಿಗೆ ಕೊಟ್ಟು ಮದುವೆ ಮಾಡಬೇಕೆಂದಿದ್ದರು.ಹೇಗೋ ತವರಿನ ಆಸ್ತಿ ಇಲ್ಲದ ಕಾರಣ ಗಂಡನ ಮನೆಯವರ ಆಸ್ತಿ ಸದ್ಬಳಕೆ ಮಾಡಿಕೊಂಡು ಹೋಗುವ ಜ್ಞಾನವಿತ್ತು ಆದರೆ ಈಗ ಗಂಡು ಹೆಣ್ಣಿನ ಆಸ್ತಿ ಎಷ್ಟಿದೆ? ಎಷ್ಟು ಒಡವೆ ಹಾಕಿದ್ದಾರೆ? ಎಷ್ಟು ಸುಂದರವಾಗಿದ್ದಾಳೆ ಎನ್ನುವ ಮಟ್ಟಿಗೆ ಬಂದಿರೋದರಿಂದಲೇ ಗಂಡಸರನ್ನು ಆಳೋ ಹಾಗಾಗಿದೆ.

ಇಲ್ಲಿ ಯಾರಿಗೆ ಯಾರೂ ಆಳಲ್ಲ. ಅರಸರಲ್ಲ. ಭೂಮಿ ಮೇಲಿನ ಋಣಸಂದಾಯ ಮಾಡೋದಕ್ಕೆ ಋಣಸಂಬಂಧ ಬೆಳೆಯುತ್ತದೆ ಇದನ್ನು ಅರ್ಥ ಮಾಡಿಕೊಂಡು ಧರ್ಮದಿಂದ ತೀರಿಸುವ ಜ್ಞಾನ ಬೇಕಷ್ಟೆ. ಜ್ಞಾನದಿಂದ ಹಣಸಂಪಾದಿಸಿ ದಾನ,ಧರ್ಮ ಕಾರ್ಯ ನಡೆಸಲು ಸಹಕರಿಸಿದರೆ ಆಸ್ತಿ ನಮ್ಮ ದೇಹವಾಗಿರುತ್ತದೆ.

ದೇಹ ಹೋದ ಮೇಲೆ ಋಣ ಕಳೆದಂತೆ ಅಲ್ಲವೆ? ಮಕ್ಕಳು ಮೊಮ್ಮಕ್ಕಳವರೆಗೆ ಆಸ್ತಿ ಮಾಡಬೇಡಿ. ಅವರ ಪಾಲಿನ ಆಸ್ತಿ ಅವರೆ ಮಾಡಿಕೊಂಡು ಜೀವನ ನಡೆಸೋ ಜ್ಞಾನ ನೀಡಿ ಬೆಳೆಸಿ ಆಗ ದೇಶದ ಆಸ್ತಿ ಆಗುತ್ತಾರೆ. ಯಾರ ಪಾಲನ್ನೋ ಯಾರೋ ಬಳಸಲಾಗೋದಿಲ್ಲ. ಪಾಲಿಗೆ ಬಂದದ್ದಷ್ಟೆ ಪಂಚಾಮೃತ ಎನ್ನುತ್ತಾರೆ. ಹೆಚ್ಚಾದರೆ ಅಮೃತವೂ ವಿಷ ಆಗುತ್ತದೆ. ಹಿಂದಿನ ಕಾಲದಂತೆ ಹೆಚ್ಚು ಸಂತಾನವಿಲ್ಲ. ಆದರೆ ಆಸ್ತಿ ಹೆಚ್ಚಾಗಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಜ್ಞಾನವಿಲ್ಲದೆ ಇನ್ನಷ್ಟು ಮತ್ತಷ್ಟು ಭ್ರಷ್ಟರಿಗೆ ಸಹಕಾರ ನೀಡುತ್ತಾ ಸರ್ಕಾರದ ಸಾಲ,ಸೌಲಭ್ಯಗಳನ್ನು ಉಚಿತವಾಗಿ ಪಡೆದರೆ ತೀರಿಸಲು ಅಸಾಧ್ಯ.

ಒಳಗಿನದ್ದೇ ಋಣ ಹೆಚ್ಚಿರುವಾಗ ಹೊರಗಿನ ಋಣ ಸೇರಿಸಿಕೊಂಡರೆ ಅದನ್ನು ತೀರಿಸಲು ಆಳಾಗಿ ಬರಬೇಕು. ಆಳಾಗೋದು ಪರಮಾತ್ಮನಿಗೆ ಆದರೆ ದಾಸ ಶರಣರಂತಿರಬೇಕಿತ್ತು. ಇವರಲ್ಲಿ ಜ್ಞಾನವಿತ್ತು. ಭಕ್ತಿ, ಶ್ರದ್ದೆ, ಪ್ರೀತಿ, ವಿಶ್ವಾಸದಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದಿತ್ತು.

ಶಾಸ್ತ್ರ ಪುರಾಣಗಳನ್ನು ಮಾನವ ಬೆಳೆಸಿರೋದು. ಇದು ಮಾನವೀಯತೆಯನ್ನು ಹೆಚ್ಚಿಸಿ ಸಮಾನತೆಯ ದಾರಿ ಹಿಡಿದಾಗಲೇ ಧರ್ಮ ರಕ್ಷಣೆ ಆಗುತ್ತದೆ. ಇದರಿಂದಲೇ ಅಧರ್ಮ ಸೃಷ್ಟಿ ಆಗಿ ಮಾನವ ಕರ್ಮದಿಂದ ದೂರ ಉಳಿದರೆ ಋಣ ತೀರಿಸಲಾಗದು. ಒಟ್ಟಿನಲ್ಲಿ ಭೂಮಿಯ ಮೇಲಿರುವ ಆಸ್ತಿ ಶಾಶ್ವತವಲ್ಲ, ದೇಹ ಶಾಶ್ವತವಲ್ಲ, ಒಳಗಿರುವ ಜ್ಞಾನ, ಧರ್ಮ ಕರ್ಮ ಆತ್ಮಶಕ್ತಿ ಶಾಶ್ವತ. ಹೆಚ್ಚು ಮಕ್ಕಳಿದ್ದರೆ ಆಸ್ತಿ ಕಡಿಮೆ ಪಾಲು ಸಿಗುತ್ತದೆ. ಹಾಗೆ ಹಿರಿಯರ ಋಣವೂ ಹಂಚಿಹೋಗುತ್ತದೆ.

ಒಂದು ಎರಡು ಮಕ್ಕಳಿಗೆ ಅತಿಯಾದ ಆಸ್ತಿ ಮಾಡಿ ಹೋದರೆ ಋಣ ತೀರಿಸಲು ಸಾಧ್ಯವೆ? ಇಲ್ಲಿ ಯಾವುದು ಶಾಶ್ವತ? ಆಸ್ತಿ ಬೇಕೋ ಆರೋಗ್ಯವೋ? ತೀರ್ಮಾನ ಮಾಡಬೇಕಿದೆ. “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದಿರೋದು ಇದಕ್ಕೆಯೆ?


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಮೂಡಲಗಿಯಲ್ಲಿ ಸ್ವಚ್ಛತೆ ಮಾಯ ; ಎಲ್ಲೆಡೆ ಕಂಗೊಳಿಸುತ್ತಿವೆ ತಿಪ್ಪೆಗಳು !

ಮೂಡಲಗಿ - ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಸ್ವಚ್ಛ ಭಾರತ ಅಭಿಯಾನವೆಂಬುದು ಕಾಣೆಯಾಗಿದ್ದು ನಗರದ ಎಲ್ಲೆಡೆ ಕಸ, ಕಡ್ಡಿ, ತಿಪ್ಪೆಗಳು ಕಂಗೊಳಿಸುತ್ತಿವೆ. ಇದರಿಂದ ನಗರದ ತುಂಬೆಲ್ಲ ಸೊಳ್ಳೆಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group