ಬೀದರ: ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳೆದು ನಿಂತ ಜೋಳದ ಬೆಳೆ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಕಂಗಾಲಾಗಿ ಹೋಗಿದ್ದಾನೆ.
ರಾಶಿ ಮಾಡುವ ಸಂದರ್ಭದಲ್ಲಿಯೇ ಅಕಾಲಿಕ ಮಳೆ ಸುರಿದು ಭಾರೀ ಅನಾಹುತ ಮಾಡಿದೆ. ಭಾಲ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊಟಗ್ಯಾಳ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಬೆಳೆದು ನಿಂತ ಜೋಳ ನೆಲ ಸಮವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಡೀ ರಾತ್ರಿ ಸುರಿದ ಭಾರಿ ಮಳೆಯಿಂದ ನಗರದಾದ್ಯಂತ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಚರಂಡಿ ಇಲ್ಲದೆ ನಗರದಲ್ಲಿ ರಸ್ತೆಗಳ ಮೇಲೆ ಹರಿದು ಹೋಗುತ್ತಿರುವ ನೀರಿನಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ರಣ ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದ ಬೀದರ್ ಜನರಿಗೆ ಮಳೆರಾಯ ತಂಪು ತಂದನಾದರೂ ಇಡೀ ರಾತ್ರಿ ಸುರಿಯುತ್ತ ಕಂಟಕವಾಯಿತು.
ನಗರದ ಹಲವು ಪ್ರದೇಶದಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ಕೇಂದ್ರ ಬಸ್ ನಿಲ್ದಾಣ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ನಗರದ ಕೆಲವು ಪ್ರದೇಶದಲ್ಲಿ ಕಟ್ಟಡಗಳ ಮೇಲ್ ಚಾವಣಿ ಕುಸಿದು ಒಂದು ಕಾರು ಜಖಂಗೊಂಡಿದೆ. ನಗರದ ಪ್ರಮುಖ ರಸ್ತೆಯಲ್ಲಿ ಮಳೆ ನೀರು ತುಂಬಿ ತುಳುಕುತ್ತಿದೆ.
ವರದಿ: ನಂದಕುಮಾರ ಕರಂಜೆ, ಬೀದರ