ಹೊಸದಿಲ್ಲಿ – ತನ್ನ ಮೇಲೆ ನಡೆದ ಹಲ್ಲೆಯ ಕುರಿತಂತೆ ಭಾರತೀಯ ಜನತಾ ಪಕ್ಷ ಯಾವುದೇ ರಾಜಕೀಯ ಮಾಡಬಾರದು ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಹೇಳಿದ್ದಾರೆ
ತನ್ನದೇ ಪಕ್ಷದ ರಾಜ್ಯ ಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲೆ ಆಪ್ ಮುಖಂಡ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತನೊಬ್ಬ ಪಕ್ಷದ ಕಚೇರಿಯಲ್ಲಿ ಹಲ್ಲೆ ಮಾಡಿದ ಆರೋಪದ ಬಗ್ಗೆ ತನಿಖೆ ಮಾಡುತ್ತಿರುವ ದೆಹಲಿ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಈ ಮಧ್ಯೆ ಒಬ್ಬ ಮಹಿಳಾ ಸಂಸದೆಯ ಮೇಲೆ ಹಲ್ಲೆಯಾಗಿರುವ ಬಗ್ಗೆ ತುಟಿ ಬಿಚ್ಚದ ಆಪ್ ಮುಖ್ಯಮಂತ್ರಿ ಕೇಜ್ರಿವಾಲರ ಮೌನದ ಕುರಿತು ಭಾರತೀಯ ಜನತಾ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು ಕೇಜ್ರಿವಾಲ್ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದೆ.
ಇತ್ತ ರಾಷ್ಟ್ರೀಯ ಮಹಿಳಾ ಆಯೋಗವು ಕೇಜ್ರಿವಾಲ ಅವರ ಆಪ್ತ ಕಾರ್ಯದರ್ಶಿ ವೈಭವ ಕುಮಾರ ಅವರಿಗೆ ಸಮನ್ಸ್ ನೀಡಿದ್ದು ಶುಕ್ರವಾರ ಆಯೋಗದ ಮುಂದೆ ಹಾಜರಾಗಲು ತಿಳಿಸಿದೆ.
ಹಲ್ಲೆಗೊಳಗಾಗಿರುವ ಸ್ವಾತಿ ಮಲಿವಾಲ್ ಕೂಡ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ತಾನು ತನಿಖಾ ಸಂಸ್ಥೆಯೆದುರು ತನ್ನ ಹೇಳಿಕೆ ದಾಖಲಿಸಿದ್ದು ಈ ಬಗ್ಗೆ ಬಿಜೆಪಿ ರಾಜಕಾರಣ ಮಾಡಬಾರದು ಎಂದಿದ್ದಾರೆ.