ಸಿಂದಗಿ; ಪ್ರವರ್ತಕ ಸಮಾಜ ಸುಧಾರಕರಾಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ಆಧುನಿಕ ಭಾರತದ ಸಮ ಸಮಾಜದ ನಿರ್ಮಾತೃ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.
ತಾಲೂಕಿನ ಗಣಿಹಾರ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡ ವಿಶ್ವರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ೧೩೪ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಶೋಷಿತ ಸಮುದಾಯದಲ್ಲಿ ಹುಟ್ಟಿ, ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ವಿರುದ್ದ ಬಹುದೊಡ್ಡ ಕ್ರಾಂತಿಕಾರಿ ಚಳವಳಿ ಆರಂಭಿಸಿದ್ದಲ್ಲದೇ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಹಗಲು ರಾತ್ರಿ ಶ್ರಮಿಸಿ ಮನುಕುಲ ಒಂದೇ ಎಂಬ ಆಶಯದೊಂದಿಗೆ ವಿಶ್ವದ ಅತಿದೊಡ್ಡ ಸಂವಿಧಾನ ರಚನೆ ಮಾಡುವ ಮೂಲಕ ಸರ್ವ ಜನರ ಒಳಿತಿಗಾಗಿ ಜನಿಸಿದ ಮಹಾನ್ ಸಂತ ಡಾ.ಬಾಬಾಸಾಹೇಬ ಅಂಬೇಡ್ಕರರು ಎಂದರು.
ಶಿಕ್ಷಕ ಸಿದ್ದಲಿಂಗ ಚೌಧರಿ ಮಾತನಾಡಿ, ಸಂವಿಧಾನ ಓದಿದರೆ ಬಾಬಾಸಾಹೇಬ ಅಂಬೇಡ್ಕರ ಅವರು ಅರ್ಥವಾಗುತ್ತಾರೆ. ಜಾತಿ, ಧರ್ಮಗಳಾಚೆ ಮಾನವ ಧರ್ಮ ನಿರ್ಮಿಸಬೇಕಾಗಿದೆ. ಶರಣರು, ಸಂತರು ಮತ್ತು ಧಾರ್ಶನಿಕರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಆ ಮೂಲಕ ವರ್ಗರಹಿತ, ಜಾತಿ ರಹಿತ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.
ವಿಜ್ಞಾನ ಶಿಕ್ಷಕಿ ಪುಷ್ಪ ಸಂಕನಾಳ ಅವರು ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಸಾಕ್ಷರತೆ ಅವಶ್ಯ. ಶಿಕ್ಷಣ ಕೊಡಿಸುವ ಮೂಲಕ ಮಹಿಳಾ ಸಬಲೀಕರಣ ಮಾಡಬೇಕಾಗಿದೆ. ನಮ್ಮ ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಂಡು ಬುದ್ಧ, ಬಸವ ಮತ್ತು ಡಾ. ಅಂಬೇಡ್ಕರರ ತತ್ವಾದರ್ಶಗಳಲ್ಲಿ ನಡೆಯಬೇಕಾಗಿದೆ. ಆಗಲೇ ಬಾಬಾಸಾಹೇಬರ ಪ್ರಬುದ್ಧ ಭಾರತದ ಕನಸು ನನಸಾಗಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸಿ.ಎಂ ಮೇತ್ರಿ, ಶಿಕ್ಷಕರಾದ ಆರ್ ಜಿ ಬಿರಾದಾರ, ಪಿ ಎಸ್ ಅಗ್ನಿ, ಎಸ್.ಬಿ ಬಿರಾದಾರ, ಎಚ್.ವಿ ಮುಲ್ಲಾ, ಕೆ.ಜಿ ಹತ್ತಳ್ಳಿ, ಸಿ.ಎಸ್ ಬೊಮ್ಮಣ್ಣಿ, ಎಂ.ಎ ಕುಡುಚಿ, ಜಿ.ಎ ಮುಲ್ಲಾ, ಎಸ್.ಬಿ ಬಿರಾದಾರ, ಎನ್.ಎಲ್ ಟ್ರೈಲರ, ಎಸ್.ಜಿ ನಾಟಿಕರ, ಬಿ.ಕೆ ಹಳ್ಳಿ, ಆರ್.ಎಸ್ ಪಟ್ಟಣಶೆಟ್ಟಿ, ಪ್ರಕಾಶ, ಸುಷ್ಮಾ, ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.