ರಸ್ತೆ ಗುಂಡಿ ಮುಚ್ಚಿದರೆ ಸಮಸ್ಯೆ ಹೆಚ್ಚುತ್ತದೆಯಂತೆ ! ; ವಿಡಿಯೋ ವೈರಲ್
ಬೀದರ – ಗಡಿ ಬೀದರ ಜಿಲ್ಲೆಯಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ರಸ್ತೆಗಳು ಹದಗೆಟ್ಟು ಹೈದರಾಬಾದ್ ಆಗಿವೆ. ರಸ್ತೆಗಳಲ್ಲಿ ನೀರು ನಿಂತು ಎಲ್ಲಿ ತಗ್ಗಾಗಿದೆ, ಎಲ್ಲಿ ಸಮವಾಗಿದೆ ಎನ್ನುವದೇ ತಿಳಿಯದಂಥ ಅಯೋಮಯ ಪರಿಸ್ಥಿತಿ ಇದೆ. ಇಂಥದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಳೆ ಬೀದರಗೆ ಆಗಮಿಸುತ್ತಿದ್ದರಿಂದ ರಸ್ತೆಗಳಿಗೆ ತೇಪೆ ಹಾಕುವ ಕೆಲಸ ಜೋರಾಗಿದೆ.
ನಗರದ ಕೆಲವು ಪ್ರಮುಖ ರಸ್ತೆಗಳು ಮಳೆಯಿಂದ ಕೊಚ್ಚಿಕೊಂಡು ಹೋಗಿ ರಸ್ತೆಗಳು ಮಂಗಮಾಯವಾಗಿವೆ. ಪ್ರಯಾಣಿಕರ ಸಂಕಷ್ಟ ಈ ರಾಜಕಾರಣಿಗಳು ಮತ್ತು ಮಹಾನಗರಸಭೆಯ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ. ಹದಗೆಟ್ಟ ರಸ್ತೆಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತ ಸಾರ್ವಜನಿಕರು ತಿರುಗಾಡುವಂತಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ನಾಳೆ ಬೀದರ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ.
ಇದೆಲ್ಲದರ ನಡುವೆಯೇ ವಿಡಿಯೋ ಒಂದು ಹರಿದಾಡುತ್ತಿದ್ದು, ಅದರಲ್ಲಿ ಹಾಳಾದ ರಸ್ತೆಗಳು ನಿರುದ್ಯೋಗ ಸಮಸ್ಯೆಗೆ ಪರಿಹಾರವೆಂದು ಹೇಳಲಾಗುತ್ತಿದೆ.
ಭೀಕರವಾಗಿ ತಗ್ಗು ದಿನ್ನೆಗಳಲ್ಲಿಯೇ ಸಾಗುವ ಜನಕ್ಕೆ ವ್ಯಕ್ತಿಯೊಬ್ಬ ಹೇಳುತ್ತಾನೆ….ಅರೆ, ಈ ರಸ್ತೆಗಳ ರಿಪೇರಿ ಯಾಕೆ ಆಗಬೇಕು ? ಇವು ರಿಪೇರಿಯಾದರೆ ಸಮಸ್ಯೆ ಹೆಚ್ಚಾಗುತ್ತದೆ. ಯಾಕೆಂದರೆ ಹಾಳಾದ ರಸ್ತೆಯಿಂದ ಬಟ್ಟೆ ಹೊಲಸಾದರೆ ಧೋಬಿಗೆ ಕೆಲಸ, ಪ್ಯಾಂಟ್ ಹರಿದರೆ ಟೇಲರ್ ಗೆ ಕೆಲಸ, ಚಪ್ಪಲಿ ಹರಿದರೆ ಮೋಚಿಗೆ ಕೆಲಸ, ಗಾಡಿಗಳ ಟೈರ್ ಹರಿದರೆ ಪಂಕ್ಚರ್ ಹಾಕುವವನಿಗೆ ಕೆಲಸ, ಈ ತಗ್ಗುಗಳಿಂದಾಗಿ ಅಪಘಾತವಾದರೆ ಡಾಕ್ಟರ್ ಗೆ ಉದ್ಯೋಗ ಸಿಗುತ್ತದೆ….ಆದ್ದರಿಂದ ಈ ತಗ್ಗುಗಳನ್ನು ಮುಚ್ಚಿದರೆ ಸಮಸ್ಯೆ ಆಗುತ್ತದೆ ! ಎಂಬ ವಿಡಿಯೋ ಹರಿದಾಡುತ್ತ ಪರಿಸ್ಥಿತಿಯ ವ್ಯಂಗ್ಯ ಮಾಡುವಂತಿದೆ.
ಮುಖ್ಯ ಮಂತ್ರಿ ಪ್ರವಾಸದ ಕಾರ್ಯಕ್ರಮದ ಸಂಕ್ಷಿಪ್ತ ವರದಿ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್ 18ರಂದು ಬೀದರ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಬೆಳಿಗ್ಗೆ 10.40ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಬೀದರ್ ವಿಮಾನ ನಿಲ್ದಾಣಕ್ಕೆ ಬರುವರು. ಬೆಳಿಗ್ಗೆ 11.05ಕ್ಕೆ ಹೆಲಿಕಾಪ್ಟರ್ ಮೂಲಕ ಔರಾದ್ ತಾಲ್ಲೂಕಿನ ಬಲ್ಲೂರು(ಜೆ) ಗ್ರಾಮಕ್ಕೆ ಬಂದು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೊ ಕೆಮಿಕಲ್ ಎಂಜಿನಿಯರಿಂಗ್ ಹಾಗೂ ಟೆಕ್ನಾಲಾಜಿ (ಸಿಪೆಟ್) ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸುವರು.
ಬೆಳಿಗ್ಗೆ 11.30ಕ್ಕೆ ಹೆಲಿಕಾಪ್ಟರ್ ಮೂಲಕ ಔರಾದ್ ಪಟ್ಟಣದ ತಾಲ್ಲೂಕು ಕ್ರೀಡಾಂಗಣಕ್ಕೆ ಆಗಮಿಸಿ ಮಧ್ಯಾಹ್ನ 12ಕ್ಕೆ ಬಿಜೆಪಿ ವತಿಯಿಂದ ಆಯೋಜಿಸಿರುವ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವರು.
ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್ ಮೂಲಕ ಹುಮನಾಬಾದ್ನ ಮಾಣಿಕ ಪ್ರಭು ಶಾಲಾ ಮೈದಾನಕ್ಕೆ ಬಂದು ಅಲ್ಲಿಂದ ಹುಮನಾಬಾದ್ ತೇರು ಮೈದಾನದಲ್ಲಿ ಆಯೋಜಿಸಿರುವ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವರು.
ಸಂಜೆ 5.20ಕ್ಕೆ ಹೆಲಿಕಾಪ್ಟರ್ ಮೂಲಕ ಕಲಬುರಗಿಯ ಪೊಲೀಸ್ ಪರೇಡ್ ಮೈದಾನಕ್ಕೆ ತೆರಳಿ, ಅಲ್ಲಿಯ ಐವಾನ್ ಷಾಹಿಯಲ್ಲಿ ವಾಸ್ತವ್ಯ ಮಾಡುವವರು.
ವರದಿ: ನಂದಕುಮಾರ ಕರಂಜೆ, ಬೀದರ