ಬೀದರ: ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ಮತ್ತೆ ಬಾರಿ ಚರ್ಚೆಗೆ ಒಳಗಾಗಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಅವಧಿಯಲ್ಲಿ ನೂತನ ಅನುಭವ ಮಂಟಪಕ್ಕೆ ಅಡಿಗಲ್ಲು ಹಾಕಿ, 200 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದರು.ಆದರೆ ರಾಜ್ಯ ಸರ್ಕಾರ ಈವರೆಗೂ ಈ ಯೋಜನೆ ಪೂರ್ಣಗೊಳಿಸಲು ಆಗಿಲ್ಲ ಎಂದು ಪದೇ ಪದೇ ರಾಜ್ಯ ಸರ್ಕಾರದ ಮೇಲೆ ಪ್ರತಿಪಕ್ಷದವರು ಆರೋಪ ಮಾಡಿದ್ದರು.
ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 9 ರಂದು ಬಸವಕಲ್ಯಾಣ ಪ್ರವಾಸ ಕೈಗೊಂಡಿದ್ದು ವಿರೋಧ ಪಕ್ಷದ ಬಾಯಿ ಮುಚ್ಚಿಸಲು ಅನುಭವ ಮಂಟಪದ ಕಾಮಗಾರಿಗೆ ವೇಗ ಸಿಗಲಿದೆಯೆಂಬ ನಿರೀಕ್ಷೆಗಳು ಜೋರಾಗಿವೆ.
ಬೊಮ್ಮಾಯಿಯವರು ಎಪ್ರಿಲ್ 9 ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸುವರು ಹಾಗೂ ಇತರೆ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ.
ನಗರದ ತೇರು ಮೈದಾನದಲ್ಲಿ ಹಾಗೂ ಡಾ.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಮಾರಂಭದ ಸಿದ್ಧತೆ ಪರಿಶೀಲಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಬೀದರ್ನಿಂದ ಆಗಮಿಸುವ ಮುಖ್ಯಮಂತ್ರಿಯವರು ಇಲ್ಲಿ ₹600 ಕೋಟಿಯ ನೂತನ ಅನುಭವ ಮಂಟಪ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಸುಂದರ ಹಾಗೂ ಸಾಂಸ್ಕೃತಿಕ ನಗರವನ್ನಾಗಿಸುವ ಯೋಜನೆಯನ್ನು ನಗರದ ತೇರು ಮೈದಾನದಲ್ಲಿನ ಸಭಾ ಭವನದಲ್ಲಿ ಬಿಡುಗಡೆಗೊಳಿಸುವರು. ತಾಲ್ಲೂಕು ಪಂಚಾಯಿತಿಯ ಹೊಸ ಕಟ್ಟಡವನ್ನು ಕೂಡ ಅವರು ಉದ್ಘಾಟಿಸಲಿದ್ದಾರೆ’ ಎಂದರು.
‘ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ವಿನಂತಿಸಿದ್ದಾರೆ.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ತಹಶೀಲ್ದಾರ್ ಸಾವಿತ್ರಿ ಸಲಗರ, ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ, ನಗರಸಭೆ ಆಯುಕ್ತ ಶಿವಕುಮಾರ, ಪ್ರಮುಖರಾದ ರವಿ ಗಾಯಕವಾಡ, ರವಿ ಕೊಳಕೂರ, ರತಿಕಾಂತ ಕೊಹಿನೂರ, ಜ್ಞಾನೇಶ್ವರ ಮುಳೆ, ಸಂಜೀವ ಗಾಯಕವಾಡ, ಲಿಂಗರಾಜ ಶಾಶೆಟ್ಟಿ, ಶಿವರುದ್ರ ತಾಟೆ ಇದ್ದರು.