ಮೂಡಲಗಿ: ಸತೀಶ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸತೀಶ ಜಾರಕಿಹೊಳಿಯವರ ಆಶಯದಂತೆ, ಸತೀಶ ಶುಗರ್ಸ್ ಕಾರ್ಖಾನೆಯು ಪ್ರಾರಂಭದಿಂದಲೂ ಗ್ರಾಮೀಣ ಭಾಗದ ರೈತರು, ಯುವ ಜನತೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜ ಸೇವೆಯಲ್ಲಿ ನಿರತವಾಗಿದೆ, ಆ ನಿಟ್ಟಿನಲ್ಲಿ ಮೂಡಲಗಿ ವಿವಿಧ ಸರ್ಕಾರಿ ಶಾಲೆಗಳಿಗೆ ಶಿಕ್ಷಣದ ಅವಶ್ಯಕ ಪರಿಕರಗಳನ್ನು ಹಾಗೂ ಕಲಿಕಾ ಉಪಕರಣಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ ಎಂದು ಸತೀಶ ಸಮೂಹ ಸಂಸ್ಥೆಯ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಹೇಳಿದರು.
ಅವರು ಮೂಡಲಗಿ ಶೈಕ್ಷಣಿಕ ವಲಯದ ಇಪ್ಪತ್ತು ಸರಕಾರಿ ಶಾಲೆಗಳಿಗಳಿಗೆ 400 ಆಸನಗಳನ್ನು ಹಾಗೂ 20 ಗ್ರೀನ ಬೋರ್ಡ್ಗಳನ್ನು ಸತೀಶ ಶುಗರ್ಸದ ಪ್ರಸಕ್ತ ಸಾಲಿನಲ್ಲಿ ಸಿ.ಎಸ್.ಆರ್ ನಿಧಿಯ ಅಡಿಯಲ್ಲಿ ಬಿ.ಇ.ಒ ಅಜೀತ ಮನ್ನಿಕೇರಿವರಿಗೆ ಹಸ್ತಾಂತರಿಸಿ ಮಾತನಾಡಿ, ಸತೀಶ ಸಮೂಹ ಸಂಸ್ಥೆಯ ವತಿಯಿಂದ ನಾಯಕ ಸ್ಟುಡೆಂಟ್ ಫೆಡರೇಶನ್ ಶಿಕ್ಷಣ ಸಂಸ್ಥೆಯ 16 ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಹಾಗೂ ಸತೀಶ ಶುಗರ್ಸ್ ಅಕೆಡಮಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮತ್ತು ಪದವಿ ಕಾಲೇಜಗಳನ್ನು ನಡೆಸುವ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದೆ. ಪ್ರತಿವರ್ಷ ಸರ್ಕಾರಿ ಶಾಲೆಗಳಿಗೆ ಅವಶ್ಯಕ ಕಟ್ಟಡ, ಉದ್ಯಾನ ಹಾಗೂ ಕಲಿಕಾ ಪರಿಕರಗಳನ್ನು ಪೂರೈಸುತ್ತಿದೆ. ಪ್ರಸ್ತುತ ಸಾಲಿನಲ್ಲಿ ಮಳೆಯ ಅಭಾವವನ್ನು ಗಮನಿಸಿ ಸಮೂಹದ ಅಂಗ ಸಂಸ್ಥೆಯಾದ ಹುದಲಿಯ ಬೆಳಗಾಂ ಶುಗರ್ಸ್ ಕಾರ್ಖಾನೆಯ ವತಿಯಿಂದ ಮೋಡ ಬಿತ್ತನೆ ಕಾರ್ಯವನ್ನು ಮಾಡಲಾಗಿದೆ ಹಾಗೂ ಬೇರೆ ಬೇರೆ ರಂಗಗಳಲ್ಲಿ ಇನ್ನೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಂಸ್ಥೆಯು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಸತೀಶ ಶುಗರ್ಸ್ ಸಂಸ್ಥೆಯು ಹಲವಾರ ವರ್ಷಗಳಿಂದ ಶೈಕ್ಷಣಿಕ ವಲಯಕ್ಕೆ ಸಹಾಯ-ಸಹಕಾರ ನೀಡುತ್ತಿದ್ದು, ಶಿಕ್ಷಣಕ್ಕೆ ಬೇಕಾಗುವ ಅವಶ್ಯಕ ಕಲಿಕಾ ಪರಿಕರಗಳನ್ನು ಪೂರೈಸುವುದರೊಂದಿಗೆ ಕಾರ್ಖಾನೆಯ ಹಂಗಾಮು ಅವಧಿಯಲ್ಲಿ ಹೊರಗಿನ ಪ್ರದೇಶಗಳಿಂದ ಬರುವ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಟೆಂಟ್ ಶಾಲೆಗಳನ್ನು ತೆರೆದುಕೊಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಹಕಾರ ನೀಡುತ್ತಿರುವದನ್ನು ಶಿಕ್ಷಣ ಇಲಾಖೆ ಯಾವಾಗಲೂ ಸ್ಮರಿಸುತ್ತಿದೆ ಎಂದರು.